ರೈತ ಹೋರಾಟ ಬೆಂಬಲಿಸಿ DIG ಹುದ್ದೆಗೆ ರಾಜೀನಾಮೆ; ಪೊಲೀಸ್ ಅಧಿಕಾರಿಯ ಅಸಲಿ ಕತೆ ಏನು?

By Suvarna NewsFirst Published Dec 13, 2020, 6:11 PM IST
Highlights

ಮೊದಲು ನಾನು ರೈತ, ಬಳಿಕ ಪೊಲೀಸ್. ಇದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಅಧಿಕಾರಿ ರೈತರ ಹೋರಾಟ ಬೆಂಬಲಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೇಳಿದ ಮಾತು. DIG ಲಕ್ಮಿಂದರ್ ಸಿಂಗ್ ಜಖಾರ್ ರಾಜೀನಾಮೆ ಇದೀಗ ಭಾರಿ ಸಂಚಲನ ಮೂಡಿಸಿದೆ.

ಪಂಜಾಬ್(ಡಿ.13):  ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ. ಸೆಲೆಬ್ರೆಟಿಗಳು, ಕ್ರೀಡಾಪಟುಗಳು ಸೇರಿದಂತೆ ಹಲವು ಕ್ಷೇತ್ರದ ಜನ ರೈತರ ಹೋರಾಟ ಬೆಂಬಲಿಸಿದ್ದಾರೆ. ಇದೀಗ ಪಂಜಾಬ್‌ನ ಕಾರಗ್ರಹ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್(DIG)ಪೊಲೀಸ್, 56 ವರ್ಷದ ಲಕ್ಮಿಂದರ್ ಸಿಂಗ್ ಜಖಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರೈತ ಹೋರಾಟಕ್ಕೆ ಧುಮುಕಿದ್ದಾರೆ.

ಭಾರತದ ರೈತ ಪ್ರತಿಭಟನೆಗೆ ಲಂಡನ್‌‌ನಿಂದ ಬೆಂಬಲ; ಕಾರಣ ಏನು?.

ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಲಕ್ಮಿಂದರ್ ಸಿಂಗ್ ರಾಜೀನಾಮೆ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ. ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಲಕ್ಮಿಂದರ್ ಸಿಂಗ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ನಾನು ರೈತ. ಬಳಿಕ ಪೊಲೀಸ್. ನನ್ನ ತಂದೆ ರೈತ. ಅವರ ಪರಿಶ್ರಮ, ಹೊಲದಲ್ಲಿ ಸುಡು ಬಿಸಿಲೂ, ಮಳೆ ಲೆಕ್ಕಿಸಿದ ದುಡಿದ ಪರಿಣಾಮ ನಾನು ಪೊಲೀಸ್ ಅಧಿಕಾರಿಯಾಗಿದ್ದೇನೆ ಎಂದಿದ್ದಾರೆ.

ರೈತರ ಬೇಡಿಕೆ ಈಡೇರದಿದ್ದರೆ ಜನ ಆಂದೋಲನ; ಕೇಂದ್ರಕ್ಕೆ ಅಣ್ಣಾ ಹಜಾರೆ ಎಚ್ಚರಿಕೆ!.

ರೈತರ ಹೋರಾಟ ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ರೈತರ ಹೋರಾಟ ಬೆಂಬಲಿಸಲು, ಪ್ರತಿಭಟನೆಯಲ್ಲಿ ಧುಮುಕಲು ನಾನು ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಮುಂಗಡವಾಗಿ 3 ತಿಂಗಳ ವೇತನ ಡೆಪೋಸಿಟ್ ಮಾಡಿದ್ದೇನೆ. ಈ ಮೂಲಕ ಈ ಕೂಡಲೇ ತನ್ನನ್ನು ಸೇವೆಯಿಂದ ಮುಕ್ತಿಗೊಳಿಸಬೇಕು ಎಂದು ರಾಜೀನಾಮೆ ಪತ್ರದಲ್ಲಿ ಲಕ್ಮಿಂದರ್ ಸಿಂಗ್ ಮನವಿ ಮಾಡಿದ್ದಾರೆ.

ಲಕ್ಮಿಂದರ್ ಸಿಂಗ್ ಜಖಾರ್ ರಾಜೀನಾಮೆ ಹಿಂದೆ ರಾಜಕೀಯದ ವಾಸನೆ ಬಡಿಯುತ್ತಿದೆ. 2020ರ ಮೇ ತಿಂಗಳಲ್ಲಿ ಲಕ್ಮಿಂದರ್ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪ
ಕೇಳಿ ಬಂದಿತ್ತು. ರಾಜಕೀಯ ಮುಖಂಡರ ಪರವಾಗಿ ಕೆಲಸ ಮಾಡಿದ ಆರೋಪ ಕೇಳಿ ಬಂದಿತ್ತು. ಇನ್ನು ಆರೋಪ ಸಾಬೀತಾಗುತ್ತಿದ್ದಂತೆ ಲಕ್ಮಿಂದರ್ ಸಿಂಗ್ ಅವರನ್ನು ಅಮಾನತ್ತು ಮಾಡಲಾಗಿತ್ತು.

ಅಮಾನತ್ತು ಶಿಕ್ಷೆ ಪೂರ್ಣಗೊಳಿಸಿ 2 ತಿಂಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದ ಲಕ್ಮಿಂದರ್ ಸಿಂಗ್ ವಿರುದ್ಧ ಮತ್ತೊಂದು ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಲಕ್ಮಿಂದರ್ ರಾಜೀನಾಮೆ ನೀಡಿದ್ದಾರೆ. ಇದು ರಾಜಕೀಯದಾಟ ಹೊರತು ನಿಜವಾದ ರೈತ ಕಾಳಜಿ ಅಲ್ಲ ಅನ್ನೋ ಮಾತು ಕೇಳಿ ಬಂದಿದೆ.

click me!