
ಡೆಹ್ರಾಡೂನ್(ಫೆ.10): ಉತ್ತರಾಖಂಡದಲ್ಲಿ ಕಳೆದ ಭಾನುವಾರ ಸಂಭವಿಸಿದ ಘೋರ ‘ಹಿಮಸುನಾಮಿ’ಯ ಹಿಂದಿನ ನಿಖರ ಕಾರಣಕ್ಕೆ ಹುಡುಕಾಟ ನಡೆಯುತ್ತಿರುವಾಗಲೇ, ವಿನಾಶಕಾರಿ ಪ್ರವಾಹಕ್ಕೆ ವಿಕಿರಣಯುಕ್ತ ಉಪಕರಣವೇ ಕಾರಣವಿದ್ದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಕ್ಕಿಂನಲ್ಲಿರುವ ಕಾಂಚನಜುಂಗ ನಂತರ ಉತ್ತರಾಖಂಡದ ನಂದಾದೇವಿ ದೇಶದ ಎರಡನೇ ಅತ್ಯಂತ ಎತ್ತರದ ಪರ್ವತವಾಗಿದೆ. ಇದರ ಮೇಲೆ ಅಣು ಚಾಲಿತ ಸರ್ವೇಕ್ಷಣಾ ಉಪಕರಣವನ್ನು ಇಟ್ಟು ಚೀನಾ ಮೇಲೆ ಬೇಹುಗಾರಿಕೆ ನಡೆಸಲು ಅಮೆರಿಕದ ಗೂಢಚರ ಸಂಸ್ಥೆ ಸಿಐಎ ಹಾಗೂ ಭಾರತದ ಗುಪ್ತಚರ ದಳ ನಿರ್ಧರಿಸಿತ್ತು. ಇದಕ್ಕಾಗಿ 1965ರಲ್ಲಿ ವಿಕಿರಣಯುಕ್ತ ಉಪಕರಣವನ್ನು ಪರ್ವತಕ್ಕೆ ಸಾಗಿಸಲಾಗುತ್ತಿತ್ತು. ಆದರೆ ಆ ಸಂದರ್ಭದಲ್ಲಿ ಹಿಮ ಬಿರುಗಾಳಿ ಉಂಟಾಗಿ ಉಪಕರಣವನ್ನು ಬೆಟ್ಟದಲ್ಲೇ ಬಿಟ್ಟು ಅಧಿಕಾರಿಗಳು ವಾಪಸ್ ಹೋಗಿದ್ದರು. ಒಂದು ವರ್ಷ ಬಳಿಕ ಮತ್ತೆ ಆ ಸ್ಥಳಕ್ಕೆ ಹೋದಾಗ ಉಪಕರಣ ಪತ್ತೆಯಾಗಿರಲಿಲ್ಲ. ಸಾಕಷ್ಟುಬಾರಿ ಶೋಧಿಸಿದರೂ ಸಿಕ್ಕಿರಲಿಲ್ಲ. ಇದೀಗ ಭೀಕರ ಪ್ರವಾಹಕ್ಕೆ ಆ ಉಪಕರಣವೇ ಕಾರಣವಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಭಾನುವಾರ ನೀರ್ಗಲ್ಲು ಕುಸಿತ ಉಂಟಾದ ಬಳಿಕ ಪರ್ವತದಿಂದ ಧೂಳು, ಹಿಮದ ಜತೆಗೆ ತೀವ್ರ ಘಾಟಿನ ಗಾಳಿಯೂ ಬೀಸುತ್ತಿತ್ತು. ಅದನ್ನು ಉಸಿರಾಡಲು ಆಗುತ್ತಿರಲಿಲ್ಲ. ಬರಿ ಹಿಮ ಹಾಗೂ ಧೂಳಿನಿಂದ ಅಂತಹ ವಾಸನೆ ಬರುವುದಿಲ್ಲ. ಹೀಗಾಗಿ ವಿಕಿರಣಯುಕ್ತ ಉಪಕರಣವೇ ಈ ಘಟನೆ ಹಿಂದಿನ ಕಾರಣವಿದ್ದಿರಬಹುದು ಎಂದು ತಿಳಿಸಿದ್ದಾರೆ.
1965ರಲ್ಲಿ ಗುಪ್ತಚರ ಅಧಿಕಾರಿಗಳು ಉಪಕರಣ ಸಾಗಿಸುವಾಗ ಜುಗ್ಜು ಗ್ರಾಮದ ಹಲವಾರು ಮಂದಿ ಕೂಲಿಯಾಳುಗಳಾಗಿ ಕೆಲಸ ಮಾಡಿದ್ದರು. ಆ ಪೈಕಿ ಕಾರ್ತಿಕ್ ಸಿಂಗ್ ಎಂಬ ಕೂಲಿಯಾಳಿನ 90 ವರ್ಷದ ಪತ್ನಿ ಕೂಡ ಭಾನುವಾರದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ