
ನವದೆಹಲಿ (ಜು,23): ಇಸ್ರೇಲಿ ಸಾಫ್ಟ್ವೇರ್ ಪೆಗಾಸಸ್ ಬಳಸಿ ದೇಶದಲ್ಲಿ 400 ಮಂದಿಯ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿ ರಾಜ್ಯಸಭೆಯಲ್ಲಿ ಗುರುವಾರ ರಾದ್ಧಾಂತಕ್ಕೆ ಕಾರಣವಾಗಿದೆ. ಈ ವಿವಾದ ಕುರಿತು ಹೇಳಿಕೆ ನೀಡಲು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಆರಂಭಿಸುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ವ್ಯಗ್ರರಾಗಿದ್ದಾರೆ. ಸಚಿವರ ಹೇಳಿಕೆ ಪ್ರತಿಯನ್ನು ಕಸಿದು, ಅದನ್ನು ಹರಿದು ರಾಜ್ಯಸಭೆ ಉಪಸಭಾಪತಿಯತ್ತ ಗಾಳಿಯಲ್ಲಿ ತೂರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪ ಬಲಿಯಾಗಿದೆ.
ಪೆಗಾಸಸ್ ವಿಚಾರವಾಗಿ ಚರ್ಚೆ, ಈ ಸುದ್ದಿ ಹಿಂದೆ ಯಾರಿದ್ದಾರೆಂದು ತಿಳಿಯೋಣ: ಆರ್ಸಿ
ಪೆಗಾಸಸ್ ವಿವಾದದ ಕುರಿತು ಹೇಳಿಕೆ ನೀಡುವಂತೆ ವೈಷ್ಣವ್ ಅವರಿಗೆ ಉಪಸಭಾಪತಿಗಳು ಸೂಚಿಸಿದರು. ಕೂಡಲೇ ತೃಣಮೂಲ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿದರು. ನಮಗೆ ಸಚಿವರ ಹೇಳಿಕೆ ಬೇಕಿಲ್ಲ. ವಿವಾದದ ಕುರಿತು ತನಿಖೆಯಾಗಬೇಕು ಹಾಗೂ ಸದನದಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು. ವೈಷ್ಣವ್ ಅವರು ಹೇಳಿಕೆ ನೀಡಲು ಮುಂದಾಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್ ಅವರು ಸಚಿವರ ಹೇಳಿಕೆ ಪ್ರತಿಯನ್ನು ಕಸಿದು, ಹರಿದು ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರತ್ತ ತೂರಿದರು.
ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರು ತೃಣಮೂಲ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾರ್ಷಲ್ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ