
ಪುರಿ, ಒಡಿಶಾ (ಮಾ.4): ಪುರಿಯ ಶ್ರೀ ಜಗನ್ನಾಥ ದೇವಾಲಯದ ಬಹುನಿರೀಕ್ಷಿತ 'ರತ್ನ ಭಂಡಾರ'ದ ಆಭರಣಗಳ ಎಣಿಕೆ ಮತ್ತು ಪಟ್ಟಿ ಮಾಡುವ ಪ್ರಕ್ರಿಯೆ ಅಂತಿಮವಾಗಿ ಆರಂಭಗೊಳ್ಳುತ್ತಿದೆ. ಒಡಿಶಾ ಸರ್ಕಾರವು ಇದಕ್ಕಾಗಿ ಮಾರ್ಚ್ 25ರಂದು ಮಧ್ಯಾಹ್ನ 12:12 ರಿಂದ 1:45 ರವರೆಗೆ ಶುಭ ಮುಹೂರ್ತವನ್ನು ನಿಗದಿಪಡಿಸಿದೆ. 'ರತ್ನ ಭಂಡಾರ'ವು ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಯ ಅಮೂಲ್ಯ ಆಭರಣಗಳ ಖಜಾನೆಯಾಗಿದೆ. 1978ರಲ್ಲಿ ನಡೆದ ಎಣಿಕೆಯ ಪ್ರಕಾರ, ಇಲ್ಲಿ 128.38 ಕೆಜಿ ಚಿನ್ನ ಮತ್ತು 221.53 ಕೆಜಿ ಬೆಳ್ಳಿಯ ಆಭರಣಗಳಿವೆ. ಅಂದು ಈ ಎಣಿಕೆ ಕಾರ್ಯ ಬರೊಬ್ಬರಿ 72 ದಿನಗಳ ಕಾಲ ನಡೆದಿತ್ತು.
ಈ ಬಾರಿಯ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮಾಡಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ಕಳುಹಿಸಲು ಒಪ್ಪಿಗೆ ನೀಡಿದೆ. ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ಗಳು ನೋಂದಾಯಿತ ಚಿನ್ನದ ವ್ಯಾಪಾರಿಗಳನ್ನು (ಸೋನಿ) ಒದಗಿಸಲಿವೆ. ಮುಖ್ಯ ಆಡಳಿತಾಧಿಕಾರಿ ಅರವಿಂದ್ ಪಾದಿ ಮಾತನಾಡಿ, "ಆಭರಣಗಳಲ್ಲಿರುವ ಅಮೂಲ್ಯ ರತ್ನಗಳನ್ನು ಗುರುತಿಸಲು ರಾಜ್ಯ ಸರ್ಕಾರವು ಇಬ್ಬರು ರತ್ನಶಾಸ್ತ್ರಜ್ಞರನ್ನು (Gemologists) ನಿಯೋಜಿಸಲಿದೆ" ಎಂದು ತಿಳಿಸಿದ್ದಾರೆ.
ಮೂರು ಸದಸ್ಯರ ಸಮಿತಿಯು ಇಡೀ ಪ್ರಕ್ರಿಯೆಯ ಮೇಲೆ ನಿಗಾ ಇಡಲಿದೆ. ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳಿಗಾಗಿ ಪ್ರತ್ಯೇಕ ಪೆಟ್ಟಿಗೆಗಳನ್ನು ಬಳಸಲಾಗುತ್ತದೆ. ಮ್ಯಾಜಿಸ್ಟ್ರೇಟ್ ಪ್ರತಿ ದಿನವೂ ಖಜಾನೆಯಿಂದ ಕೀಲಿಯನ್ನು ತರಬೇಕು ಮತ್ತು ಕೆಲಸ ಮುಗಿದ ನಂತರ ಅಂದೇ ವಾಪಸ್ ಜಮಾ ಮಾಡಬೇಕು ಎನ್ನುವ ನಿಯಮ ರೂಪಿಸಲಾಗಿದೆ.
2018ರಲ್ಲಿ ಹೈಕೋರ್ಟ್ ಆದೇಶದಂತೆ ರತ್ನ ಭಂಡಾರ ತೆರೆಯಲು ಹೋದಾಗ, ಕೀಲಿಗಳು ನಾಪತ್ತೆಯಾಗಿವೆ ಎಂದು ತಂಡವು ಬರಿಗೈಲಿ ವಾಪಸ್ ಬಂದಿತ್ತು. ಇದು ದೊಡ್ಡ ಮಟ್ಟದ ರಾಜಕೀಯ ಹೈಡ್ರಾಮಾಕ್ಕೆ ಕಾರಣವಾಗಿತ್ತು. ಆಗಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು. 2018ರಲ್ಲಿ ಕಾನೂನು ಸಚಿವ ಪ್ರತಾಪ್ ಜೆನಾ ನೀಡಿದ ಮಾಹಿತಿಯಂತೆ ಇಲ್ಲಿ 12,831 ಭರಿ (1 ಭರಿ ಅಂದರೆ 11.66 ಗ್ರಾಂ) ಚಿನ್ನದ ಆಭರಣಗಳು ಮತ್ತು 22,153 ಭರಿ ಬೆಳ್ಳಿಯ ವಸ್ತುಗಳಿವೆ ಎನ್ನಲಾಗಿದೆ.
ಜುಲೈ 18 ರಂದು ಉನ್ನತ ಮಟ್ಟದ ಸಮಿತಿಯ 11 ಸದಸ್ಯರು ಆಂತರಿಕ ರತ್ನ ಭಂಡಾರಕ್ಕೆ ಪ್ರವೇಶಿಸಿದ್ದರು. ಅಲ್ಲಿ ಅವರಿಗೆ ಮೂರು ದಪ್ಪಗಿನ ಗಾಜಿನ ಪೆಟ್ಟಿಗೆಗಳು ಮತ್ತು ಒಂದು ದೊಡ್ಡ ಕಬ್ಬಿಣದ ತಿಜೋರಿ (6.5 ಅಡಿ ಎತ್ತರ, 4 ಅಡಿ ಅಗಲ) ಕಂಡುಬಂದಿದ್ದವು. ಎರಡು ಮರದ ಪೆಟ್ಟಿಗೆಗಳು ಮತ್ತು ಒಂದು ಕಬ್ಬಿಣದ ಪೆಟ್ಟಿಗೆಯೊಳಗೆ ಹಲವಾರು ಚಿನ್ನದ ಪೆಟ್ಟಿಗೆಗಳಿದ್ದವು. ಈ ಪೆಟ್ಟಿಗೆಗಳು ಎಷ್ಟು ಭಾರವಾಗಿದ್ದವು ಎಂದರೆ ಅವುಗಳನ್ನು ಅಲ್ಲಿಂದ ಅಲುಗಾಡಿಸಲು ಸಾಧ್ಯವಾಗದ ಕಾರಣ, ಅಂತಿಮವಾಗಿ ಭಗವಂತನ ಶಯನ ಗೃಹಕ್ಕೆ ರತ್ನಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಈ ಕಾರ್ಯಕ್ಕೆ ಸುಮಾರು 7 ಗಂಟೆಗಳು ಹಿಡಿದಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ