ಪ್ರಧಾನಿ ಚಿಂತನೆ ಬದಲಿಸಬೇಕು, ಮೋದಿ ವಿರುದ್ಧ ಗುಡುಗಿದ ಆಪ್ತ ರಾಜ್ ಠಾಕ್ರೆ!

By Chethan KumarFirst Published Oct 31, 2022, 5:04 PM IST
Highlights

ಸದಾ ಪ್ರಧಾನಿ ಮೋದಿ ಬೆಂಬಲಕ್ಕೆ ನಿಲ್ಲುವ ರಾಜ್ ಠಾಕ್ರೆ ಇದೀಗ ಯೂ ಟರ್ನ್ ಹೊಡೆದಿದ್ದಾರೆ. ಮೋದಿ ತಮ್ಮ ಯೋಚನೆ ಬದಲಿಸಬೇಕು. ಮೋದಿಯ ಸಂಕುಚಿತ ಮನೋಭಾವನೆಯಿಂದ ಹೊರಬರಬೇಕು. ಈ ವಿಚಾರದಲ್ಲಿ ಮೋದಿ ಜೊತೆ ನಿಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

ಮುಂಬೈ(ಅ.31);  ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಬಂಡಾಯ ಶಿವಸೇನೆ ನಾಯಕರ ಮೈತ್ರಿ ಸರ್ಕಾರ ರಚನೆಯಾದ ಬಳಿಕ ರಾಜಕೀಯ ಹೈಡ್ರಾಮ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಪ್ರತಿಪಕ್ಷಗಳು ಟೀಕಿಸುತ್ತಲೆ ಇದೆ. ಮೋದಿ ವಿರುದ್ಧ ಆಪ್ತ ಹಾಗೂ ಸದಾ ಬೆಂಬಲ ಸೂಚಿಸುತ್ತಿದ್ದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಗುಡುಗಿದ್ದಾರೆ. ಮಹಾರಾಷ್ಟ್ರದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದ ಹಲವು ಖಾಸಗಿ ಕಂಪನಿಗಳು, ಕೈಗಾರಿಕೆಗಳು, ಉದ್ಯಮಗಳು ಗುಜರಾತ್ ಪಾಲಾಗುತ್ತಿದೆ. ಇದರ ವಿರುದ್ಧ ರಾಜ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಪ್ರಧಾನಿ. ಕೇವಲ ಒಂದು ರಾಜ್ಯಕ್ಕಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿನ ಹೂಡಿಕೆಗಳು ಕೊನೆ ಕ್ಷಣದಲ್ಲಿ ನೇರವಾಗಿ ಗುಜರಾತ್ ಪಾಲಾಗುತ್ತಿರುವುದು ಹೇಗೆ? ಎಂದು ರಾಜ್ ಠಾಕ್ರೆ ಮೋದಿ ವಿರುದ್ಧ ಗುಡುಗಿದ್ದಾರೆ.

ಮಹರಾಷ್ಟ್ರದಲ್ಲಿ ಹೂಡಿಕೆಯಾಗಬೇಕು, ರಾಜ್ಯದಲ್ಲಿ ಮತ್ತಷ್ಟು ಉದ್ಯೋಗವಕಾಶ ಸೃಷ್ಟಿಯಾಗಬೇಕು. ಕೇವಲ ಗುಜರಾತ್ ಅಭಿವೃದ್ಧಿ ಸಾಕಾಗಲ್ಲ. ಮೋದಿ ತವರು ಗುಜರಾತ್ ಅನ್ನೋ ಕಾರಣಕ್ಕೆ ಎಲ್ಲಾ ಹೂಡಿಕೆ ಗುಜರಾತ್‌ನಲ್ಲಿ ಆಗಬೇಕು ಎಂದು ಬಯಸುವುದು ತಪ್ಪು. ಸರ್ಕಾರದ ಪ್ರಯತ್ನದಿಂದ ಮಹಾರಾಷ್ಟ್ರದಲ್ಲಿ ಹೂಡಿಕೆಗಳು, ಕೈಗಾರಿಕೆಗಳು ಬೆಳೆಯಬೇಕು ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ನೂಪುರ್ ಶರ್ಮಾ ಬಳಿ ಕ್ಷಮೆ ಕೇಳುವ ಮಂದಿ ಝಾಕಿರ್ ಬಳಿ ಯಾಕೆ ಕೇಳಿಲ್ಲ? ಬಿಜೆಪಿ ನಾಯಕಿ ಬೆಂಬಲಕ್ಕೆ ಠಾಕ್ರೆ!

ಪ್ರತಿ ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು, ಹೂಡಿಕೆ ಹೆಚ್ಚಾಗಬೇಕು. ಇದರಿಂದ ಆಯಾ ರಾಜ್ಯದ ಜನರು ಬೇರೆ ರಾಜ್ಯಕ್ಕೆ ವಲಸೆ ಹೋಗುವುದು ತಪ್ಪುತ್ತದೆ. ಆದರೆ ಈ ಕೈಗಾರಿಕೆಗಳು ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗುವುದು ಉಚಿತವಲ್ಲ. ಇದೀಗ ಮಹಾರಾಷ್ಟ್ರಕ್ಕೆ ಹಲವು ಖಾಸಗಿ ಕಂಪನಿಗಳು ಹೂಡಿಕೆ ಮಾಡಲು ಬರುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ಗುಜರಾತ್ ಪಾಲಾಗುತ್ತಿದೆ ಎಂದು ರಾಜ್ ಠಾಕ್ರೆ ಆಕ್ರೋಶ ಹೊರಹಾಕಿದ್ದಾರೆ. 

ವೇದಾಂತ ಫಾಕ್ಸ್‌ಕಾನ್, ಟಾಟಾ  ಏರ್‌ಬಸ್ ಕಂಪನಿಗಳು ಮಹಾರಾಷ್ಟ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬಂದು ಕೊನೆಗೆ ಗುಜರಾತ್‌ನಲ್ಲಿ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರಕ್ಕೆ ರಾಜ್ ಠಾಕ್ರೆ ಮೋದಿ ವಿರುದ್ಧ ಗರಂ ಆಗಿದ್ದಾರೆ. 

ಗುಜರಾತ್‌ನಲ್ಲಿ ಇತ್ತೀಚೆಗೆ ಟಾಟಾ ಏರ್‌ಬಸ್ ಘಟಕಕ್ಕೆ ಶಂಕುಸ್ಥಾಪನೆ
ವಿಮಾನ ಉತ್ಪಾದನಾ ಕಂಪನಿ ಏರ್‌ಬಸ್‌ನ ಮಿಲಿಟರಿ ಸರಕು ವಿಮಾನಗಳ ಉತ್ಪಾದನಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ವಡೋದರಾದಲ್ಲಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತ ಇಂದು ಜಗತ್ತಿನ ದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ. ಸರ್ಕಾರದ ನೀತಿಗಳು ಸ್ಥಿರವಾಗಿದ್ದು, ಅವು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಿತವಾಗುತ್ತಿವೆ. ಇದು ‘ಮೇಕ್‌ ಇನ್‌ ಇಂಡಿಯಾ’ ಹಾಗೂ ‘ಮೇಕ್‌ ಫಾರ್‌ ವಲ್ಡ್‌ರ್‍’ ನೀತಿಗೆ ಒತ್ತು ನೀಡುತ್ತಿದೆ ಎಂದು ಹೇಳಿದ್ದರು. ವಡೋದರಾದಲ್ಲಿ ನಿರ್ಮಾಣವಾಗುವ ಏರ್‌ಬಸ್‌ ಘಟಕವು ಯುರೋಪ್‌ನ ಹೊರಗೆ ನಿರ್ಮಾಣವಾಗುತ್ತಿರುವ ಮೊದಲ ಸಿ295 ಸರಕು ವಿಮಾನ ಉತ್ಪಾದನಾ ಘಟಕವಾಗಿದೆ. ಟಾಟಾ ಕಂಪನಿಯ ಸಹಭಾಗಿತ್ವದಲ್ಲಿ ಇದು ನಿರ್ಮಾಣವಾಗುತ್ತಿದೆ. ಇಲ್ಲಿ ತಯಾರಾಗುವ ಸರಕು ಯುದ್ಧ ವಿಮಾನಗಳನ್ನು ಮೊದಲಿಗೆ ಭಾರತೀಯ ವಾಯುಪಡೆಗೆ ಪೂರೈಕೆ ಮಾಡಲಾಗುತ್ತದೆ. ಇದು ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಖಾಸಗಿ ಮಿಲಿಟರಿ ವಿಮಾನ ಕಾರ್ಖಾನೆಯಾಗಿದೆ.

click me!