ಪಿಟಿಐ ನವದೆಹಲಿ (ಮೇ.14): ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಉಂಟಾಗಿರುವ ಸಮಸ್ಯೆ ಎದುರಿಸಲು ಜನತೆಯ ಸಹಕಾರ ಕೋರಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಸ್ವತಃ ಇಂಧನ ಉಳಿತಾಯದ ಮೂಲಕ ಮಾತನ್ನು ಕೃತಿಗೆ ಇಳಿಸಿದ್ದಾರೆ. ಕಳೆದ 2 ದಿನಗಳಿಂದಲೇ ಮೋದಿ ಅವರ ವಿವಿಧ ರಾಜ್ಯಗಳ ಸಂಚಾರದ ವೇಳೆ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಕಡಿತ ಮಾಡಲಾಗಿದೆ.
ಇತ್ತ ಮೋದಿ ಕರೆಯ ಬೆನ್ನಲ್ಲೇ ಹಲವು ರಾಜ್ಯಗಳ ರಾಜ್ಯಪಾಲರು, ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಕೂಡಾ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆ ಕಡಿತ ಮಾಡಿದ್ದಾರೆ.
3 ದಿನಗಳ ಹಿಂದೆ ಹೈದರಾಬಾದ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೆಟ್ರೋಲ್, ಡೀಸೆಲ್ ಬಳಕೆ ಇಳಿಕೆ, ಅನಗತ್ಯ ಚಿನ್ನ ಖರೀದಿ ಮುಂದೂಡಿಕೆ, ಖಾದ್ಯ ತೈಲ ಬಳಕೆಯಲ್ಲಿ ಇಳಿಕೆ ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದರು.
ಅದರ ಬೆನ್ನಲ್ಲೇ ಮೋದಿ ಅಸ್ಸಾಂ ಮತ್ತು ಗುಜರಾತ್ ಪ್ರವಾಸದ ವೇಳೆ ಅವರ ಬೆಂಗಾವಲು ವಾಹನಗಳಲ್ಲಿ ಭಾರೀ ಕಡಿತ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಜೊತೆಗೆ ಬುಧವಾರ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ ವೇಳೆಯೂ ಪ್ರಧಾನಿ ಕೇವಲ 2 ಬೆಂಗಾವಲು ವಾಹನ ಬಳಸಿದ್ದರು. ಆದರೆ ಈ ಕಡಿತವನ್ನು ಅತಿಗಣ್ಯರಿಗೆ ಭದ್ರತೆ ಒದಗಿಸುವ ಎಸ್ಪಿಜಿಯ ಶಿಷ್ಟಾಚಾರಕ್ಕೆ ಅಡ್ಡಿಬರದಂತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಬೆಂಗಾವಲು ವಾಹನಗಳಲ್ಲಿ ಸಾಧ್ಯವಾದಷ್ಟು ಎಲೆಕ್ಟ್ರಿಕ್ ವಾಹನ ಅಳವಡಿಸುವಂತೆ ಆದರೆ ಇದಕ್ಕಾಗಿ ಹೊಸ ಕಾರು ಖರೀದಿ ಮಾಡದಂತೆ ಮೋದಿ ಸೂಚಿಸಿದ್ದಾರೆ.
ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ, ‘ನಾನು ಇನ್ನು ಹೆಲಿಕಾಪ್ಟರ್ನಲ್ಲಿ ಸಂಚರಿಸುವುದಿಲ್ಲ. ಸಾಧ್ಯವಿದ್ದ ಕಡೆಯಲ್ಲಿ ನಾನು ರೈಲಿನಲ್ಲಿ ಹಾಗೂ ರಸ್ತೆ ಮೂಲಕ ಪ್ರವಾಸ ಮಾಡುತ್ತೇನೆ’ ಎಂದು ಘೋಷಿಸಿದ್ದಾರೆ. ಗುಜರಾತ್ ಡಿಸಿಎಂ ಹರ್ಷ್ ಸಾಂಘ್ವಿ ತಮ್ಮ ಅಮೆರಿಕ ಪ್ರವಾಸ ರದ್ದು ಮಾಡಿದ್ದಾರೆ.
ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಅಸ್ಸಾಂ, ಛತ್ತೀಸ್ಗಢ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಬಿಹಾರ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳ ಸಿಎಂಗಳು ತಮ್ಮ ಬೆಂಗಾವಲು ವಾಹನಗಳನ್ನು ಶೇ.50ರಷ್ಟು ಕಡಿತ ಮಾಡಿದ್ದಾರೆ.
ಬಿಹಾರ ಸಿಎಂ ಸಾಮ್ರಾಟ್ ಚೌಧರಿ, ವಾರದ 1 ದಿನ ವಾಹನ ರಹಿತ ದಿನ ಎಂದು ಘೋಷಿಸಿದ್ದಾರೆ. ಅಧಿಕಾರಿಗಳಿಗೆ ಸಾರ್ವಜನರಿಗೆ ಸಾರಿಗೆ ಬಳಸುವಂತೆ ಸೂಚಿಸಿದ್ದಾರೆ. ಸಚಿವರು ವಿಮಾನ ಪ್ರಯಾಣಕ್ಕೂ ತಮ್ಮ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸಿಎಂ ಫಡ್ನವೀಸ್ ಸೂಚಿಸಿದ್ದಾರೆ.+
ಮಹಾರಾಷ್ಟ್ರ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಕೂಡ ತಮ್ಮ ಬೆಂಗಾವಲು ಗಾತ್ರ ತಗ್ಗಿಸಲು ಸೂಚಿಸಿದ್ದಾರೆ. ಹಿಮಾಚಲದ ರಾಜ್ಯಪಾಲ ಕವಿಂದರ್ ಗುಪ್ತಾ ಲೋಕಭವನವನ್ನು ಇಂಧನ ಸಂರಕ್ಷಣಾ ವಲಯ ಎಂದು ಘೋಷಿಸಿ ಭಾನುವಾರವನ್ನು ಪೆಟ್ರೋಲ್ ಮುಕ್ತ ಎಂದು ಪ್ರಕಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ