
ಮುಂಬೈ(ಅ.10) ರತನ್ ಟಾಟಾ ನಿಧನಕ್ಕೆ ಭಾರತ ಕಂಬನಿ ಮಿಡಿಯುತ್ತಿದೆ. ಶ್ರೀಮಂತ ಉದ್ಯಮಿಯಾಗಿದ್ದರೂ ರತನ್ ಟಾಟಾ ಅತ್ಯಂತ ಸರಳ ವ್ಯಕ್ತಿತ್ವ. ಆಡಂಬರ ಜೀವನವಿಲ್ಲ, ಮಾತುಗಳಿಲ್ಲ, ನೇರ ನುಡಿ, ಎಲ್ಲರೊಂದಿಗೆ ಬೆರೆಯುವ ಸಾಮಾನ್ಯರಲ್ಲಿ ಸಾಮಾನ್ಯರಾಗುವ ಹೃದಯ ಶ್ರೀಮಂತಿಕೆಯೂ ಟಾಟಾಗಿತ್ತು. ಜಗತ್ತಿನ ಶ್ರೀಮಂತ ವ್ಯಕ್ತಿ ಈ ರೀತಿ ಇರಲು ಸಾಧ್ಯವೇ ಅನ್ನೋ ಅನುಮಾನ ಮೂಡಿದರೂ ಅಚ್ಚರಿ ಇಲ್ಲ. ಕೊನೆಯದಾಗಿ ರತನ್ ಟಾಟಾ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ವಿಡಿಯೋ ಮತ್ತೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರತನ್ ಟಾಟಾ ಅವರ ಸರಳತೆ ಇನ್ಯಾರಲ್ಲೂ ಕಾಣಲು ಸಾಧ್ಯವಿಲ್ಲ.
ರತನ್ ಟಾಟಾ ಹುಟ್ಟಿದ ದಿನ ಡಿಸೆಂಬರ್ 28. ಆದರೆ ರತನ್ ಟಾಟಾ ತಮ್ಮ ಹುಟ್ಟು ಹಬ್ಬವನ್ನು ಯಾವತ್ತೂ ಸಂಭ್ರಮವಾಗಿ, ಅದ್ಧೂರಿಯಾಗಿ ಆಚರಿಸಿಕೊಂಡವರಲ್ಲ. ರತನ್ ಟಾಟಾ ಅವರನ್ನು ಹತ್ತಿರದಿಂದ ಬಲ್ಲವರೂ ಹುಟ್ಟುಹಬ್ಬವನ್ನು ಅವರಿಗೆ ಗೊತ್ತಿಲ್ಲದೆ ಅದ್ಧೂರಿಯಾಗಿ ಆಚರಿಸುವ ಪ್ರಯತ್ನಕ್ಕೂ ಕೈಹಾಕಿಲ್ಲ. ಕಾರಣ ಈ ರೀತಿಯ ಸಂಭ್ರಮಾಚರಣೆಗೆ ಟಾಟಾ ಗೈರಾಗುತ್ತಿದ್ದರು. ರತನ್ ಟಾಟಾ ಕೊನೆಯಾಗಿ ತಮ್ಮ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿದ್ದು 2021ರಲ್ಲಿ.
ರತನ್ ಟಾಟಾ ಮುದ್ದಿನ ಸಾಕು ನಾಯಿಯಿಂದ ಅಂತಿಮ ದರ್ಶನ, ಮನಕಲುಕಿದ ದೃಶ್ಯ!
2022, 2023ರಲ್ಲೂ ರತನ್ ಟಾಟಾ ಹುಟ್ಟು ಹಬ್ಬ ಆಚರಿಸಿದ್ದಾರೆ. ಎಂದಿನಂತೆ ಇದು ಕೂಡ ಸಾಮಾನ್ಯ ಹುಟ್ಟು ಹಬ್ಬ. ಇದರ ವಿಡಿಯೋ ಕೂಡ ಲಭ್ಯವಿಲ್ಲ. ಆದರೆ 2021ರಲ್ಲಿ ರತನ್ ಟಾಟಾ ಆತ್ಮೀಯ, ಅಸಿಸ್ಟೆಂಟ್ ಶಂತನು ನಾಯ್ಡು ಸಣ್ಣ ಕಪ್ ಕೇಕ್ ತಂದು ಟೇಬಲ್ ಮೇಲಿಟ್ಟು ಹುಟ್ಟು ಹಬ್ಬ ಆಚರಿಸಿದ್ದರು. ಈ ಕೇಕ್ ಗಾತ್ರ ಅತ್ಯಂತ ಸಣ್ಣದು. ಇಷ್ಟೇ ಅಲ್ಲ ಇದು ಪೇಸ್ಟ್ರಿ, ಕ್ರೀಮ್ ಕೇಕ್ಗಳಲ್ಲ. ಸಣ್ಣ ಕಪ್ ಕೇಕ್, ಇದರ ಮೇಲೆ ಎರಡಕ್ಷರ ಬರೆಯಲು ಜಾಗವಿಲ್ಲ. ಇಷ್ಟೇ ಅಲ್ಲ ಹ್ಯಾಪಿ ಬರ್ತ್ ಡೇ ಸೇರಿಂತೆ ಯಾವುದೇ ಶುಭಾಶಯ ಈ ಕೇಕ್ ಮೇಲಿಲ್ಲ.
ಕುರ್ಚಿಯಲ್ಲಿ ಕುಳಿತುಕೊಂಡ ರತನ್ ಟಾಟಾ, ಕೇಕ್ ಮೇಲೆ ಹಚ್ಚಿದ್ದ ಕ್ಯಾಂಡಲ್ ನಂದಿಸಿ ಹುಟ್ಟು ಹಬ್ಬ ಆಚರಿಸಿದ್ದರು. ಶಂತನು ನಾಯ್ಡು ಚಪ್ಪಾಳೆ ತಟ್ಟಿ ಹ್ಯಾಪಿ ಬರ್ತ್ ಡೇ ಟು ಯೂ ಎಂದಿದ್ದರು. ಬಳಿಕ ಟಾಟಾಗೆ ಕೇಕ್ ಸಣ್ಣ ಪೀಸ್ ತೆಗೆದು ತಿನ್ನಿಸಿದ್ದರು. ವಿಶೇಷ ಅಂದರೆ ರತನ್ ಟಾಟಾ ಸುತ್ತ ಮುತ್ತ ಯಾರೂ ಇಲ್ಲ. ಗಣ್ಯ ವ್ಯಕ್ತಿಗಳಿಲ್ಲ, ಅದ್ಧೂರಿ ಕಾರ್ಯಕ್ರಮವಿಲ್ಲ, ಎಲ್ಲವೂ ಸರಳತೆ.
86ನೇ ವಯಸ್ಸಿನಲ್ಲಿ ರತನ್ ಟಾಟಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಕ್ಟೋಬರ್ 9, 2024ರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ನಿಧರಾಗಿದ್ದರು. ಕೆಲ ದಿನಗಳ ಹಿಂದೆ ರತನ್ ಟಾಟಾ ಆರೋಗ್ಯ ಏರುಪೇರು ಸುದ್ದಿ ಹರಿದಾಡಿತ್ತು. ಈ ವೇಳೆ ರತನ್ ಟಾಟಾ ಸ್ಪಷ್ಟನೆ ನೀಡಿದ್ದರು. ತಾನು ಆರೋಗ್ಯವಾಗಿದ್ದೇನೆ, ವದಂತಿಗಳಿಂದ ದೂರವಿರಿ. ವಯಸ್ಸು, ಆರೋಗ್ಯ ಸಂಬಂಧಿಸಿದ ಮೆಡಿಕಲ್ ಚೆಕ್ಅಪ್ನಲ್ಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಈ ಸ್ಪಷ್ಟನೆಯಿಂದ ಎಲ್ಲರು ನಿರಾಳರಾಗಿದ್ದರು. ಆದರೆ ಅಕ್ಟೋಬರ್ 9 ರಾತ್ರಿ ರತನ್ ಟಾಟಾ ಇನ್ನಿಲ್ಲ ಅನ್ನೋ ಸುದ್ದಿ ಆಘಾತ ನೀಡಿತ್ತು.
ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿ ಭಾವುಕರಾದ ವಿವಾದಿತ ಉದ್ಯಮಿ ವಿಜಯ್ ಮಲ್ಯ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ