Sariska Fire ಸಾರಿಸ್ಕಾ ಕಾಡ್ಗಿಚ್ಚು ಬಹುತೇಕ ನಿಯಂತ್ರಣಕ್ಕೆ, ಬೆಂಕಿಯಿಂದ ಹುಲಿಗೆ ತೊಂದರೆಯಾಗಿಲ್ಲ!

By Kannadaprabha NewsFirst Published Mar 31, 2022, 4:55 AM IST
Highlights
  • ಭಾರತೀಯ ವಾಯುಪಡೆಯ 2 ವಿಮಾನಗಳು ಸತತ ಕಾರ್ಯಾಚರಣೆ
  • 2 ಹೆಲಿಕಾಪ್ಟರ್‌ಗಳ ಮುಖಾಂತರ ನೀರು ಸಿಂಪಡಿಸಲಾಗುತ್ತಿದೆ
  • ರಾಜಸ್ಥಾನ ಸಿಎಂ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
     

ಜೈಪುರ್‌(ಮಾ.31): ಭಾರಿ ಪ್ರಮಾಣದ ಬೆಂಕಿಗೆ ತುತ್ತಾಗಿರುವ ರಾಜಸ್ಥಾನದ ಸಾರಿಸ್ಕಾ ಹುಲಿ ರಕ್ಷಿತಾರಣ್ಯದಲ್ಲಿ ಬೆಂಕಿ ನಂದಿಸುವ ಕಾರ್ಯ ಬುಧವಾರವೂ ಮುಂದುವರೆದಿದೆ. ಭಾರತೀಯ ವಾಯುಪಡೆಯ 2 ವಿಮಾನಗಳು ಬೆಂಕಿ ನಂದಿಸಲು ಸತತ ಪ್ರಯತ್ನ ನಡೆಸುತ್ತಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಕರೆ ಮಾಡಿ, ಕೇಂದ್ರದ ನೆರವು ನೀಡಲು ಸಿದ್ಧ ಎಂದಿದ್ದಾರೆ.

‘ಕಳೆದ ರಾತ್ರಿ ಬೆಂಕಿ ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸಿಲ್ಲ. ಮಂಗಳವಾರಕ್ಕೆ ಹೋಲಿಸಿದರೆ ಬೆಂಕಿಯನ್ನು ಶೇ.80ರಷ್ಟುನಿಯಂತ್ರಣಕ್ಕೆ ತರಲಾಗಿದೆ. ಆದರೆ ಒಣಹುಲ್ಲಿನ ಪ್ರದೇಶಕ್ಕೆ ಬೆಂಕಿ ಹಬ್ಬಿದ್ದರಿಂದ ನಾಲ್ಕರಿಂದ ಐದು ಚದರ ಕಿ.ಮೀ ಪ್ರದೇಶ ಬೆಂಕಿಗೆ ತುತ್ತಾಗಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಪ್ರಸ್ತುತ ಬೆಂಕಿ ಹುಲ್ಲುಗಾವಲು ಪ್ರದೇಶದಲ್ಲಿ ಮಾತ್ರ ಇರುವುದರಿಂದ ಇದನ್ನು ಆರಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ’ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಸಾರಿಸ್ಕಾ ಹುಲಿ ಧಾಮದಲ್ಲಿ ಕಾಡ್ಗಿಚ್ಚು, 10 ಚದರ ಕಿ.ಮೀ ಅರಣ್ಯ ವ್ಯಾಪಿಸಿದ ಬೆಂಕಿ!

ಬೆಂಕಿ ಕಾಣಿಸಿಕೊಂಡಾಗಿನಿಂದ ಇಲ್ಲಿರುವ 27 ಹುಲಿಗಳ ಬಗ್ಗೆ ಹೆಚ್ಚಿನ ಆತಂಕ ವ್ಯಕ್ತಪಡಿಸಲಾಗಿತ್ತು. ಆದರೆ ಯಾವ ಹುಲಿಗಳು ಬೆಂಕಿಯಿಂದ ತೊಂದರೆಗೊಳಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿಯನ್ನು ನಂದಿಸಲು 2 ಹೆಲಿಕಾಪ್ಟರ್‌ಗಳ ಮುಖಾಂತರ ನೀರು ಸಿಂಪಡಿಸಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ದಳದ 2 ತಂಡಗಳನ್ನು ನೇಮಿಸಲಾಗಿದೆ.

ಕುದುರೆಮುಖ ರಾ. ಉದ್ಯಾನವನ ವ್ಯಾಪ್ತಿಯ ಹುಲ್ಲುಗಾವಲು ಪ್ರದೇಶದಲ್ಲಿ ಬೆಂಕಿ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅರಣ್ಯ ಪ್ರದೇಶಗಳ ಸುತ್ತಲಿನ ಹುಲ್ಲುಗಾವಲು ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ್ದು ಇದು ಮಲವಂತಿಗೆ ತನಕವೂ ಹರಡಿದೆ.ಕುದುರೆಮುಖ ವ್ಯಾಪ್ತಿಯಲ್ಲಿ ಪ್ರಥಮವಾಗಿ ಕಾಡಿನ ಸುತ್ತಲು ಇರುವ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಬೆಂಕಿ ವ್ಯಾಪಿಸಿ ಬಳಿಕ ನಾವೂರು ಗ್ರಾಮದ ಗುಂಡಲ್ಪಾದೆ ಮಲವಂತಿಗೆ ಗ್ರಾಮ, ಮೈದಾಡಿ ಪ್ರದೇಶದವರೆಗೂ ಪಸರಿಸಿದೆ. ಇದರಿಂದ ಕಾಡಿನ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಬೋಳಾಗಿದೆ. ವನ್ಯಜೀವಿ ವಿಭಾಗ ಹಾಗೂ ಅರಣ್ಯ ಇಲಾಖೆ ವತಿಯಿಂದ ಬೆಂಕಿಯನ್ನು ಹತೋಟಿಗೆ ತರುಲು ಪ್ರಯತ್ನಿಸಲಾಗುತ್ತಿದೆ.ಬೆಂಕಿಯ ಪರಿಣಾಮ ವಾತಾವರಣದಲ್ಲಿ ಏರುಪೇರು ಉಂಟಾಗಿದ್ದು ಸಮೀಪದ ಗ್ರಾಮಗಳಲ್ಲಿ ಹಗಲಲ್ಲಿ ಉರಿಬಿಸಿಲು ಹಾಗೂ ರಾತ್ರಿ ಹೆಚ್ಚಿನ ಚಳಿ ಕಂಡುಬರುತ್ತಿದೆ.

ಬೆಂಕಿ ನಂದಿಸೋದು ಬಿಟ್ಟು, ಅಂಜಲಿ ತೆಂಡುಲ್ಕರ್ ಗೆ ಹುಲಿ ತೋರಿಸ್ತಿದ್ದ ಸರಿಸ್ಕಾ ವಲಯದ ನಿರ್ದೇಶಕ!

ಕಾಡ್ಗಿಚ್ಚಿಗೆ ಅರಣ್ಯ ಇಲಾಖೆಯ ಗಿಡಮರಗಳು ನಾಶ
ಬಿಸಿಲಿನ ತಾಪಮಾನಕ್ಕೆ ಕಾಡ್ಗಿಚ್ಚು ಹಂಟಿಕೊಂಡು ಸುಮಾರು 2 ಎಕರೆಯಷ್ಟುಅರಣ್ಯ ಇಲಾಖೆಯ ಗಿಡಮರಗಳು ಸುಟ್ಟು ಕರಕಲಾದ ಘಟನೆ ಟೇಕಲ್‌ನ ಪನಮಾಕನಹಳ್ಳಿಯ ಓಂಕಾರ ಆಶ್ರಮ ಬಳಿ ಗುರುವಾ ಸಂಜೆ ನಡೆದಿದೆ. ಗ್ರಾಮದ ಸಾಯಿಬಾಬಾ ಆಶ್ರಮದ ಪಕ್ಕದಲ್ಲಿ ಸುಮಾರು 20 ಹಸುಗಳಿರುವ ಗೋ ಆಶ್ರಮವಿದ್ದು ಅದಕ್ಕೆ ಕೆಲವರು ಹುಲ್ಲನ್ನು ತಂದು ಹಾಕಿದ್ದರು. ಅದೃಷ್ಟವಶಾತ್‌ ಪಕ್ಕದಲ್ಲೆ ಆದ ಆಕಸ್ಮಿಕ ಬೆಂಕಿಗೆ ಅದ್ಯಾವುದೇ ವಸ್ತುಗಳು ಬೆಂಕಿಗಾಹುತಿಯಾಗಿಲ್ಲ. ಬೆಂಕಿ ನಂದಿಸುವಲ್ಲಿ ಮಾಲೂರಿನ ಅಗ್ನಿಶಾಮಕ ದಳದವರು ತಕ್ಷಣವೇ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಮುಂದಾಗುವ ಅನಾಹುತವನ್ನು ತಪ್ಪಿಸಿದರು.

ಕಾಡ್ಗಿಚ್ಚು ನಂದಿಸಲು ಕಾಪ್ಟರ್‌ ಖರೀದಿ: ಕತ್ತಿ
ರಾಜ್ಯದ ದುರ್ಗಮ ಅರಣ್ಯ, ಬೆಟ್ಟಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚನ್ನು ಶೀಘ್ರವಾಗಿ ನಂದಿಸುವ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ ಖರೀದಿಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ ಸಚಿವ ಉಮೇಶ್‌ ಕತ್ತಿ ತಿಳಿಸಿದ್ದಾರೆ. ಇಲಾಖೆ ಸ್ಥಾಪಿಸಿರುವ ಅರಣ್ಯ ಬೆಂಕಿ, ಉಸ್ತುವಾರಿ ಮತ್ತು ವಿಶ್ಲೇಷಣೆ ಕೋಶದ ಮೂಲಕ ಕಾಡ್ಗಿಚ್ಚನ್ನು ಪತ್ತೆ ಹಚ್ಚಲು ಉಪಗ್ರಹ ಚಿತ್ರಗಳು ಮತ್ತು ಮಾಹಿತಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ದೊಡ್ಡ ಮಟ್ಟದ ಕಾಡ್ಗಿಚ್ಚು ಸಂದರ್ಭದಲ್ಲಿ ವಾಯುಪಡೆಯ ಹೆಲಿಕಾಪ್ಟರ್‌ಗಳ ಸೇವೆಯನ್ನು ಪಡೆದು ಬೆಂಕಿಯನ್ನು ನಂದಿಸಲು ಕ್ರಮ ತೆಗೆದುಕೊಳ್ಳಬೇಕಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೆಂಕಿ ನಂದಿಸಲು ಅಗತ್ಯ ಹೆಲಿಕಾಪ್ಟರ್‌ಗಳ ಖರೀದಿಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಮುಂದಿನ ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಹೇಳಿದರು.

click me!