
ಕೀವ್: ಅತ್ತ ಉಕ್ರೇನ್ನ 4 ಪ್ರಾಂತ್ಯಗಳನ್ನು ತನ್ನ ಭಾಗ ಎಂದು ರಷ್ಯಾ ಘೋಷಿಸಿಕೊಂಡಿದ್ದರೂ, ರಷ್ಯಾ ವಿರುದ್ಧದ ಪ್ರತಿದಾಳಿಯನ್ನು ಉಕ್ರೇನ್ ಮುಂದುವರಿಸಿದೆ. ಯುದ್ಧ ಆರಂಭದ ಬಳಿಕ ರಷ್ಯಾ ವಶಕ್ಕೆ ಹೋಗಿದ್ದ ಲೀಮ್ಯಾನ್ ಎಂಬ ನಗರವನ್ನು ಉಕ್ರೇನಿ ಪಡೆಗಳು ಭಾನುವಾರ ಮರುವಶ ಮಾಡಿಕೊಂಡಿವೆ.
ಲೀಮ್ಯಾನ್ (Lyman) ನಗರ ಉಕ್ರೇನ್ನ (Ukraine) ಪ್ರಮುಖ ಸಾರಿಗೆ ಹಾಗೂ ಸರಕು ಸಾಗಣೆ ಕೇಂದ್ರ ಎನ್ನಿಸಿಕೊಂಡಿದೆ. ಹೀಗಾಗಿ ಈ ನಗರ ರಷ್ಯಾ ಕೈಜಾರಿರುವುದು ಪುಟಿನ್ ಪಡೆಗಳಿಗೆ ಹಿನ್ನಡೆ ಎಂದು ಹೇಳಲಾಗಿದೆ. ಇತ್ತೀಚೆಗೆ ಅನೇಕ ಉಕ್ರೇನಿ ಭಾಗಗಳು ರಷ್ಯಾ(Russian) ಕೈಜಾರಿದ್ದವು ಹಾಗೂ ರಷ್ಯಾ ಸೈನಿಕರು ಅಲ್ಲಿಂದ ಓಡಿ ಹೋಗಿದ್ದರು. ಇದರ ಬೆನ್ನಲ್ಲೇ 4 ಪ್ರಾಂತ್ಯಗಳನ್ನು ತನ್ನ ಭಾಗ ಎಂದು ಘೋಷಿಸಿಕೊಂಡು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ರಷ್ಯಾ ವರ್ತಿಸಿತ್ತು.
ಆದರೆ ಇದೇ ವೇಳೆ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರ ತವರು ಪಟ್ಟಣವಾದ ಕ್ರಿವಿ ರಿಹ್ (Kryvyi Rih) ನಗರದ ಮೇಲೆ ರಷ್ಯಾ ಆತ್ಮಾಹುತಿ ಡ್ರೋನ್ ದಾಳಿ ನಡೆಸಿದೆ. ದಾಳಿ ವೇಳೆ 1 ಶಾಲೆ ನಾಶವಾಗಿದೆ. ಆದರೆ ರಷ್ಯಾದ ಇರಾನ್ ನಿರ್ಮಿತ 5 ಆತ್ಮಾಹುತಿ ಡ್ರೋನ್ (suicide drones)ನಾಶ ಮಾಡಿದ್ದಾಗಿ ಉಕ್ರೇನ್ ಹೇಳಿಕೊಂಡಿದೆ.
ಉಕ್ರೇನ್ ದೇಶದ ನಾಲ್ಕು ರಾಜ್ಯ ರಷ್ಯಾಕ್ಕೆ ಸೇರ್ಪಡೆ, ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್!
ರಷ್ಯಾ ವಿರುದ್ಧದ ಗೊತ್ತುವಳಿಗೆ ತಡೆ
ಉಕ್ರೇನ್ನ 4 ಪ್ರದೇಶಗಳನ್ನು ತನ್ನವು ಎಂದು ಘೋಷಿಸಿಕೊಂಡಿದ್ದ ರಷ್ಯಾ ಘೋಷಣೆ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮಂಡನೆಯಾಗಿದ್ದ ಗೊತ್ತುವಳಿಗೆ ತಡೆ ಬಿದ್ದಿದೆ. ರಷ್ಯಾ ತನ್ನ ವಿಟೋ ಅಧಿಕಾರ ಬಳಸಿ ಗೊತ್ತುವಳಿಗೆ ಬ್ರೇಕ್ ಹಾಕಿದೆ. ಈ ನಡುವೆ, ಗೊತ್ತುವಳಿ ಕುರಿತ ಮತದಾನದಿಂದ ಭಾರತ ದೂರ ಉಳಿದಿದೆ. ಈ ಮೂಲಕ ಈ ಹಿಂದಿನಂತೆ ತನ್ನ ತಟಸ್ಥ ಧೋರಣೆ ಮುಂದುವರಿಸಿದೆ. ಆದರೆ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದೆ.
ಅಮೆರಿಕ ಮತ್ತು ಅಲ್ಬೇನಿಯಾ ದೇಶಗಳು ಮಂಡಿಸಿದ ಈ ಕರಡು ಗೊತ್ತುವಳಿಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿರುವ 15 ದೇಶಗಳು ಈ ಕರಡು ಗೊತ್ತುವಳಿ ಮತದಾನ ಮಾಡಿದವು. 10 ದೇಶಗಳು ಗೊತ್ತುವಳಿಯ ಪರವಾಗಿ ಮತದಾನ ಮಾಡಿದರೆ, ಭಾರತ(India), ಚೀನಾ (China), ಗಬಾನ್ (Gabon) ಮತ್ತು ಬ್ರೆಜಿಲ್ಗಳು (Brazil) ಮತದಾನದಿಂದ ದೂರ ಉಳಿದವು. ಇದು ಅಂತಾರಾಷ್ಟ್ರೀಯವಾಗಿ ಗಡಿ ಗುರುತಿಸಲ್ಪಟ್ಟ ಉಕ್ರೇನ್ನ ಪ್ರದೇಶಗಳ ಮೇಲಿನ ರಷ್ಯಾ ದಾಳಿಯನ್ನು ಖಂಡಿಸುವ ಗೊತ್ತುವಳಿಯಾಗಿದೆ. ರಷ್ಯಾದ ವಶಕ್ಕೆ ಯಾವುದೇ ಮಾನ್ಯತೆ ಇಲ್ಲ ಹಾಗೂ ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಗೊತ್ತುವಳಿಯಲ್ಲಿ ಹೇಳಲಾಗಿದೆ.
ಇರಾನ್ನಲ್ಲಿ ವಿರೋಧಿ ಹಿಜಾಬ್ ಹೋರಾಟಕ್ಕೆ 75 ಬಲಿ: ಇರಾನ್ ಅಧ್ಯಕ್ಷ ಆಡಳಿತ ಅಂತ್ಯಕ್ಕೆ ಕರೆ
ಪರಮಾಣು ಸ್ಥಾವರ ಮುಖ್ಯಸ್ಥನ ಅಪಹರಣ
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರೆದ ಬೆನ್ನಲೇ ಯುರೋಪಿನ (Europe) ಅತೀ ದೊಡ್ಡ ಅಣು ಸ್ಥಾವರ ಉತ್ಪಾದಕನಾಗಿರುವ ಉಕ್ರೇನ್ನ ಅಣು ಸ್ಥಾವರ ಮುಖ್ಯಸ್ಥನನ್ನು ರಷ್ಯಾ ಅಪಹರಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಉಕ್ರೇನ್ ಮೇಲಿನ ರಷ್ಯಾ ದಾಳಿ ವೇಳೆಯೆ ಅಪಹರಣ ನಡೆದಿದೆ ಎನ್ನಲಾಗುತ್ತಿದೆ. ರಷ್ಯಾ ವಿರುದ್ಧ ಉಕ್ರೇನ್ ಪ್ರತಿ ದಾಳಿ ಹೆಚ್ಚಾಗಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ಪರಮಾಣು ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಪರಮಾಣು ಸ್ಥಾವರದ ಸುತ್ತಲಿನ ಪ್ರದೇಶ ಒಳಗೊಂಡಂತೆ ರಷ್ಯಾ ನಿಯಂತ್ರಿತ ಪ್ರದೇಶವನ್ನು ವಿಲೀನಗೊಳಿಸುವುದಾಗಿ ಪುಟಿನ್ ಎಚ್ಚರಿಕೆ ನೀಡಿದ್ದರು. ಉಕ್ರೇನ್ ಯುದ್ಧದ ನಡುವೆಯೂ ಅಣು ಸ್ಥಾವರ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿತ್ತು ಬಳಿಕ ಅದರ ಮರು ನಿರ್ಮಾಣ ಮಾಡಲಾಗಿತ್ತು. ಆದರೆ ರಷ್ಯಾ ಕೆಲ ಭಾಗಗಳನ್ನು ಬಲವಂತವಾಗಿ ಪಡೆದು ಕೊಂಡಿದೆ ಎಂದು ನ್ಯಾಟೋ (NATO) ಪ್ರತಿಪಾದಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ