
ನವದೆಹಲಿ: ಗ್ರಾಮೀಣ ಪ್ರದೇಶದ ಅಡುಗೆ ಅನಿಲ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ದೇಶೀಯ ಎಲ್ಪಿಜಿ ಸಿಲಿಂಡರ್ ಮರುಪೂರಣ (Re-fill) ಬುಕಿಂಗ್ಗಾಗಿ ಗ್ರಾಮೀಣ ಭಾಗದಲ್ಲಿ ಇದ್ದ ಕಡ್ಡಾಯ ಕಾಯುವ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಈ ಹೊಸ ಪರಿಷ್ಕರಣೆಯೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಎಲ್ಪಿಜಿ ಬುಕಿಂಗ್ ಮಧ್ಯಂತರ ನಿಯಮ ಒಂದೇ ಸಮನಾಗಿರಲಿದೆ.
ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಈ ವಿಷಯವನ್ನು ಪ್ರಕಟಿಸಿದ್ದು, ಈ ಹೊಸ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಸಂಘರ್ಷದಿಂದಾಗಿ ಪ್ರಮುಖ ನೌಕಾ ಮಾರ್ಗವಾದ 'ಹಾರ್ಮುಜ್ ಜಲಸಂಧಿ' ಬಂದ್ ಆಗಿತ್ತು. ಪರಿಣಾಮವಾಗಿ ಜಾಗತಿಕವಾಗಿ ಅನಿಲ ಸರಬರಾಜಿನಲ್ಲಿ ಭಾರಿ ಅಭಾವ ಸೃಷ್ಟಿಯಾಗಿತ್ತು. ಭಾರತದಲ್ಲೂ ಎಲ್ಪಿಜಿ ಅಭಾವ ಉಂಟಾಗದಂತೆ ತಡೆಯಲು ಮತ್ತು ಇಂಧನವನ್ನು ಸಮಾನವಾಗಿ ಹಂಚುವ ಉದ್ದೇಶದಿಂದ ಅಗತ್ಯ ಸರಕುಗಳ ಕಾಯ್ದೆಯಡಿ ಸರ್ಕಾರ ನಿರ್ಬಂಧಗಳನ್ನು ವಿಧಿಸಿತ್ತು. ಅದರಂತೆ, ನಗರ ಪ್ರದೇಶಗಳಲ್ಲಿ 25 ದಿನಗಳ ಬುಕಿಂಗ್ ಅಂತರವಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು 45 ದಿನಗಳಿಗೆ ಹೆಚ್ಚಿಸಲಾಗಿತ್ತು. ಜೊತೆಗೆ C3 ಮತ್ತು C4 ಅನಿಲಗಳನ್ನು ಕೇವಲ ಎಲ್ಪಿಜಿಗೆ ಬಳಸುವಂತೆ ಸೂಚಿಸಲಾಗಿತ್ತು.
ಪ್ರಸ್ತುತ ದೇಶದಲ್ಲಿ ಎಲ್ಪಿಜಿ ಪೂರೈಕೆ ಸ್ಥಿತಿಗತಿ ಸಂಪೂರ್ಣ ಸುಧಾರಿಸಿದೆ. ಮರುಪೂರಣ ಬಾಕಿ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಹೀಗಾಗಿ ಗ್ರಾಮೀಣ ಗ್ರಾಹಕರ ಮೇಲಿದ್ದ ನಿಯಮವನ್ನು ಸಡಿಲಗೊಳಿಸಲಾಗಿದೆ. ಈಗ ದೇಶದ ಯಾವುದೇ ಭಾಗದ ಉದ್ಯೋಗಿ ಅಥವಾ ನಾಗರಿಕ, ನಗರ-ಗ್ರಾಮೀಣ ಭೇದವಿಲ್ಲದೆ ಪ್ರತಿ 25 ದಿನಗಳ ಅಂತರದಲ್ಲಿ ಮುಂದಿನ ಸಿಲಿಂಡರ್ ಬುಕ್ ಮಾಡಬಹುದು ಎಂದು ಸಚಿವ ಸುರೇಶ್ ಗೋಪಿ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದರೊಂದಿಗೆ ಗ್ರಾಮೀಣ ಭಾಗದ ಮನೆಗಳಿಗೆ ಎಲ್ಪಿಜಿ ಸಿಲಿಂಡರ್ ಕಾಯುವಿಕೆ ಅವಧಿ 20 ದಿನಗಳು ಕಡಿಮೆಯಾದಂತಾಗಿದೆ. ಜೂನ್ ತಿಂಗಳ ಆರಂಭದಲ್ಲೇ ಸರ್ಕಾರ ವಾಣಿಜ್ಯ ಬಳಕೆಯ ಎಲ್ಪಿಜಿ ಮೇಲಿದ್ದ ನಿರ್ಬಂಧಗಳನ್ನೂ ಹಿಂಪಡೆದು, ಕೈಗಾರಿಕೆಗಳಿಗೆ ಯುದ್ಧಪೂರ್ವದಲ್ಲಿದ್ದಂತೆ ಶೇ. 50ರಷ್ಟು ಸರಬರಾಜಿಗೆ ಹಸಿರು ನಿಶಾನೆ ತೋರಿಸಿತ್ತು.
ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮವಾಗಿ ಭಾರತದಲ್ಲಿ ಅಡುಗೆ ಅನಿಲ ದರ ಏರಿಕೆಯಾಗಿತ್ತು. ಮಾರ್ಚ್ನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ ₹60 ಹಾಗೂ ಜೂನ್ನಲ್ಲಿ ₹29 ಏರಿಕೆಯಾಗಿತ್ತು (ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ ₹942 ತಲುಪಿತ್ತು). ಇತ್ತೀಚೆಗಷ್ಟೇ 19 ಕೆಜಿ ವಾಣಿಜ್ಯ ಸಿಲಿಂಡರ್ ದರದಲ್ಲೂ ₹9.50 ಹೆಚ್ಚಳ ಮಾಡಲಾಗಿತ್ತು.
ಆದರೆ, ಈಗ ಪೂರೈಕೆ ಸರಿಹೋಗಿರುವುದರಿಂದ ಹೊಸ ರೀಫಿಲ್ ಬುಕಿಂಗ್ ಮಧ್ಯಂತರ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಗ್ರಾಮೀಣ ಭಾಗದ ಕುಟುಂಬಗಳಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ