
ಗುಣ: ಹನುಮಾನ್ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಧ್ಯಪ್ರದೇಶದ ಗುಣದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ, 25 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕಿಶೋರ್ ಕನ್ಯಾಳ್ ಹಾಗೂ ಎಸ್ಪಿ ಸಂಜೀವ್ ಕುಮಾರ್ ಭೇಟಿ ನೀಡಿದ್ದು, ಸ್ಥಳದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಎರಡು ಸಮುದಾಯಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಕೌನ್ಸಿಲರ್ ಗಬ್ಬರ್ ಎಂದೂ ಕರೆಯಲ್ಪಡುವ ಓಂಪ್ರಕಾಶ್ ಕುಶ್ವಾಹ್, ಶನಿವಾರ ಪೊಲೀಸ್ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಸುಮಾರು 25 ಜನರ ಮೇಲೆ ಕೊಲೆ ಯತ್ನ, ಹಲ್ಲೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊರಿಸಲಾಗಿದೆ. ಹನುಮಾನ್ ಜಯಂತಿಯ ಧಾರ್ಮಿಕ ಮೆರವಣಿಗೆ ಸಾಗುವ ವೇಳೆ ಕೆಲವರು ಗುಂಡನ್ನು ಕೂಡ ಹಾರಿಸಿದ್ದಾರೆ ಎಂದು ಅವರು ದೂರಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್ 12 ರಂದು ಅಂದರೆ ನಿನ್ನೆ ಸಂಜೆ 4 ಗಂಟೆಗೆ ಶಿವಾಜಿ ನಗರದ ಮಾತಾ ಮಂದಿರದಿಂದ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಯನ್ನು ಡಿಜೆ ಮುನ್ನಡೆಸಿದರೆ, ಯುವಕರ ಗುಂಪು ಅದರ ಹಿಂದೆ ನೃತ್ಯ ಮಾಡುತ್ತಾ ಸಾಗುತ್ತಿತ್ತು.
ಸಂಜೆ 7:30 ರ ಸುಮಾರಿಗೆ ಮೆರವಣಿಗೆ ಕರ್ನಲ್ಗಂಜ್ ಪ್ರದೇಶವನ್ನು ತಲುಪಿ ಮಸೀದಿಯ ಬಳಿ ನಿಂತಿತು. ಇಲ್ಲಿಯೇ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದೂ ಎರಡೂ ಕಡೆ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಗುಂಪನ್ನು ಚದುರಿಸಿದರು. ಆ ರಾತ್ರಿ ನಂತರ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುನಾ ಎಸ್ಪಿ ಸಂಜೀವ್ ಕುಮಾರ್ ಅವರೊಂದಿಗೆ ಮಾತನಾಡಿ ಘಟನೆಯ ಕುರಿತು ಮಾಹಿತಿ ಪಡೆದರು. ಇತ್ತ ಕಲ್ಲು ತೂರಾಟದ ನಂತರ, ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಹನುಮಾನ್ ಚೌಕ್ನಲ್ಲಿ ಜಮಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಅವರನ್ನು ಕೊತ್ವಾಲಿ ಪೊಲೀಸ್ ಠಾಣೆಗೆ ಹೋಗುವಂತೆ ಮನವೊಲಿಸಿದರು, ನಂತರ ರಸ್ತೆ ತಡೆ ಕೊನೆಗೊಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ