
ಪಂಜಾಬ್(ನ.05): ನವಜೋತ್ ಸಿಂಗ್ ಸಿದು(Navjot Singh Sidhu) ಮತ್ತೆ ಯೂ ಟರ್ನ್ ಹೊಡೆದಿದ್ದಾರೆ. ಇತ್ತೀಚೆಗಷ್ಟೇ ಪಂಜಾಬ್ ಕಾಂಗ್ರೆಸ್(Punjab Congress) ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದ ಸಿಧು ಇದೀಗ ತಮ್ಮ ರಾಜೀನಾಮೆ ಹಿಂತಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಸಿಧು ರಾಜಕೀಯವನ್ನು ಕ್ರಿಕೆಟ್ ಇನ್ ಸ್ವಿಂಗ್ ಹಾಗೂ ಔಟ್ ಸ್ವಿಂಗ್ ರೀತಿ ಮುನ್ನಡೆಸುತ್ತಿದ್ದಾರೆ.
ಕಾಂಗ್ರೆಸ್ಗೆ ಮತ್ತೆ ಟೆನ್ಶನ್: 13 ಬೇಡಿಕೆ, ಸೋನಿಯಾಗೆ ಪತ್ರ ಬರೆದ ಸಿಧು!
ಪಂಜಾಬ್ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ನವಜೋತ್ ಸಿಂಗ್ ಸಿಧು ಇದೀಗ ಮೆತ್ತಗಾಗಿದ್ದಾರೆ. ಇಂದು ಸುದ್ಧಿಗೋಷ್ಠಿ ನಡೆಸಿದ ಸಿಧು, ದಿಢೀರ್ ನೀಡಿದ ರಾಜೀನಾಮೆ(withdraws resignation) ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ರಾಜೀನಾಮೆ ನಿರ್ಧಾರ ಅಹಂಕಾರದ ನಿರ್ಧಾರವಲ್ಲ, ಬದಲಾಗಿ ಪ್ರತಿಯೊಬ್ಬ ಪಂಜಾಬಿ ಹಿತ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿತ್ತು ಎಂದು ಸಿಧು ಹೇಳಿದ್ದಾರೆ.
ಇದೀಗ ರಾಜೀನಾಮೆ ವಾಪಸ್ ಕೂಡ ಪಂಜಾಬ್ ಹಿತದೃಷ್ಟಿಯಿಂದಲೇ ಎಂದಿದ್ದಾರೆ. ಈ ಮೂಲಕ ಸಿಧೂ ತಮ್ಮ ನಿರ್ಧಾರ ಅದೆಷ್ಟೆ ನಗೆಪಾಟಲಿಗೆ ಈಡಾದರೂ ಎಲ್ಲವೂ ಪಂಜಾಬ್ ಹಿತದೃಷ್ಟಿಯಿಂದ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಕಾಂಗ್ರೆಸ್ ಗಣ್ಯರು ಪಂಜಾಬ್ ಸಿಎಂ ಪುತ್ರನ ವಿವಾಹದಲ್ಲಿ ಭಾಗಿ, ನವಜೋತ್ ಸಿಂಗ್ ಸಿಧು ಗೈರು!
ಹೊಸ ಅಟಾರ್ನಿ ಜನರಲ್ ನೇಮಕವಾದ ಬೆನ್ನಲ್ಲೇ ಮತ್ತೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಳ್ಳುತ್ತೇನೆ ಎಂದು ಸಿಧು ಹೇಳಿದ್ದಾರೆ. ಇದೇ ವೇಳೆ ನೂತನ ಸಿಎಂ ಚರಣಜಿತ್ ಸಿಂಗ್ ಚನಿ ವಿರುದ್ಧ ಯಾವುದೇ ದ್ವೇಷವಿಲ್ಲ. ಹಲವು ಬಾರಿ ಚನಿ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲವೂ ಪಂಜಾಬ್ ರಾಜ್ಯಕ್ಕಾಗಿ ನಡೆಸಿದ ಮಾತುಕತೆಗಳಾಗಿದೆ. ಇದರಲ್ಲಿ ವೈಯುಕ್ತಿ ವಿಚಾರಗಳಿಲ್ಲ. ಚನನಿ ವಿರುದ್ಧ ಯಾವುದೇ ದ್ವೇಷವಿಲ್ಲ. ಚನಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿ ನಿರ್ಧಾಗಳನ್ನು ತೆಗೆದುಕೊಳ್ಳುತ್ತಾರೆ. ಪಂಜಾಬ್ ಪರವಾಗಿರುವ ಎಲ್ಲಾ ನಿರ್ಧಾರಕ್ಕೆ ನನ್ನ ಸಹಮತವಿದೆ ಎಂದು ಸಿಧು ಹೇಳಿದ್ದಾರೆ.
ಸೆಪ್ಟೆಂಬರ್ 28 ರಂದು ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರು. ಪಂಜಾಬ್ ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಅಸಮಾಧಾನಗೊಂಡಿದ್ದ ಸಿಧು, ಹೈಕಮಾಂಡ್ಗೆ ಪಾಠ ಕಲಿಸಲು ದಿಢೀರ್ ರಾಜೀನಾಮೆ ನೀಡಿದ್ದರು. ಈ ಮೂಲಕ ಪಂಜಾಬ್ ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದ್ದರು.
ಹುದ್ದೆ ಇರಲಿ, ಇಲ್ಲದಿರಲಿ ನಾನೆಂದಿಗೂ ಪ್ರಿಯಾಂಕಾ, ರಾಹುಲ್ ಜೊತೆಗಿರುತ್ತೇನೆ: ಸಿಧು!
ಪಂಜಾಬ್ ಸಿಎಂ ಆಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಕಳೆದ ಕೆಲ ವರ್ಷಗಳಿಂದಲೇ ಗುದ್ದಾಟ ನಡೆಸುತ್ತಿದ್ದ ಸಿಧು, ಹೈಕಮಾಂಡ್ ಜೊತೆಗೂ ಸ್ನೇಹ ಸಂಪಾದಿಸಿದ್ದರು. ಜುಲೈ 23 ರಂದು ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆಯಾಗಿದ್ದರು. ಸೆಪ್ಟೆಂಬರ್ 28ಕ್ಕೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದರ ನಡುವೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವಿನ ಗುದ್ದಾಟ ಹೆಚ್ಚಾಗಿತ್ತು. ಪರಿಣಾಣ ಸೆಪ್ಟೆಂಬರ್ ಆರಂಭದಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಅಮರಿಂದರ್ ಸಿಂಗ್, ಪಂಜಾಬ್ ಲೋಕ ಕಾಂಗ್ರೆಸ್ ಅನ್ನೋ ಹೊಸ ಪಕ್ಷ ಆರಂಭಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಅಮರಿಂದರ್ ಸಿಂಗ್ ಪಾರ್ಟಿ ಅಖಾಡಕ್ಕೆ ಇಳಿಯಲಿದೆ. ಬಿಜೆಪಿ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿರುವ ಅಮರಿಂದರ್ ಸಿಂಗ್, ಪಂಜಾಬ್ನಿಂದ ಕಾಂಗ್ರೆೆಸ್ ದೂರವಿಡಲು ಪಣತೊಟ್ಟಿದ್ದಾರ. ಇತ್ತ ಆಮ್ ಆದ್ಮಿ ಪಾರ್ಟಿ ಕೂಡ ಪಂಜಾಬ್ನಲ್ಲಿ ರೈತ ಹೋರಾಟಕ್ಕೆ ಬೆಂಬಲ ನೀಡಿರುವ ಕಾರಣ ಮತ್ತಷ್ಟು ಸ್ಥಾನಗಳಿಸವು ವಿಶ್ವಾಸದಲ್ಲಿದೆ.
ಪಂಜಾಬ್ ಲೋಕ ಕಾಂಗ್ರೆಸ್ ಪಾರ್ಟಿ; ಹೊಸ ಪಕ್ಷ ಘೋಷಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್!
ರಾಜೀನಾಮೆ ಬಳಿಕ ಮೆತ್ತಗಾಗಿದ್ದ ಸಿಧು ಇದೀಗ ಮತ್ತೆ ಪಂಜಾಬ್ ಹಿತದೃಷ್ಟಿ ಹೆಸರಿನಲ್ಲಿ ರಾಜೀನಾನೆ ವಾಪಸ್ ತಗೆದುಕೊಂಡಿದ್ದಾರೆ. ಇನ್ನುಳಿದ ಎಲ್ಲಾ ನಿರ್ಧಾರಗಳು ಪಂಜಾಬ್ ಹಿತದೃಷ್ಟಿಗಾಗಿ ಅನ್ನೋ ಪರೋಕ್ಷ ಸೂಚನೆಯನ್ನು ಸಿಧು ನೀಡಿದ್ದಾರೆ. ಇದೀಗ ಪಂಜಾಬ್ ಕಾಂಗ್ರೆಸ್ನಲ್ಲಿ ಮತ್ತೆ ತಳಮಳ ಆರಂಭಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ