
ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಐದು ಅಂತಸ್ತಿನ ಕಟ್ಟಡ ಕುಸಿತದ ದುರಂತವು ಇಡೀ ರಾಷ್ಟ್ರ ರಾಜಧಾನಿಯನ್ನೇ ಬೆಚ್ಚಿಬೀಳಿಸಿದೆ. ಆರು ಅಮಾಯಕರ ಜೀವ ಬಲಿ ಪಡೆದ ಈ ಘಟನೆ ಬರೀ ಅಪಘಾತವಲ್ಲ, ಬದಲಿಗೆ ಜವಾಬ್ದಾರಿಯಿಲ್ಲದ ಆಡಳಿತ ವ್ಯವಸ್ಥೆ ಮಾಡಿದ 'ಕೊಲೆ' ಎಂದೇ ವಿಶ್ಲೇಷಿಸಲಾಗುತ್ತಿದೆ. ಕೆಲವೇ ತಿಂಗಳ ಹಿಂದೆ ರಾಜೇಂದ್ರ ನಗರ ಮತ್ತು ಮುಖರ್ಜಿ ನಗರಗಳಲ್ಲಿ ಇಂತಹದ್ದೇ ಘಟನೆಗಳು ನಡೆದಿದ್ದರೂ, ಅಧಿಕಾರಿಗಳು ಯಾವುದೇ ಪಾಠ ಕಲಿತಿಲ್ಲ ಎಂಬುದಕ್ಕೆ ಈ ದುರಂತ ಸಾಕ್ಷಿಯಾಗಿದೆ. ದುರಂತ ಸಂಭವಿಸಿದ ಮರುದಿನವೇ ಎಂಸಿಡಿ (MCD) ಹತ್ತಿರದ ಕಟ್ಟಡಗಳನ್ನು ಅಪಾಯಕಾರಿ ಎಂದು ಘೋಷಿಸಿ ತೆರವುಗೊಳಿಸಲು ಆದೇಶಿಸಿದೆ. ಆದರೆ ಈ ಎಚ್ಚರಿಕೆ ಘಟನೆಗೂ ಮೊದಲೇ ಏಕಿರಲಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.
ಇಂತಹ ಭೀಕರ ಅನಾಹುತಗಳು ಮತ್ತು ಅಕ್ರಮ ನಿರ್ಮಾಣಗಳನ್ನು ಕಂಡಾಗ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅತ್ಯಂತ ಪ್ರೀತಿಯ ಹಾಗೂ ನಿಕಟವರ್ತಿಯಾಗಿದ್ದ ಮಾಜಿ ನಗರಾಭಿವೃದ್ಧಿ ಸಚಿವ ಜಗಮೋಹನ್ ಮಲ್ಹೋತ್ರಾ ನೆನಪಾಗುತ್ತಾರೆ. ಅವರು ವಾಜಪೇಯಿ ಸರ್ಕಾರದಲ್ಲಿ ಇನ್ನಷ್ಟು ದಿನ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರೆ, ಇಂದಿನ ದೆಹಲಿಯ ಮುಖಚಹರೆಯೇ ಬದಲಾಗುತ್ತಿತ್ತು ಮತ್ತು ಸತ್ಯನಿಕೇತನದಂತಹ ದುರಂತಗಳು ತಡೆಯಲ್ಪಡುತ್ತಿದ್ದವು ಎಂಬ ಚರ್ಚೆ ಶುರುವಾಗಿದೆ.
ಜಗಮೋಹನ್ ಅವರು ಕೇವಲ ಫೈಲ್ಗಳನ್ನು ವಿಲೇವಾರಿ ಮಾಡುವ ಸಾಮಾನ್ಯ ಸಚಿವರಾಗಿರಲಿಲ್ಲ. ಪ್ರಭಾವಿ ಐಎಎಸ್ (IAS) ಅಧಿಕಾರಿಯಾಗಿದ್ದ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ, ನಂತರ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ 1998 ರಿಂದ 2001 ರ ಅವಧಿಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದರು. ದೆಹಲಿ ನಗರವು ವೇಗವಾಗಿ ಬೆಳೆಯುತ್ತಾ, ಅಕ್ರಮ ನಿರ್ಮಾಣ ಮತ್ತು ಅತಿಕ್ರಮಣ ಹೆಚ್ಚಾಗುತ್ತಿದ್ದ ಸಮಯದಲ್ಲಿ ಜಗಮೋಹನ್ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
ಅಕ್ರಮ ಕಟ್ಟಡಗಳು ಮತ್ತು ಅತಿಕ್ರಮಣ ಕಂಡರೆ ಜಗಮೋಹನ್ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತಿದ್ದರು. ಎಂಸಿಡಿ (MCD), ಡಿಡಿಎ (DDA) ಹಾಗೂ ಎನ್ಡಿಎಂಸಿ (NDMC) ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಅಕ್ರಮ ನಿರ್ಮಾಣಗಳನ್ನು ತಕ್ಷಣವೇ ಕೆಡವಲು ಆದೇಶಿಸುತ್ತಿದ್ದರು. ಅಷ್ಟೇ ಅಲ್ಲ, ಕಟ್ಟಡ ಕೆಡವಲು ತಗುಲುವ ವೆಚ್ಚವನ್ನು ಅಕ್ರಮ ಎಸಗಿದವರಿಂದಲೇ ವಸೂಲಿ ಮಾಡಲು ನಿರ್ದೇಶಿಸಿದ್ದರು. ಅವರು ಸ್ವತಃ ತನಿಖೆ ನಡೆಸಿ ಬೆಂಕಿಯ ಅಪಾಯವಿರುವ ಸರ್ಕಾರಿ ಆವರಣಗಳನ್ನು ಶುಚಿಗೊಳಿಸುತ್ತಿದ್ದರು. ನಗರವು ಕೇವಲ ಸುಂದರವಾಗಿರಬಾರದು, ಸುರಕ್ಷಿತವಾಗಿರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಈ ಕಠಿಣ ನಿಲುವಿನಿಂದಾಗಿ ವಿಪಕ್ಷಗಳಿಂದಷ್ಟೇ ಅಲ್ಲದೆ, ಸ್ವಪಕ್ಷದೊಳಗಿನ ರಾಜಕೀಯ ಒತ್ತಡಗಳಿಂದಾಗಿ ಅವರನ್ನು ಅಲ್ಪಾವಧಿಯಲ್ಲೇ ಆ ಸಚಿವಾಲಯದಿಂದ ವರ್ಗಾಯಿಸಲಾಯಿತು.
ತುರ್ತು ಪರಿಸ್ಥಿತಿಯ ಸಮಯದಲ್ಲಿ ಡಿಡಿಎ ಉಪಾಧ್ಯಕ್ಷರಾಗಿದ್ದ ಜಗಮೋಹನ್, ಸಂಜಯ್ ಗಾಂಧಿ ಅವರ ನಗರ ಸುಂದರೀಕರಣ ಯೋಜನೆಯನ್ನು ಜಾರಿಗೊಳಿಸಿದರು. ಹಳೆಯ ದೆಹಲಿಯ ಕೊಳೆಗೇರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುನ್ನಡೆಸಿದರು. ಆದರೆ, ಟರ್ಕ್ಮನ್ ಗೇಟ್ ಪ್ರದೇಶದಲ್ಲಿ ನಡೆದ ಬಲವಂತದ ತೆರವು ಮತ್ತು ಪೊಲೀಸ್ ಗುಂಡಿನ ಚಕಮಕಿ ಅವರ ಆಡಳಿತಾವಧಿಯ ದೊಡ್ಡ ವಿವಾದವಾಗಿ ಉಳಿಯಿತು. ಹೀಗಾಗಿ ಅವರು ಕಠಿಣ ಮತ್ತು ಕ್ರಿಯಾಶೀಲ ಆಡಳಿತಗಾರರಾಗಿದ್ದರೂ, ಅವರ ಕೆಲವು ನಿರ್ಧಾರಗಳು ಜನಸಾಮಾನ್ಯರಿಗೆ ನೋವು ತಂದಿದ್ದವು.
ಜಗಮೋಹನ್ ಅವರ ಕಾರ್ಯವೈಖರಿಯ ದೊಡ್ಡ ವೈಶಿಷ್ಟ್ಯವೆಂದರೆ, ಅವರು ದುರಂತ ಸಂಭವಿಸುವವರೆಗೆ ಕಾಯುತ್ತಿರಲಿಲ್ಲ. ಸಮಸ್ಯೆ ಕಂಡ ತಕ್ಷಣವೇ ದಾಳಿ ಮಾಡುವುದು, ಅಕ್ರಮ ಕಟ್ಟಡಗಳನ್ನು ಕೆಡವುದು ಮತ್ತು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಅವರ ಶೈಲಿಯಾಗಿತ್ತು. ಇಂದಿನ ದೆಹಲಿಗೆ ಅಂತಹದ್ದೇ ದಾಷ್ಟ್ರ್ಯದ ಆಡಳಿತ ಅಗತ್ಯವಿದೆ. ದುರಂತ ನಡೆದ ಮೇಲೆ ಎಫ್ಐಆರ್ ಹಾಕುವುದು, ತನಿಖೆ ನಡೆಸುವುದು ಮತ್ತು ನಷ್ಟ ಪರಿಹಾರ ನೀಡುವುದರಿಂದ ಸತ್ತ ಜೀವಗಳು ಮರಳಿ ಬರುವುದಿಲ್ಲ. ಸತ್ಯನಿಕೇತನದಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂದರೆ, ಅಕ್ರಮ ನಿರ್ಮಾಣಗಳ ವಿರುದ್ಧ 'ಜಗಮೋಹನ್ ಮಾಡೆಲ್'ನಂತೆ ದಾಳಿ ನಡೆಸುವ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೆ ಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ