
ಬೆಂಗಳೂರು(ಮಾ.31) ಕೇಂದ್ರ ಸಹಕಾರ ಸಚಿವರೂ ಆಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುರುವಾರ ರಾಜ್ಯಕ್ಕೆ ಆಗಮಿಸಲಿದ್ದು, ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗುರುವಾರ ರಾತ್ರಿ 10 ಗಂಟೆಗೆ ಬೆಂಗಳೂರಿಗೆ ಬರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಬೆಳಗ್ಗೆ 10.30ಕ್ಕೆ ತುಮಕೂರಿನಲ್ಲಿ ನಡೆಯುವ ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 2ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಂತರ ಬೆಂಗಳೂರಿನ ಅರಮನೆ ಆವರಣದಲ್ಲಿ ಸಹಕಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೇಂದ್ರದಿಂದ ಮಹತ್ವದ ಹೆಜ್ಜೆ, ದೆಹಲಿ 3 ಮುನ್ಸಿಪಲ್ ಕಾರ್ಪೋರೇಶನ್ ಏಕೀಕರಿಸುವ ತಿದ್ದುಪಡಿ ಮಸೂದೆ ಅಂಗಿಕಾರ!
ಕ್ಷೀರ ಅಭಿವೃದ್ಧಿ ಬ್ಯಾಂಕ್ ಲೋಗೋ ಬಿಡುಗಡೆ:
ಅರಮನೆ ಮೈದಾನದಲ್ಲಿ ನಡೆಯುವ ಸಹಕಾರ ಸಮ್ಮೇಳನದಲ್ಲಿ ಹೊಸದಾಗಿ ಸ್ಥಾಪಿಸಲು ಉದ್ದೇಶಿಸಿರುವ ನಂದಿನಿ ಕ್ಷೀರ ಅಭಿವೃದ್ಧಿ ಬ್ಯಾಂಕ್ ಲೋಗೋ ಬಿಡುಗಡೆ ಮಾಡಲಿದ್ದಾರೆ. ಅಲ್ಲದೇ, ಪುನರ್ ಪ್ರಾರಂಭಿಸಲು ತೀರ್ಮಾನಿಸಿರುವ ಯಶಸ್ವಿನಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಮುಗಿಸಿದ ಬಳಿಕ ಸಂಜೆ 7ಗಂಟೆಗೆ ಬಿಜೆಪಿ ಕಚೇರಿಯಲ್ಲಿ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಜೆಟ್ನಲ್ಲಿ ನಂದಿನಿ ಕ್ಷೀರ ಅಭಿವೃದ್ಧಿ ಬ್ಯಾಂಕ್ ಘೋಷಣೆ ಮಾಡಲಾಗಿದ್ದು, ಈ ಸಂಬಂಧ ಸರ್ಕಾರವು ಆದೇಶವನ್ನು ಸಹ ಹೊರಡಿಸಿದೆ. ಹಾಲು ಉತ್ಪಾದಕರಿಗಾಗಿ ಇತರೆ ಚಟುವಟಿಕೆ ಆರ್ಥಿಕ ಸಂಸ್ಥೆ ಇರಬೇಕು ಎನ್ನುವ ಕಾರಣಕ್ಕಾಗಿ ಈಗಾಗಲೇ ಬಜೆಟ್ನಲ್ಲಿ ತಿಳಿಸಿರುವಂತೆ 100 ಕೊಟಿ ರು. ಷೇರು ಬಂಡವಾಳ ಸರ್ಕಾರ ನೀಡಲಿದೆ. ಹಾಲು ಉತ್ಪಾದಕರ ಮಹಾಮಂಡಳ, ಜಿಲ್ಲಾ ಒಕ್ಕೂಟಗಳೆಲ್ಲಾ ಸೇರಿ 260 ಕೋಟಿ ರು. ಷೇರು ಬಂಡವಾಳ ಹಾಕಿ ಪ್ರಾರಂಭಿಸಲಾಗುತ್ತಿದೆ. ಆರ್ಥಿಕ ಸಂಸ್ಥೆಯನ್ನು ಹಾಲು ಉತ್ಪಾದಕ ರೈತರಿಗಾಗಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಷೀರ ಅಭಿವೃದ್ಧಿ ಬ್ಯಾಂಕ್ ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾರಂಭಿಸಲಾಗುತ್ತಿದ್ದು, ಇದರಿಂದ ಹಾಲು ಉತ್ಪಾದನೆಗೆ ಮತ್ತಷ್ಟುಬಲ ನೀಡಿದಂತಾಗುತ್ತದೆ. ಅಲ್ಲದೇ, ರೈತರ ಆದಾಯ ಹೆಚ್ಚಿಸಲು ಅನುಕೂಲವಾಗಲಿದೆ. ರಾಜ್ಯದಲ್ಲಿ ಒಟ್ಟು 26 ಲಕ್ಷ ಹಾಲು ಉತ್ಪಾದಕರಿದ್ದು, 14,900 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. 15 ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದೆ. ಕೇಂದ್ರದ ಕೃಷಿ ಇಲಾಖೆಯಲ್ಲಿ ಇದ್ದ ಸಹಕಾರವನ್ನು ಪ್ರತ್ಯೇಕ ಮಾಡಿ ನಿರ್ದೇಶನಾಲಯ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಕಾರ ಕ್ಷೇತ್ರದ ಶಕ್ತಿ ಗೊತ್ತಿರುವ ಕಾರಣ ಅದಕ್ಕೆ ಪ್ರತ್ಯೇಕ ಇಲಾಖೆ ಇರಬೇಕು ಎಂದು ಭಾವಿಸಿ ಪ್ರತ್ಯೇಕಿಸಲಾಗಿದೆ ಎಂದರು.
Historic Agreement ಏನಿದು 50 ವರ್ಷ ಹಳೆಯ ಅಸ್ಸಾಂ ಮೇಘಾಲಯ ಗಡಿ ವಿವಾದ?
ಇದೇ ವೇಳೆ ಸ್ಥಗಿತಗೊಂಡಿದ್ದ ಯಶಸ್ವಿನಿ ಯೋಜನೆಯನ್ನು ಪುನರ್ ಪ್ರಾರಂಭಿಸಲಾಗುತ್ತಿದೆ. ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಮುಂದಿನ 2-3 ವಾರದಲ್ಲಿ ಮಾರ್ಪಾಡುಗಳನ್ನು ತಯಾರಿಸಲಾಗುತ್ತದೆ. ರೈತರು ಆರೋಗ್ಯದಲ್ಲಿ ಬಹಳಷ್ಟುಸಮಸ್ಯೆಗಳನ್ನು ಎದುರಿಸುತ್ತಾರೆ. ಅವರಿಗೆ ಸುಲಭವಾಗಿ ಆರೋಗ್ಯ ಸೇವೆ ಲಭ್ಯವಾಗಬೇಕು. ಬಜೆಟ್ನಲ್ಲಿ ಈ ಯೋಜನೆಗಾಗಿ 300 ಕೋಟಿ ರು. ಒದಗಿಸಿದ್ದೇವೆ ಎಂದು ಹೇಳಿದರು.
ಅಮಿತ್ ಶಾ ಭೇಟಿ ಹಿನ್ನೆಲೆ: ವಾಹನ ಪಾರ್ಕಿಂಗ್ ನಿಷೇಧ
ಕೇಂದ್ರ ಗೃಹ ಸಚಿವರ ಭೇಟಿ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಶುಕ್ರವಾರ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮಲ್ಲೇಶ್ವರದ ಸಂಪಿಗೆ ರಸ್ತೆ, ಮಾರ್ಗೋಸಾ ರಸ್ತೆಯ 18ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ ಹಾಗೂ 2ನೇ ಟೆಂಪಲ್ ಸ್ಟ್ರೀಟ್ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಏ.1ರಿಂದ ತಾತ್ಕಾಲಿಕವಾಗಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ