
ಬದುಕನ್ನು ಎದುರಿಸಲಾಗದ ಮನಸ್ಥಿತಿ ಇಂದು ಚಿಕ್ಕ ವಯಸ್ಸಿನಲ್ಲಿಯೇ ಆಗುತ್ತಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಇಂದು ಚಿಕ್ಕಪುಟ್ಟ ವಿಷಯಕ್ಕೂ ಮಕ್ಕಳೇ ಸಾವಿನ ಹಾದಿ ಹಿಡಿಯುತ್ತಿರುವ ವರದಿಗಳಾಗುತ್ತಲೇ ಇರುತ್ತವೆ. ಮೊಬೈಲ್ ಫೋನ್ ಕೊಡಿಸಿಲ್ಲವೆಂದು, ಶಾಲೆಯಲ್ಲಿ ಶಿಕ್ಷಕರು ಬೈದರೆಂದು, ಅಪ್ಪ-ಅಮ್ಮ ಹೊಡೆದರೆಂದು, ಸ್ನೇಹಿತರು ಏನೋ ಲೇವಡಿ ಮಾಡಿದರೆಂದು... ಹೀಗೆ ಕಾರಣಗಳೇ ಬೇಕೆಂದಿಲ್ಲ. ಎಳವೆಯಲ್ಲಿಯೇ ಮಕ್ಕಳ ಮನಸ್ಥಿತಿ ಅತ್ಯಂತ ಅಪಾಯಕಾರಿ ಮಟ್ಟವನ್ನು ತಲುಪಿ ಬಿಟ್ಟಿದೆ. ಅದೇ ಇನ್ನೊಂದೆಡೆ, ಈ ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧರಂತೆ ವರ್ತಿಸಿ ತಮ್ಮ ಜೀವನವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ ಕೆಲವು ಮಕ್ಕಳು. ಕೊನೆಗೆ ಅವರ ಕಂಡುಕೊಳ್ಳುವುದು ಸಾವಿನ ಹಾದಿ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬೆಚ್ಚಿಬೀಳಿಸೋ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದು ಎಲ್ಲಿಯ ವಿಡಿಯೋ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ನೋಡಿದರೆ ಮಾತ್ರ ಎಂಥವರಿಗೂ ಆಘಾತವಾಗುತ್ತದೆ. ಇದರಲ್ಲಿ ಶಾಲಾ ಬಾಲಕಿಯೊಬ್ಬಳು ಶಾಲೆಯ ಸಮವಸ್ತ್ರ ಮತ್ತು ಬ್ಯಾಗ್ ಹಿಡಿದು ಹೋಗುವುದನ್ನು ನೋಡಬಹುದು. ಅಲ್ಲಿ ವಾಹನ ಸಂಚಾರವೂ ನಡೆಯುತ್ತಿದೆ. ಅದರ ನಡುವೆಯೇ, ಸೇತುವೆಯ ಮೇಲೆ ನಿಂತು ನದಿಗೆ ಹಾರಿದ್ದಾಳೆ. ಇಡೀ ಘಟನೆಯನ್ನು ಹತ್ತಿರದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಸೇತುವೆಯ ಮೇಲೆ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಬಾಲಕಿಯನ್ನು ನೋಡಿ ಓಡಿ ಬಂದಿದ್ದಾರೆ. ಆಕೆಯ ರಕ್ಷಣೆಗೆ ಧಾವಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಆದರೆ ದುರದೃಷ್ಟವಶಾತ್, ಆಕೆಯನ್ನು ತಲುಪುವ ಮೊದಲೇ ಬಾಲಕಿ ನದಿಗೆ ಹಾರಿದ್ದಾಳೆ.
ಹುಡುಗಿ ನದಿಗೆ ಹಾರಿದ ತಕ್ಷಣ, ಹತ್ತಿರದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಜೋರಾಗಿ ಕೂಗಲು ಪ್ರಾರಂಭಿಸಿರುವುದನ್ನು ನೋಡಬಹುದು. ಬಳಿಕ ಅಲ್ಲಿ ಹೋಗುತ್ತಿದ್ದ ಜನರು, ವಾಹನ ಸವಾರರು ಓಡಿ ಬಂದು ಅಲ್ಲಿ ಜಮಾಯಿಸಿದ್ದಾರೆ. ಸಿಸಿಟಿವಿ ಫುಟೇಜ್ನ ಇಷ್ಟು ದೃಶ್ಯಗಳು ಮಾತ್ರ ವೈರಲ್ ಆಗಿವೆ. ಮುಂದೇನಾಯಿತು ಎನ್ನುವುದು ತಿಳಿದಿಲ್ಲ. ಆಕೆಯನ್ನು ರಕ್ಷಣೆ ಮಾಡಲಾಯಿತೊ ಅಥವಾ ಬಾಲಕಿ ಜೀವ ಕಳೆದುಕೊಂಡಳೋ ಗೊತ್ತಿಲ್ಲ. ಇದಿನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಶಾಕಿಂಗ್ ವಿಡಿಯೋ ಮಾತ್ರ ಎಲ್ಲರನ್ನೂ ಅದರಲ್ಲಿಯೂ ಹೆಚ್ಚಾಗಿ ಚಿಕ್ಕಮಕ್ಕಳು ಇರುವ ಅಪ್ಪ-ಅಮ್ಮಂದಿರನ್ನು ಮಾತ್ರ ಬೆಚ್ಚಿಬೀಳಿಸಿದೆ.
ಇಂದಿನ ಮಕ್ಕಳಿಗೆ ಒಂದು ಹೇಳಿದರೆ ಕಡಿಮೆ, ಎರಡು ಹೇಳಿದರೆ ಹೆಚ್ಚು. ಇಂಥ ಸ್ಥಿತಿಯಲ್ಲಿ ನಾವಿದ್ದೇವೆ. ಅವರನ್ನು ಹೇಗೆ ಸಾಕುವುದೋ, ಹೇಗೆ ದೊಡ್ಡ ಮಾಡುವುದೋ, ಅವರ ಮನಸ್ಸಿನಲ್ಲಿ ಏನು ಯೋಚನೆ ಬರುತ್ತಿರುತ್ತದೆಯೋ, ಶಾಲಾ-ಕಾಲೇಜುಗಳಲ್ಲಿ ಏನು ಆಗುತ್ತಿರುತ್ತದೆಯೋ ಯಾವುದೂ ತಿಳಿಯುವುದಿಲ್ಲ. ಪೇರೆಂಟಿಂಗ್ ಎನ್ನುವುದು ಇಂದು ಅತಿದೊಡ್ಡ ಜವಾಬ್ದಾರಿಯಾಗಿದೆ ಎಂದು ಹಲವರು ಈ ವಿಡಿಯೋಗೆ ಕಮೆಂಟ್ ಮೂಲಕ ತಮ್ಮ ದುಃಖ ವ್ಯಕ್ತಪಡಿಸುತ್ತಿದ್ದಾರೆ. newsarenaindia ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ