ನಡುನೀರಿನಲ್ಲಿ ಕೈ ಬಿಟ್ಟ ಸಿಧು: ಕೋಪಗೊಂಡ ಕಾಂಗ್ರೆಸ್‌ನಿಂದ ತಿರುಗೇಟು!

By Suvarna NewsFirst Published Sep 29, 2021, 11:59 AM IST
Highlights

* 73 ದಿನಗಳ ಕಾಲ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾದ ನವಜೋತ್ ಸಿಂಗ್ ಸಿಧು ರಾಜೀನಾಮೆ

* ಸಿಧು ನಡೆಗೆ ಕಾಂಗ್ರೆಸ್‌ ಫುಲ್‌ ಗರಂ

* ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ

ಚಂಡೀಗಢ(ಸೆ.29): ಸುಮಾರು 73 ದಿನಗಳ ಕಾಲ ಪಂಜಾಬ್ ಕಾಂಗ್ರೆಸ್(Punjab Congress) ಅಧ್ಯಕ್ಷರಾದ ನವಜೋತ್ ಸಿಂಗ್ ಸಿಧು(Navjot Singh Sidhu), ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆದರೆ ಪಕ್ಷದ ಹೈಕಮಾಂಡ್(Highcommand) ಸಿಧು ಅವರ ಈ ನಿರ್ಧಾರದಿಂದ ತುಂಬಾ ಕೋಪಗೊಂಡಿದೆ. ಮೂಲಗಳ ಪ್ರಕಾರ, ಅವರು ಒಪ್ಪದಿದ್ದರೆ, ಪಕ್ಷದ ನಾಯಕತ್ವವು ಅವರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ 

ಇನ್ನು ಪಕ್ಷದ ಹೈಕಮಾಂಡ್ ಸಿಧುಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ವಲ್ಪ ಸಮಯ ನೀಡುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ಹೈಕಮಾಂಡ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಹುದು. ಚರಣಜಿತ್ ಚನ್ನಿ ಸರ್ಕಾರದ ಕ್ಯಾಬಿನೆಟ್(Cabinet) ಸಭೆ ಇಂದು ಪಂಜಾಬ್ ನಲ್ಲಿ ನಡೆಯಲಿದೆ ಎಂದು ಎನ್ನಲಾಗಿದೆ. ಇದರಲ್ಲಿ ಎಲ್ಲಾ ಮಂತ್ರಿಗಳು ಸಚಿವರು ಹಾಜರಾಗಲಿದ್ದು, ಗೈರಾದವರ ವಿರುದ್ಧ ಪಕ್ಷ ಕಠಿಣ ಕ್ರಮ ತೆಗೆದುಕೊಳ್ಳಬಹುದು.

ಸಿಧು ಜೊತೆಗೆ ಮಾತುಕತೆ ನಿಲ್ಲಿಸಿದ ಹೈಕಮಾಂಡ್

ಮೂಲಗಳ ಪ್ರಕಾರ, ಪಕ್ಷದ ಹೈಕಮಾಂಡ್ ಸಿಧು ಅವರ ಈ ವರ್ತನೆಯಿಂದ ಕೋಪಗೊಂಡಿದೆ. ಇದುವರೆಗೂ ದೆಹಲಿ(Delhi) ಹೈಕಮಾಂಡ್ ಅವರೊಂದಿಗೆ ಮಾತನಾಡಿಲ್ಲ. ಅಲ್ಲದೇ ಸಿಧು ರಾಜೀನಾಮೆಯನ್ನೂ ಅಂಗೀಕರಿಸಿಲ್ಲ ಎಂದು ಹೇಳಲಾಗುತ್ತಿದೆ. ಪಕ್ಷವು ಸಿಧುವನ್ನು ಓಲೈಸುವ ಯತ್ನವನ್ನೂ ಮಾಡುವುದಿಲ್ಲ ಎನ್ನಲಾಗಿದೆ. ಅಲ್ಲದೇ, ಪಂಜಾಬ್‌ನಲ್ಲಿ ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಬಗ್ಗೆಯೂ ಪಕ್ಷವು ಚಿಂತನೆಯನ್ನು ಆರಂಭಿಸಿದೆ. ಇದರಲ್ಲಿ ರವನೀತ್ ಸಿಂಗ್ ಹೆಸರು ಮುಂಚೂಣಿಯಲ್ಲಿದೆ.

ಸಿಎಂ ಚನ್ನಿಗೂ ಗೊತ್ತಿರಲಿಲ್ಲ ಸಿಧು ರಾಜೀನಾಮೆ ಪ್ರಸಂಗ

ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜೋತ್‌ ಸಿಂಗ್‌ ಸಿಧು ಅವರು ಸಲ್ಲಿಸಿದ ರಾಜೀನಾಮೆ ವಿಚಾರ ಅವರ ಆಪ್ತ ಬಳಗದಲ್ಲಿ ಒಬ್ಬರಾದ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೂ ಗೊತ್ತಿರಲಿಲ್ಲವಂತೆ. ಸಿಧು ದಿಢೀರ್‌ ರಾಜೀನಾಮೆ ಬೆನ್ನಲ್ಲೇ ಪ್ರತಿಕ್ರಿಯಿಸಿದ ಚನ್ನಿ ‘ಸಿಧು ಅವರ ರಾಜೀನಾಮೆ ಬಗ್ಗೆ ನನಗೇನೂ ಗೊತ್ತಿಲ್ಲ. ಸಿಧು ಅವರು ನಮ್ಮ ನಾಯಕ ಮತ್ತು ಒಳ್ಳೆಯ ಮುಖಂಡರು. ಸಿಧು ಅವರ ರಾಜೀನಾಮೆ ಬೆಳವಣಿಗೆ ಬಗ್ಗೆ ಏನೂ ಗೊತ್ತಿಲ್ಲದಿದ್ದಾಗ ನಾನೇನು ಹೇಳಲು ಸಾಧ್ಯ? ಎಂದು ಪತ್ರಕರ್ತರಿಗೆ ಪ್ರಶ್ನಿಸಿದ್ದಾರೆ. ಆದಾಗ್ಯೂ, ಸಿಧು ಅವರ ಮೇಲೆ ನನಗೆ ಪೂರ್ತಿ ವಿಶ್ವಾಸವಿದೆ’ ಎಂದು ಹೇಳಿದರು.

ಮುನಿಸಿಗೆ ಕಾರಣವೇನು?:

ಸಿಎಂ ಹುದ್ದೆ ರೇಸಿನಲ್ಲಿ ಸೋತ ಸುಖ್‌ಜಿಂದರ್‌ ರಂಧಾವಾಗೆ ಸಂಪುಟ ವಿಸ್ತರಣೆ ವೇಳೆ ಮಹತ್ವದ ಗೃಹ ಖಾತೆ ನೀಡಿದ್ದು ಸಿಧುರನ್ನು ಸಿಟ್ಟಿಗೇಳಿಸಿದೆ. ಜೊತೆಗೆ ಈ ಹಿಂದೆ ಭ್ರಷ್ಟಾಚಾರದ ಕಾರಣಕ್ಕೆ ಅಮರೀಂದರ್‌ ಸಂಪುಟದಿಂದ ಹೊರಬಿದ್ದಿದ್ದ ಗುರ್ಜೀತ್‌ಸಿಂಗ್‌ಗೆ ಇದೀಗ ಮತ್ತೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಜೊತೆಗೆ ತಮ್ಮ ಮಾತಿಗೆ ಮನ್ನಣೆ ನೀಡದೇ ಎಪಿಎಸ್‌ ಡಿಯೋಲ್‌ಗೆ ಅಡ್ವೋಕೇಟ್‌ ಜನರಲ್‌ ಹುದ್ದೆ ನೀಡಿದ್ದು ಮಾಜಿ ಕ್ರಿಕೆಟಿಗನನ್ನು ಕೆರಳಿಸಿದೆ. ಇದಲ್ಲದೆ ಕೆಲ ದಿನಗಳ ಹಿಂದೆ ತಮ್ಮ ಆಪ್ತ ಕುಲ್ಜೀತ್‌ರನ್ನು ಕಾರ್ಯಾಧ್ಯಕ್ಷ ಹುದ್ದೆಯಿಂದ ತೆಗೆದಿದ್ದು ಹಾಗೂ ತಮಗೆ ದೇಶದ್ರೋಹಿ ಪಟ್ಟಕಟ್ಟಿದ ಅಮರೀಂದರ್‌ ಸಿಂಗ್‌ ಹೇಳಿಕೆಯನ್ನು ಹೈಕಮಾಂಡ್‌ ತಿರಸ್ಕರಿಸದೇ ಹೋದ ವಿಷಯ ಕೂಡಾ ಸಿಧು ಅವರ ಅಸಮಾಧಾನವನ್ನು ಹೆಚ್ಚಿಸಿತ್ತು. ಹೀಗಾಗಿ ಅವರು ಮಂಗಳವಾರ ದಿಢೀರ್‌ ರಾಜೀನಾಮೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.

click me!