
ಚಂಡೀಗಢ: ಪಂಜಾಬ್ನ ಚಂಡೀಗಢದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 17 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ತಂದೆಯ ಆಕೆಯ ಗುಣನಡತೆಯ ಮೇಕೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಮಧ್ಯರಾತ್ರಿಯಲ್ಲೇ ಕೈಗಳನ್ನು ಕಟ್ಟಿ ಕಾಲುವೆಗೆ ಎಸೆದಿದ್ದರು. ಈ ದೃಶ್ಯವನ್ನು ಅವರು ವೀಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದರು. ಈ ವೀಡಿಯೋ ನಂತರ ವೈರಲ್ ಆದ ಹಿನ್ನೆಲೆಯಲ್ಲಿ ತಂದೆಯನ್ನು ಬಂಧಿಸಿದ ಪೊಲೀಸರು ಆತನ ಮೇಲೆ ಕೊಲೆ ಪ್ರಕರಣದ ಆರೋಪ ಹೊರಿಸಿ ಜೈಲಿಗೂ ಅಟ್ಟಿದ್ದರು. ಆದರೆ ಇದಾದ ಎರಡು ತಿಂಗಳ ಬಳಿಕ ಆ ಹದಿಹರೆಯದ ಹುಡುಗಿ ಬದುಕಿ ಬಂದಿದ್ದು, ತನ್ನ ತಂದೆಯನ್ನು ಜೈಲಿನಿಂದ ಬಿಡಿಸುವಂತೆ ಮನವಿ ಮಾಡಿದ್ದಾಳೆ. ಚಂಡೀಗಢದ ಫಿರೋಜ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಶಾಲೆ ತೊರೆದಿದ್ದ ಈ ಹುಡುಗಿ ಮನೆಯ ನಾಲ್ವರು ಹೆಣ್ಣು ಮಕ್ಕಳಲ್ಲಿ ಈಕೆಯ ಮೊದಲಿಗಳು, ಭಾನುವಾರ ಮಾಧ್ಯಮಗಳ ಮುಂದೆ ಬಂದ ಈಕೆ ತಾನು, ಕೈಗಳನ್ನು ಕಟ್ಟಿ ಕಾಲುವೆಗೆ ಎಸೆಯಲ್ಪಟ್ಟರು ಬದುಕಿ ಬಂದ ಭಯಾನಕ ಅನುಭವವನ್ನು ಹೇಳಿಕೊಂಡಿದ್ದು, ತನ್ನ ತಂದೆಯನ್ನು ಜೈಲಿನಿಂದ ಬಿಡಿಸುವಂತೆ ಮನವಿ ಮಾಡಿದ್ದಾಳೆ.
ಅಂದು ಏನು ನಡೆದಿತ್ತು?
ಸಪ್ಟೆಂಬರ್ 29ರ ರಾತ್ರಿ ತಂದೆ ಸುರ್ಜಿತ್ ಸಿಂಗ್ ಮಗಳ ಗುಣನಡತೆಯ ಬಗ್ಗೆ ಅನುಮಾನಪಟ್ಟು ಆಕೆಯ ಮೇಲೆ ಕೋಪಗೊಂಡಿದ್ದ, ನಂತರ ಆಕೆಯ ಕೈಗಳನ್ನು ಹಗ್ಗದಿಂದ ಕಟ್ಟಿದ ಆತ ನಿರ್ದಯವಾಗಿ ಕಾಲುವೆಗೆ ತಳ್ಳಿದ್ದ ಈ ಭಯಾನಕ ಕೃತ್ಯವನ್ನು ಆತನೇ ಸ್ವತಃ ತನ್ನ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ, ಅಮ್ಮ ಹಾಗೂ ಆಕೆಯ ಮೂವರು ಎಳೆಯ ಸಹೋದರಿಯರ ಸಮ್ಮುಖದಲ್ಲೇ ಈ ಘಟನೆ ನಡೆದಿತ್ತು. ಸ್ವತ ತನ್ನ ಕೃತ್ಯದ ವೀಡಿಯೋ ಮಾಡಿದ್ದ ಸುರ್ಜಿತ್ ಸಿಂಗ್ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗ್ತಿದ್ದಂಗೆ ಜೈಲಿಗೆ ಹೋಗಿದ್ದ.
ಇದನ್ನೂ ಓದಿ: 25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್ಗೆ ಹಾರಿದ ಕ್ಲಬ್ ಮಾಲೀಕ
ಆಕೆಯನ್ನು ಕಾಲುವೆಗೆ ತಳ್ಳುತ್ತಾ, ಹೋಗು ಸಾಯಿ ಎಂದು ಆತ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತಿತ್ತು. ಆದರೆ ಇತ್ತ ಸಹಾಯಕ್ಕಾಗಿ ಕೂಗುತ್ತಿದ್ದ ಹೆಂಡ್ತಿ ಬಳಿ, ಆಕೆ ಸಾಯಲಿ ಬಿಡು ಎಂದು ಹೇಳಿದ್ದ, ಮಗಳು ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಂತೆ ಆತ ಬಾಯ್ ಬಾಯ್ ಎಂದಿದ್ದ.
ಆದರೆ ಘಟನೆಗೆ ಸಂಬಂಧಿಸಿದಂತೆ ಆ ಯುವತಿ ಸೋದರ ಸಂಬಂಧಿಯೊಬ್ಬರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಫಿರೋಜ್ಪುರ ನಗರ ಪೊಲೀಸರು ನಂತರ ಸುರ್ಜಿತ್ಸಿಂಗ್ನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆಗಿನಿಂದಲೂ ಕೊಲೆ ಪ್ರಕರಣದಲ್ಲಿ ಸೆಂಟ್ರಲ್ ಜೈಲ್ನಲ್ಲಿ ಸುರ್ಜಿತ್ ಸಿಂಗ್ ನ್ಯಾಯಾಂಗ ಬಂಧನದ ಶಿಕ್ಷೆ ಅನುಭವಿಸುತ್ತಿದ್ದಾನೆ.
ಇದನ್ನೂ ಓದಿ: ನೈಟ್ ಕ್ಲಬ್ ಮುಂದೆ ಕುಡಿದ ಮತ್ತಿನಲ್ಲಿ ರಾಪಿಡೋ ಗಾಡಿಯಿಂದ ಕೆಳಗೆ ಬಿದ್ದ ಹುಡುಗಿ
ಇಷ್ಟೆಲ್ಲಾ ನಡೆದು ಎರಡೂ ತಿಂಗಳೇ ಕಳೆದಿವೆ. ಈಗ ಪ್ರತ್ಯಕ್ಷವಾದ ಆ ಯುವತಿ ತಾನು ಹೇಗೆ ಸಾವಿನ ದವಡೆಯಿಂದ ಪಾರಾದೆ ಎಂಬುದನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾಳೆ. ಕಾಲುವೆಯಲ್ಲಿ ರಭಸದಿಂದ ಹರಿಯುತ್ತಿದ್ದ ಪ್ರವಾಹವು ಅಕೆಯ ಕೈಗಳಿಗೆ ಕಟ್ಟಿದ್ದ ಹಗ್ಗಗಳನ್ನು ವಾಡದಂತೆ ಸಡಿಲಗೊಳಿಸಿತ್ತು. ಅಸಹಾಯಕಳಾಗಿ ನೀರಿನಲ್ಲಿ ಮುಳುಗುತ್ತಾ ತೇಲುತ್ತಾ ಮುಂದೆ ಸಾಗುತ್ತಿದ್ದಾಗ ಅವಳ ತಲೆ ನೀರಿನ ಮೇಲೆ ಚಾಚಿಕೊಂಡಿದ್ದ ಕಬ್ಬಿಣದ ಸರಳಿಗೆ ಬಡಿಯಿತು. ನೀರಿನಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಆಸೆರೆಯಾದಂತೆ ತನ್ನ ತಲೆಗೆ ಬಡಿದ ಕಬ್ಬಿಣದ ಸರಳೇ ಆಕೆಗೆ ಜೀವ ಉಳಿಸಿಕೊಳ್ಳಲು ಆಸೆರೆಯಾಯ್ತು. ಅವಳು ಅದನ್ನು ಹಿಡಿದು ನೀರಿನಿಂದ ಮೇಲೆ ಬಂದಳಾದರು ಕಾಲುವೆಯಿಂದ ಮೇಲೇರಲು ಸಾಧ್ಯವಾಗಲಿಲ್ಲ.
ಆಗ ಅಲ್ಲಿ ಸಾಗುತ್ತಿದ್ದ ಮೂವರು ಅಪರಿಚಿತ ದಾರಿಹೋಕರು ಆಕೆಯನ್ನು ಗಮನಿಸಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಇದಾಗಿ ಎರಡು ತಿಂಗಳ ನಂತರ ಆಕೆ ತಾನು ಬದುಕಿರುವುದಾಗಿ ಹೇಳಿಕೊಂಡು ಮಾಧ್ಯಮಗಳ ಮುಂದೆ ಬಂದಿದ್ದಾಳೆ. ಆದರ ತನಗೆ ಎರಡು ತಿಂಗಳ ಕಾಲ ಆಶ್ರಯ ನೀಡಿದ್ದು ಯಾರು ತಾನು ಎಲ್ಲಿದ್ದೆ ಎಂಬುದನ್ನು ಆಕೆ ಬಹಿರಂಗಪಡಿಸಲಿಲ್ಲ. ಆದರೆ ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾಳೆ.
ಅಲ್ಲದೇ ತನ್ನ ತಂದೆಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆಕೆ ಮನವಿ ಮಾಡಿದ್ದು, ನನ್ನ ಸೋದರಿಯರಿಗೆ ಆತನ ಅಗತ್ಯವಿದೆ. ನನ್ನ ಕಿರಿಯ ಸೋದರಿಯರಿಗೆ ಕಾಳಜಿ ಮಾಡುವುದಕ್ಕೆ ಯಾರು ಕೂಡ ಇಲ್ಲ ಆತನನ್ನು ಜೈಲಿನಿಂದ ಬಿಡಿಸಿ ಎಂದು ಆಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ದಾಳಿಯ ವೇಳೆಕೋಪದಿಂದ ತುಂಬಿದ, ಕುಡಿದ ಮತ್ತಿನಲ್ಲಿದ್ದ ತನ್ನ ತಂದೆಯನ್ನು ತಾಯಿ ಪ್ರಚೋದಿಸಿದಳು ಎಂದು ಈ 17ರ ಹರೆಯದ ಹುಡುಗಿ ಆರೋಪಿಸಿದ್ದಾಳೆ. ತನ್ನ ಸಂಬಂಧಿಕರನ್ನು ನಂಬುವುದಿಲ್ಲ ಎಂದು ಹೇಳಿಕೊಂಡಿರುವ ಹುಡುಗಿ ಈಗ ಪೊಲೀಸ್ ರಕ್ಷಣೆಯನ್ನು ಸಹ ಕೋರಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರು ತನಿಖೆ ಮಾಡುತ್ತಿದ್ದು, ಹದಿಹರೆಯದ ಹುಡುಗಿ ವಾಪಸ್ ಬಂದಿದ್ದರಿಂದ ಆಕೆಯ ತಂದೆಯ ಮೇಲಿದ್ದ ಕೊಲೆ ಆರೋಪವನ್ನು ಕೊಲೆಯತ್ನಕ್ಕೆ ಇಳಿಸುವ ಸಾಧ್ಯತೆ ಇದೆ. ಅವಳು ಸುರಕ್ಷಿತವಾಗಿ ಕಂಡುಬಂದಿರುವುದು ತುಂಬಾ ಒಳ್ಳೆಯ ಸುದ್ದಿ ಎಂದು ಹಿರಿಯ ಪೊಲೀಸ್ ಅಧಿಕಾರಿ ಭೂಪಿಂದರ್ ಸಿಂಗ್ ಹೇಳಿದ್ದಾರೆ. ಆರಂಭದಲ್ಲಿ ಭಯಭೀತಳಾಗಿದ್ದೆ ಮತ್ತು ಆಘಾತಕ್ಕೊಳಗಾಗಿದ್ದೆ ತಲೆಗೆ ಪೆಟ್ಟಾಗಿದ್ದರಿಂದ, ತನಗೆ ಕೆಲವು ವಿಷಯಗಳು ನೆನಪಿರಲಿಲ್ಲ, ಅದಕ್ಕಾಗಿಯೇ ಅವಳು ಮೊದಲೇ ಮುಂದೆ ಬರಲಿಲ್ಲ ಎಂದು ಆಕೆ ಹೇಳಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಂದೆಯೇ ವಿಡಿಯೋ ಮಾಡಿದ್ದರು. ಆ ವೀಡಿಯೊವನ್ನು ಆಧರಿಸಿ ಅವರ ವಿರುದ್ಧ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಈಗ ಹುಡುಗಿ ಜೀವಂತವಾಗಿ ಪತ್ತೆಯಾಗಿರುವುದರಿಂದ, ಆಕೆಯ ಹೇಳಿಕೆಗಳ ಆಧಾರದ ಮೇಲೆ ಸೂಕ್ತ ಸೆಕ್ಷನ್ಗಳನ್ನು ಅನ್ವಯಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಭೂಪಿಂದರ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ