Russia Ukraine war ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮನೆಗಳಲ್ಲಿ ಹಬ್ಬದ ವಾತಾವರಣ

By Kannadaprabha NewsFirst Published Mar 8, 2022, 4:45 AM IST
Highlights
  • ಬಾಂಬ್‌ ಸ್ಫೋಟದಿಂದ ನಾವು ತಂಗಿದ್ದ ಕಟ್ಟಡವೇ ಕಂಪಿಸುತ್ತಿತ್ತು
  • ತವರಿಗೆ ಆಗಮಿಸಿದ ವಿದ್ಯಾರ್ಥಿಗಳ ಪೋಷಕರಲ್ಲಿ ಆನಂದ
  • ಸುರಕ್ಷಿತವಾಗಿ ಭಾರತಕ್ಕೆ ವಾಪಸ್‌ ಬರಲು ದೇವರಲ್ಲಿ ಪ್ರಾರ್ಥನೆ
     

ಬಂಗಾರಪೇಟೆ(ಮಾ.08):ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಪಟ್ಟಣದ ಇಬ್ಬರು ವಿದ್ಯಾರ್ಥಿಗಳನ್ನು ಆಪರೇಷನ್‌ ಗಂಗಾ ಮೂಲಕ ರಕ್ಷಿಸಿ ಅವರ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸಲಾಗಿದ್ದು, ಎರಡು ಕುಟುಂಬಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಷ್ಯಾ ಮತ್ತು ಉಕ್ರೇನ್‌ ದೇಶಗಳ ನಡುವೆ ಯುದ್ಧ ಆರಂಭವಾದಾಗಿನಿಂದ ತಾಯ್ನಾಡಿಗೆ ಬರಳಿ ಬರಲು ಯತ್ನಿಸಿ ವಿಫಲರಾಗಿ ಕಳೆದ 10 ದಿನಗಳಿಂದ ಸಮಯಕ್ಕೆ ಊಟ, ತಿಂಡಿ ನೀರು ಸಿಗದೆ ಅವ್ಯವಸ್ಥೆಯಲ್ಲಿ ಹಾಗೂ ಭಯದಲ್ಲೆ ಕಾಲ ಕಳೆದಿದ್ದ ಸಾವಿರಾರು ವಿದ್ಯಾರ್ಥಿಗಳಲ್ಲಿ ಪಟ್ಟಣದ ತನುಶ್ರೀ ಹಾಗೂ ಸುಭಾ ಎಂಬ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳೂ ಸಿಲುಕಿದ್ದರು. ಎರಡು ಕುಟುಂಬಸ್ಥರ ನಡುವೆ ನಿತ್ಯ ಸಂಪರ್ಕದಲ್ಲಿದ್ದರೂ ಆತಂಕದಲ್ಲೆ ತಮ್ಮ ಮಕ್ಕಳು ಸುರಕ್ಷಿತವಾಗಿ ಭಾರತಕ್ಕೆ ವಾಪಸ್‌ ಬರಲು ದೇವರಲ್ಲಿ ಪ್ರಾರ್ಥನೆಯಲ್ಲಿದ್ದರು.

ಹತ್ತು ದಿನಗಳಿಂದ ಭಾರತದ ಸರ್ಕಾರ ಭಾರತದ ವಿದ್ಯಾರ್ಥಿಗಳನ್ನು ಏರ್‌ಲಿಪ್ಟ್‌ ಮಾಡುತ್ತಿದ್ದಾಗ ಅದರಲ್ಲಿ ನಮ್ಮ ಮಕ್ಕಳಿದ್ದಾರೆಯೇ ಎಂಬುದನ್ನು ಕಾದು ಕಾದು ಬಸವಳಿದಿದ್ದರು. ಕೊನೆಗೂ ಭಾನುವಾರ ಮನೆಗಳಿಗೆ ಬಂದಾಗ ಮನೆಯವರಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು. ವಿಷಯ ತಿಳಿದು ಸೋಮವಾರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್‌ ಮತ್ತು ಕೆ.ಚಂದ್ರಾರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಎರಡೂ ಕುಟುಂಬಗಳ ಮನೆಗಳಿಗೆ ತೆರಳಿ ಇಬ್ಬರೂ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಧೈರ್ಯ ತುಂಬಿದರಲ್ಲದೆ ಭಾರತ ಸರ್ಕಾರ ನಿಮ್ಮ ಎಲ್ಲಾ ನೆರವಿಗೆ ಇದೆ ಎಂದು ತಿಳಿಸಿದರು. ಉಕ್ರೇನ್‌ನಲ್ಲಿನ ಹತ್ತುದಿನಗಳ ಕಹಿ ಅನುಭವವನ್ನು ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ತನುಶ್ರೀ ಹಂಚಿಕೊಂಡರು.

Latest Videos

ರಷ್ಯಾ ದಾಳಿ, ಉಕ್ರೇನ್‌ ಪರ ಹೋರಾಟಕ್ಕಿಳಿದ 52 ದೇಶದ 20 ಸಾವಿರ ವಿದೇಶಿ ಸ್ವಯಂ ಸೇವಕರು

ಉಕ್ರೇನ್‌ನಲ್ಲಿ ಸಿಲುಕಿದ್ದ ಬಂಗಾರಪೇಟೆ ಪಟ್ಟಣದ ತನುಶ್ರೀ ಮರಳಿ ಮನೆಗೆ ವಾಪಸ್‌ ಬಂದಾಗ ಬಿಜೆಪಿ ಮುಖಂಡರಾದ ಕೆ.ಚಂದ್ರಾರೆಡ್ಡಿ, ಮಹೇಶ್‌ ಭೇಟಿ ನೀಡಿ ಅಭಿನಂದಿಸಿದರು.

ಸಾವು ಕಣ್ಣೆದುರು ನಿಂತಿತ್ತು: ಉಕ್ರೇನಿಂದ ಬಂದ ವಿದ್ಯಾರ್ಥಿಗಳ ಮನದಾಳ ಮಾತು
ಸತತ ಒಂದು ವಾರ ಬಂಕರ್‌ಗಳಲ್ಲಿದ್ದು, ನಾಲ್ಕು ದಿನಗಳ ನಿರಂತರ ಪ್ರಯಾಣದ ಬಳಿಕ ಬಂದ ಮಕ್ಕಳನ್ನು ಪೋಷಕರು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಬರಮಾಡಿಕೊಂಡರು. ಮಕ್ಕಳ ಮುಖ ಕಂಡ ಕೂಡಲೇ ಕೊನೆಗೂ ಮಗ, ಮಗಳು ಬದುಕಿ ಬಂದರು ಎಂದು ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

Russia- Ukraine War ಅಮೆರಿಕ ಎಂಟ್ರಿ, ರಷ್ಯಾ-ಉಕ್ರೇನ್ ಮಧ್ಯೆ ಬಿರುಸಾಯ್ತು ಮಹಾ ಕಾಳಗ

ಈ ವೇಳೆ ಮಾತನಾಡಿದ ಬೆಂಗಳೂರಿನ ವಿದ್ಯಾರ್ಥಿನಿ ಅಂಕಿತಾ, ನವೀನ್‌ ಸಾವಿನ ಬಳಿಕ ತುಂಬಾ ನೋವಾಯ್ತು. ಆನಂತರ ನಿತ್ಯ ಭಯದಲ್ಲಿಯೇ ಬದುಕಿದ್ದೆವು. ನಾವು ಇರುವ ಸ್ಥಳದ ಅಕ್ಕಪಕ್ಕದಲ್ಲಿಯೇ ಬಾಂಬ್‌ ದಾಳಿ ಆಗ್ತಾ ಇತ್ತು. ಮನೆ ಕಿಟಕಿ ಬಾಗಿಲು ಎಲ್ಲ ಬಡೆದುಕೊಳ್ತಾ ಇದ್ದವು, ಕಟ್ಟಡವೇ ಕಂಪಿಸುತ್ತಿತ್ತು. ಯುದ್ಧ ಆರಂಭದ ಬಳಿಕ ಊಟ ಸಿಗ್ತಾ ಇರಲಿಲ್ಲ. ಗಡಿ ದಾಟಿದ ಬಳಿಕ ಭಾರತೀಯ ರಾಯಭಾರಿ ಸಿಬ್ಬಂದಿ ಎಲ್ಲಾ ವ್ಯವಸ್ಥೆಗಳೊಂದಿಗೆ ಸುರಕ್ಷಿತವಾಗಿ ಕರೆತಂದರು ಎಂದರು.

ವರ್ಷಿತಾ ಮಾತನಾಡಿ, ಖಾರ್ಕೀವ್‌ನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಹೊರಟೆವು. ನನ್ನ ಕಣ್ಣಾರೇ ಬಾಂಬ್‌ ಬೀಳುವುದುನ್ನು ನೋಡಿದೆ. ಗಡಿ ತಲುಪುವಾಗ ಮೆಟ್ರೋ ಒಳಗೆ ಭಾರತೀಯರನ್ನು ಬಿಡುತ್ತಿರಲಿಲ್ಲ, ಎರಡು ದಿನ ಊಟ ತಿಂಡಿ ಏನು ಸಿಗಲಿಲ್ಲ ಎಂದು ವರ್ಷಿತಾ ಅನುಭವವನ್ನು ಹಂಚಿಕೊಂಡರು.

ಉಕ್ರೇನ್‌ನಿಂದ ತವರಿಗೆ ಮರಳಿದ ಸೋಮು
ಯುದ್ಧ ಪೀಡಿತ ಉಕ್ರೇನ್‌ ದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪಟ್ಟಣದ ನಿವಾಸಿ ಆರ್‌.ಸೋಮು ಅವರು ಭಾನುವಾರ ತವರಿಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರಲ್ಲಿ ಮನೆ ಮಾಡಿದ್ದ ಆತಂಕವು ದೂರಗೊಂಡಿತು.

ಯುದ್ಧ ಆರಂಭವಾಗುವ ನಾಲ್ಕು ದಿನಗಳ ಮುಂಚೆ ಆಡಳಿತ ಮಂಡಳಿಯವರು ನಿಮ್ಮ ದೇಶಕ್ಕೆ ತೆರಳಬಹುದು ಎಂದು ತಿಳಿಸಿದ್ದರು. ಆದರೆ ವಿಮಾನ ದರ ಇದ್ದಕ್ಕಿದ್ದಂತೆ 40 ಸಾವಿರದಿಂದ 1.5 ಲಕ್ಷಕ್ಕೆ ಏರಿಕೆಯಾದ ಕಾರಣ ಅಲ್ಲೇ ಉಳಿಯುವ ಪರಿಸ್ಥಿತಿ ಬಂದಿತು. ಆರು ದಿನಗಳ ನಂತರ ಉಕ್ರೇನ್‌ ಸರ್ಕಾರ ರೈಲ್ವೆ ಮೂಲಕ ಹಂಗೇರಿಯ ದೇಶಕ್ಕೆ ತೆರಳಿಸುವ ವ್ಯವಸ್ಥೆ ಮಾಡಿತು. ಜಫೆä್ರೕಸಿಯಾ ವೈದ್ಯಕೀಯ ವಿಶ್ವವಿದ್ಯಾಲಯದಿಂದ ರೈಲಿನಲ್ಲಿ ಸಂಚರಿಸುವಾಗ ಎರಡು ದಿನಗಳವರೆಗೆ ಸರಿಯಾಗಿ ಆಹಾರ, ನೀರು ಸಿಗದೆ ಸಂಕಷ್ಟಅನುಭವಿಸಿದೆವು. ಭಾರತೀಯರ ಗುರುತಿಗಾಗಿ ಭಾರತದ ಧ್ವಜವನ್ನು ಹಾಕಿಕೊಳ್ಳಿ ಎಂಬ ಸಲಹೆ ನೀಡುತಿದ್ದರು. ಹಂಗೇರಿಯ ದೇಶದ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಬಂದೆವು ಎಂದು ವಿದ್ಯಾರ್ಥಿ ಸೋಮು ಕಹಿ ಅನುಭವವನ್ನು ಹಂಚಿಕೊಂಡರು.

click me!