
ಭೋಪಾಲ್: ಇಲ್ಲಿನ ಕುನೋ ಅಭಯಾರಣ್ಯದಲ್ಲಿನ ಚೀತಾಗಳಿಗೆ ಅಳವಡಿಸಿದ್ದ ರೇಡಿಯೋ ಕಾಲರ್ಗಳನ್ನು ಅರಣ್ಯಾಧಿಕಾರಿಗಳು ತೆಗೆದಿದ್ದಾರೆ. ಚೀತಾಗಳ ಆರೋಗ್ಯ ಪರೀಶೀಲನೆಗಾಗಿ ಅವುಗಳನ್ನು ತೆಗೆಯಲಾಗಿದೆ. ಎಲ್ಲಾ 6 ಚೀತಾಗಳು ಅರೋಗ್ಯವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಮಾರ್ಚ್ ನಂತರ ನಮೀಬಿಯಾ, ಆಫ್ರಿಕಾದಿಂದ ತರಲಾಗಿದ್ದ 8 ಚೀತಾಗಳು ಸಾವನ್ನಪ್ಪಿದ್ದವು. ಈ ಪೈಕಿ ಕೆಲವು ಚೀತಾ ಸಾವಿಗೆ ರೇಡಿಯಾ ಕಾಲರ್ ಕಾರಣ ಎಂಬ ವಾದ ಕೇಳಿಬಂದಿದ್ದವು. ಸರ್ಕಾರ ಈ ವರದಿಗಳನ್ನು ನಿರಾಕರಿಸಿತ್ತು. ಅದರ ಬೆನ್ನಲ್ಲೇ 6 ಚೀತಾಗಳಿಗೆ ಅಳವಡಿಸಿದ್ದ ರೇಡಿಯೋ ಕಾಲರ್ ಹೊರತೆಗೆಯಲಾಗಿದೆ.
ಚೀತಾಗಳು ಮತ್ತೆ ಕ್ವಾರಂಟೈನ್ ಕೇಂದ್ರಕ್ಕೆ
ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್ಪಿ)ದಲ್ಲಿ ಚೀತಾಗಳು ಸರಣಿಯಾಗಿ ಸಾವನ್ನಪ್ಪುತ್ತಿರುವ ಬೆನ್ನಲ್ಲೇ ಉಳಿದಿರುವ ರೇಡಿಯೋ ಕಾಲರ್ ಅಳವಿಡಿಸಿರುವ ಎಲ್ಲಾ 16 ಚೀತಾಗಳನ್ನು ಮರಳಿ ಕ್ವಾರಂಟೈನ್ ಕೇಂದ್ರಕ್ಕೆ ಕರೆತರಲಾಗುವುದು. ಬಳಿಕ ಅವುಗಳನ್ನು ಸಂಪೂರ್ಣ ತಪಾಸಣೆಗೊಳಪಡಿಸಲಾಗುವುದು ಎಂದು ಈ ಹಿಂದೆ ಅಧಿಕಾರಿಗಳು ಹೇಳಿದ್ದರು. ಇದಾದ ನಂತರ ಚೀತಾ ಪ್ರಾಜೆಕ್ಟ್ ಸಮಿತಿ ಸಭೆ ನಡೆಸಿದ್ದು, ಅರಣ್ಯದಲ್ಲಿ ಚೀತಾಗಳ ಚಲನವನಗಳನ್ನು ಗಮನಿಸಲು ಡ್ರೋನ್ ವ್ಯವಸ್ಥೆ ಮಾಡಲಾಗುವುದು. ಚೀತಾಗಳ ಚಿಕಿತ್ಸೆ ಕುರಿತ ಅಗತ್ಯ ಅಂಶಗಳನ್ನು ಪರಿಶೀಲಿಸಲು ದಕ್ಷಿಣ ಆಫ್ರಿಕಾದಿಂದ ತಜ್ಞರು ಭಾರತಕ್ಕೆ ಅಗಮಿಸಲಿದ್ದಾರೆ ಎಂದು ಹೇಳಿತ್ತು. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದಿದ್ದ ಚೀತಾಗಳನ್ನು ಮೊದಲು ಕ್ವಾರಂಟೈನ್ನಲ್ಲೇ ಇಡಲಾಗಿತ್ತು. ಬಳಿಕ ಅವು ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ ಎಂದು ಕ್ರಮೇಣ ಕ್ವಾರಂಟೈನ್ನಿಂದ ಅರಣ್ಯಕ್ಕೆ ಮುಕ್ತವಾಗಿ ಬಿಡಲಾಗಿತ್ತು. ಇದೀಗ ಒಂದಾದ ಮೇಲೆ ಒಂದರಂತೆ 24 ಚೀತಾಗಳ ಪೈಕಿ 8 ಚೀತಾಗಳು ಸಾವನ್ನಪ್ಪಿದ್ದು 16 ಮಾತ್ರ ಜೀವಂತವಾಗಿವೆ.
ಚೀತಾ ಯೋಜನೆಯಲ್ಲಿ ಪ್ರತಿಷ್ಠೆ ಕೈಬಿಟ್ಟು ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸುಪ್ರೀಂ
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸತತ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಚೀತಾ ಯೋಜನೆಯ ವಿಷಯವನ್ನು ಏಕೆ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿದ್ದೀರಿ ಎಂದು ಕೆಂದ್ರವನ್ನು ಪ್ರಶ್ನಿಸಿದೆ. ಅಲ್ಲದೇ ಚೀತಾಗಳ ಸಾವಿನ ನಿಯಂತ್ರಣ ಮಾಡಲು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದೆ. ಚೀತಾಗಳ ಸಾವಿನ ಪ್ರಕರಣದ ವಿಚಾರಣೆ ವೇಳೆ ನ್ಯಾ. ಬಿ.ಆರ್ ಗವಾಯಿ, ಜೆ.ಬಿ ಪರ್ದಿವಾಲಾ ಮತ್ತು ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಚೀತಾಗಳನ್ನು ಒಂದೇ ಸ್ಥಳದಲ್ಲಿ ಏಕೆ ಇರಿಸಲಾಗಿದೆ? ಚೀತಾಗಳು ಹವಾಮಾನಕ್ಕೆ ಹೊಂದಿಕೊಳ್ಳಲಾಗದೆಯೋ, ಕಿಡ್ನಿ, ಅಥವಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿವೆಯೇ ಎಂದು ಕೇಳಿತು.
ರೇಡಿಯೋ ಕಾಲರ್, ತೇವದಿಂದ ಸೋಂಕು: 2 ಚೀತಾಗಳ ಸಾವಿಗೆ ಸೆಪ್ಟಿಕ್ ಕಾರಣ: ತಜ್ಞ
ಇದಕ್ಕೆ ಉತ್ತರಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಚೀತಾಗಳ ಸ್ಥಳಾಂತರದಲ್ಲಿ 50 ಪ್ರತಿಶತದಷ್ಟು ಸಾವುಗಳು ಸಾಮಾನ್ಯವಾಗಿದೆ. ಈ ಯೋಜನೆಯಡಿ ಹಲವು ಉತ್ತಮ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು. ಭಾರತದಲ್ಲಿ ಚೀತಾಗಳ ಆವಾಸ ಸ್ಥಾನವನ್ನು ಮರುಸ್ಥಾಪಿಸಲು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾಗಳಿಂದ ಭಾರತಕ್ಕೆ ತಂದಿದ್ದ 24 ಚೀತಾಗಳ ಪೈಕಿ 8 ಚೀತಾ ಸಾವನ್ನಪ್ಪಿದ್ದು ಇದೀಗ 16 ಚೀತಾಗಳು ಮಾತ್ರ ಉಳಿದುಕೊಂಡಿವೆ.
ಕುನೋ ಪಾರ್ಕ್ನಲ್ಲಿ 8ನೇ ಚೀತಾ ಸಾವು, ಗಂಡು ಚೀತಾ ಸೂರಜ್ ಮರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ