ಆಂಧ್ರದಲ್ಲಿ ಜಗನ್ ಪಕ್ಷಕ್ಕೆ ಶಾಕ್‌: ಬೆಳ್ಳಂಬೆಳಗ್ಗೆ ವೈಎಸ್ಆರ್‌ಸಿಪಿ ಪಕ್ಷದ ಕಚೇರಿ ಧ್ವಂಸಗೊಳಿಸಿದ ಸ್ಥಳೀಯಾಡಳಿತ

Published : Jun 22, 2024, 04:57 PM IST
ಆಂಧ್ರದಲ್ಲಿ ಜಗನ್ ಪಕ್ಷಕ್ಕೆ ಶಾಕ್‌: ಬೆಳ್ಳಂಬೆಳಗ್ಗೆ ವೈಎಸ್ಆರ್‌ಸಿಪಿ ಪಕ್ಷದ ಕಚೇರಿ ಧ್ವಂಸಗೊಳಿಸಿದ ಸ್ಥಳೀಯಾಡಳಿತ

ಸಾರಾಂಶ

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ಜಗನ್‌ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷಕ್ಕೆ ಆಡಳಿತದಲ್ಲಿರುವ ಟಿಡಿಪಿ ಶಾಕ್ ನೀಡಿದೆ.. ಗುಂಟೂರಿನಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಬಿಎಸ್ಆರ್‌ಸಿಪಿ ಪಕ್ಷದ ಕಚೇರಿಯನ್ನು ಸ್ಥಳೀಯಾಡಳಿತವೂ ಧ್ವಂಸ ಮಾಡಿದೆ.

ಗುಂಟೂರು: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ಜಗನ್‌ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷಕ್ಕೆ ಆಡಳಿತದಲ್ಲಿರುವ ಟಿಡಿಪಿ ಶಾಕ್ ನೀಡಿದೆ.. ಗುಂಟೂರಿನಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಬಿಎಸ್ಆರ್‌ಸಿಪಿ ಪಕ್ಷದ ಕಚೇರಿಯನ್ನು ಸ್ಥಳೀಯಾಡಳಿತವೂ ಧ್ವಂಸ ಮಾಡಿದೆ. ಅಕ್ರಮವಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಮುನ್ಸಿಪಲ್ ಆಡಳಿತವೂ ಆರೋಪಿಸಿದ್ದು,  ಇಂದು ಮುಂಜಾನೆ ಈ ಅಕ್ರಮ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ. ಮಂಗಳಗಿರಿ ತಡೆಪಲ್ಲಿ ಮುನ್ಸಿಪಲ್ ಕಾರ್ಪೋರೇಷನ್‌ ಇಂದು ಬೆಳ್ಳಂಬೆಳಗ್ಗೆ ಬುಲ್ಡೋಜರ್‌ಗಳನ್ನು ಬಳಸಿ ಕಟ್ಟಡವನ್ನು ನೆಲೆಸಮಗೊಳಿಸಿದೆ.

ಈ ಕಟ್ಟಡವೂ ಅಕ್ರಮವಾಗಿದೆ ಎಂದು ರಾಜಧಾನಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರವೂ(CRDA) ಜಗನ್ ಪಕ್ಷಕ್ಕೆ ನೊಟೀಸ್ ಕಳುಹಿಸಿತ್ತು. ನೊಟೀಸ್ ಹಿನ್ನೆಲೆಯಲ್ಲಿ ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷವೂ ಸಿಆರ್‌ಡಿಎ ಕ್ರಮದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು ಇದಾದ ಬಳಿಕ ಯಾವುದೇ ಕಟ್ಟಡ ಧ್ವಂಸ ಕಾರ್ಯ ನಡೆಸದಂತೆ ಹೈಕೋರ್ಟ್ ತಡೆ ನೀಡಿತ್ತು, ಇದನ್ನು ಸಿಆರ್‌ಡಿಎ ಕಮೀಷನರ್‌ಗೂ  ವೈಎಸ್‌ಆರ್‌ಸಿಪಿ ಪಕ್ಷದ ವಕೀಲರು ತಿಳಿಸಿದ್ದರು. ಇದಾದ ನಂತರವೂ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ ಎಂದು ಪಕ್ಷದ ವಕ್ತಾರರೊಬ್ಬರು ದೂರಿದ್ದಾರೆ. 

Andhra Pradesh results 2024: ಆಂಧ್ರದಲ್ಲಿ ಜಗನ್‌ಗೆ ಶಾಕ್‌ ನೀಡಿದ ಬಿಜೆಪಿ-ಟಿಡಿಪಿ-ಜೆಎಸ್‌ಪಿ ಮೈತ್ರಿ!

ಸಿಆರ್‌ಡಿಎ ಹಾಗೂ ಎಂಟಿಎಂಸಿ ಅಧಿಕಾರಿಗಳ ಪ್ರಕಾರ, ವೈಎಸ್‌ಆರ್‌ಸಿಪಿ ಪಕ್ಷದ ಕಚೇರಿಯನ್ನು ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದೆ.  ಬೋಟ್‌ಯಾರ್ಡ್ ಆಗಿ ಬಳಸುತ್ತಿದ್ದ ಈ ಭೂಮಿಯನ್ನು ಜಗನ್ ನೇತೃತ್ವದ ಹಿಂದಿನ ಸರ್ಕಾರವೂ ಅತೀ ಕಡಿಮೆ ಬೆಲೆಗೆ ಭೋಗ್ಯಕ್ಕೆ ಪಡೆದಿತ್ತು ಎಂಬ ಆರೋಪಗಳಿವೆ. ಇದರ ಜೊತೆಗೆ ಸಿಆರ್‌ಡಿಎ ಹಾಗೂ ಎಂಟಿಎಂಸಿ ಅನುಮತಿ ಪಡೆಯದೆಯೇ ಇಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪವಿದೆ. 

31 ತಿಂಗಳ ಬಳಿಕ ಎಪಿ ವಿಧಾನಸಭೆಗೆ ಚಂದ್ರಬಾಬು ನಾಯ್ಡು : ಮಾಡಿದ್ದ ಪ್ರತಿಜ್ಞೆ ನಿಜ ಮಾಡಿದ ಆಂಧ್ರ ಸಿಎಂ

ಆದರೆ ಈಗ ಟಿಡಿಪಿ ನೇತೃತ್ವದ ಸರ್ಕಾರವೂ ಹಠಾತ್ ಆಗಿ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿರುವುದನ್ನು ವೈಎಸ್‌ಆರ್‌ಸಿಪಿ ಪಕ್ಷದ ಅಧ್ಯಕ್ಷ ವೈ. ಎಸ್‌. ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಅವರು ವೈಎಸ್ಆರ್‌ಸಿಪಿಯ ಕೇಂದ್ರ ಕಚೇರಿಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದಾರೆ ಎಂದು ದೂರಿದ್ದಾರೆ. 

ಈ ಕೃತ್ಯದ ಮೂಲಕ ಚಂದ್ರಬಾಬು ನಾಯ್ಡು ಅವರ ಮುಂದಿನ ಐದು ವರ್ಷಗಳ ಆಡಳಿತ ಹೇಗಿರಬಹುದು ಎಂಬುದನ್ನು ತೋರಿಸುತ್ತಿದ್ದಾರೆ. ಆದರೂ ಬೆದರಿಕೆ ಹಾಗೂ ರಾಜಕೀಯ ಸೇಡಿನಿಂದಾಗಿ ಪಕ್ಷ ಸಂಕಷ್ಟಕ್ಕೀಡಾದರೂ ಜನರ ಪರವಾಗಿ ಹೋರಾಡುತ್ತೇನೆ. ಅಲ್ಲದೇ ದೇಶದ ಎಲ್ಲಾ ಪ್ರಜಾಪ್ರಭುತ್ವ ಶಕ್ತಿಗಳು  ಚಂದ್ರಬಾಬು ನಾಯ್ಡು ಅವರ ಈ ಕೃತ್ಯವನ್ನು ಖಂಡಿಸಬೇಕಾಗಿ ನಾನು ಮನವಿ ಮಾಡುತ್ತೇನೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು