
ನವದೆಹಲಿ: ಆಕ್ಸಿಯೋಂ-4 ಮಿಷನ್ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭೂಮಿಗೆ ಬರುವ ದಿನ ಸನ್ನಿಹಿತವಾಗಿದ್ದು, ಜು.14ಕ್ಕೆ ಮುಹೂರ್ತ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಜು.14ರ ಸಂಜೆ 4:35ಕ್ಕೆ ಐಎಸ್ಎಸ್ನಿಂದ ಹೊರಟು, ಜು.15ರಂದು ಮಧ್ಯಾಹ್ನ 3 ಗಂಟೆಗೆ ಕ್ಯಾಲಿಫೋರ್ನಿಯಾದ ಕಡಲತೀರಕ್ಕೆ ಬಂದಿಳಿಯಲಿದ್ದಾರೆ.
ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳಾದ ಪೆಗ್ಗಿ ವಿಟ್ಸನ್, ಸ್ಲಾವೊಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಾಪು ಜೂ.26ರಂದು ಆಕ್ಸಿಯೋಂ-4 ಕಾರ್ಯಾಚರಣೆಯ ಭಾಗವಾಗಿ ಐಎಸ್ಎಸ್ಗೆ ತೆರಳಿದ್ದರು.
7 ದಿನ ಪುನಶ್ಚೈತನ್ಯ ಕಾರ್ಯಕ್ರಮ
ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ ಇಲ್ಲಿನ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಬೇಕಾಗುತ್ತದೆ. ಹಾಗಾಗಿ 7 ದಿನಗಳ ಕಾಲ ತಜ್ಞ ವೈದ್ಯರ ಮೂಲಕ ಪುನಶ್ಚೈತನ್ಯ ಕಾರ್ಯಕ್ರಮ ನಡೆಸಿ, ಭೂಮಿಯ ವಾತಾವರಣಕ್ಕೆ ಅವರ ದೇಹಸ್ಥಿತಿ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ತಾಯಿ ಮಾಡಿದ ಅಡುಗೆ ಸವಿಯಲು ಕಾತರ
ಲಖನೌ: ಐದಾರು ವರ್ಷಗಳಿಂದ ವಿದೇಶದಲ್ಲಿದ್ದ ಕಾರಣ ಮನೆಯೂಟ ಸವಿಯಲು ಸಾಧ್ಯವಾಗಿಲ್ಲ. ಬಾಹ್ಯಾಕಾಶ ಕೇಂದ್ರದಿಂದ ವಾಪಸಾದ ಕೂಡಲೇ ತಾಯಿ ಮಾಡಿದ ಅಡುಗೆ ಸವಿಯಲು ಕಾತರನಾಗಿರುವೆ ಎಂದು ಜು.14ರಂದು ಅಂತರಿಕ್ಷದಿಂದ ವಾಪಸಾಗುತ್ತಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಿಳಿಸಿದ್ದಾರೆ.
ನಾಸಾದ ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜೂ.25ರಂದು ತೆರಳಿರುವ ಶುಭಾಂಶು ಶುಕ್ಲಾ ಅವರು ಕುಟುಂಬ ಸದಸ್ಯರಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದು, ಈ ವೇಳೆ ತಾವು ಮನೆಯೂಟ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಆತನ ತಾಯಿ ಆಶಾ ಶುಕ್ಲಾ ಮಾತನಾಡಿ, ಬಾಹ್ಯಾಕಾಶದ ಚಿತ್ರಣ ನೋಡಿ ಅಚ್ಚರಿಯಾಯಿತು. ಬಾಹ್ಯಾಕಾಶದಿಂದ ವಾಪಸಾದ ಬಳಿಕ ಆರು ವರ್ಷಗಳಿಂದ ಮಿಸ್ ಮಾಡಿಕೊಳ್ಳುತ್ತಿರುವ ತನ್ನ ಇಷ್ಟದ ಮನೆಯೂಟ, ತಿಂಡಿ-ತಿನಿಸು ಸವಿಯಬೇಕೆಂದು ಹೇಳಿದ್ದಾನೆ. ಆತನಿಗೆ ಏನೇನು ಇಷ್ಟವೋ ಅದನ್ನೆಲ್ಲ ಮಾಡಿ ಬಡಿಸಲು ನಾನು ಸಿದ್ಧ ಎಂದು ತಾಯಿ ಆಶಾ ಶುಕ್ಲಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ