ರಾಜಸ್ಥಾನಕ್ಕೆ ಪಂಜಾಬ್‌ನಿಂದ 'ವಾಟರ್ ಶಾಕ್': 6 ದಶಕಗಳ ಬಾಕಿ ₹1.44 ಲಕ್ಷ ಕೋಟಿ ಪಾವತಿಗೆ ಭಗವಂತ್ ಮಾನ್ ಪಟ್ಟು!

Published : Mar 31, 2026, 02:46 PM IST
Bhagwant Mann water royalty

ಸಾರಾಂಶ

1920ರ ತ್ರಿಪಕ್ಷೀಯ ಒಪ್ಪಂದವನ್ನು ಉಲ್ಲೇಖಿಸಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜಸ್ಥಾನದಿಂದ ₹1.44 ಲಕ್ಷ ಕೋಟಿ ನೀರಿನ ರಾಯಲ್ಟಿ ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ. 1960ರಿಂದ ರಾಜಸ್ಥಾನ ಹಣ ಪಾವತಿಸಿಲ್ಲ ಎಂದು ಪಂಜಾಬ್ ಆರೋಪಿಸಿದೆ.

ಚಂಡೀಗಢ (ಮಾ.31): ನೆರೆರಾಜ್ಯ ರಾಜಸ್ಥಾನಕ್ಕೆ ಪೂರೈಕೆಯಾಗುತ್ತಿರುವ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಬರೋಬ್ಬರಿ 1.44 ಲಕ್ಷ ಕೋಟಿ ರೂಪಾಯಿ ರಾಯಲ್ಟಿ (Royalty) ಹಣವನ್ನು ಪಾವತಿಸುವಂತೆ ಪಂಜಾಬ್ ಸರ್ಕಾರ ಅಧಿಕೃತವಾಗಿ ಬೇಡಿಕೆ ಇಟ್ಟಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕಳೆದ ಬುಧವಾರ ಈ ಮಹತ್ವದ ಘೋಷಣೆ ಮಾಡಿದ್ದಾರೆ. 1920ರ ತ್ರಿಪಕ್ಷೀಯ ಒಪ್ಪಂದದ ಅಡಿಯಲ್ಲಿ ರಾಜಸ್ಥಾನವು ಪಂಜಾಬ್‌ಗೆ ನೀರಿನ ಹಣವನ್ನು ನೀಡಬೇಕಿತ್ತು. "ರಾಜಸ್ಥಾನವು 1960 ರವರೆಗೆ ಪಂಜಾಬ್‌ಗೆ ರಾಯಲ್ಟಿ ನೀಡುತ್ತಿತ್ತು, ಆದರೆ ಅದಾದ ನಂತರ ಹಣ ಪಾವತಿಯನ್ನು ನಿಲ್ಲಿಸಿದೆ. ಕಳೆದ ಆರು ದಶಕಗಳಿಂದ ಫಿರೋಜ್‌ಪುರ ಫೀಡರ್ ಮೂಲಕ ನೀರು ಪಡೆಯುತ್ತಿದ್ದರೂ ರಾಜಸ್ಥಾನವು ಒಂದು ಪೈಸೆಯನ್ನೂ ನೀಡಿಲ್ಲ," ಎಂದು ಮಾನ್ ಆರೋಪಿಸಿದ್ದಾರೆ.

ಭಗವಂತ್‌ ಮಾನ್‌ ಲೆಕ್ಕಾಚಾರವೇನು?

ಸೆಪ್ಟೆಂಬರ್ 1920ರಲ್ಲಿ ಬಿಕಾನೇರ್ ಮಹಾರಾಜ, ಬಹವಲ್ಪುರ ರಾಜ್ಯ (ಈಗ ಪಾಕಿಸ್ತಾನದಲ್ಲಿದೆ) ಮತ್ತು ಬ್ರಿಟಿಷ್ ಸರ್ಕಾರದ ನಡುವೆ ಈ ಒಪ್ಪಂದವಾಗಿತ್ತು. ಪ್ರತಿ ಎಕರೆಗೆ ಇಂತಿಷ್ಟು ಎಂದು ಹಣ ಪಾವತಿಸಲು ರಾಜಸ್ಥಾನ ಅಂದು ಒಪ್ಪಿತ್ತು. 1960 ರಿಂದ 2026 ರವರೆಗೆ ಲೆಕ್ಕ ಹಾಕಿದರೆ, ರಾಜಸ್ಥಾನವು ಪಂಜಾಬ್‌ಗೆ ₹1.44 ಲಕ್ಷ ಕೋಟಿ ಹಣವನ್ನು ನೀಡಬೇಕಿದೆ. ಸಿಂಧೂ ನದಿ ನೀರಿನ ಒಪ್ಪಂದದ ನಂತರವೂ ರಾಜಸ್ಥಾನವು ಪಂಜಾಬ್‌ನಿಂದ 18,000 ಕ್ಯೂಸೆಕ್ ನೀರನ್ನು ಪಡೆಯುತ್ತಲೇ ಇದೆ.

ರಾಜಸ್ಥಾನದ ಮರುವಾದವೇನು?

ಪಂಜಾಬ್‌ನ ಈ ಬೇಡಿಕೆಯನ್ನು ರಾಜಸ್ಥಾನದ ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ. "ರಾಜಸ್ಥಾನವು ಈ ಯೋಜನೆಯಲ್ಲಿ ಪಾಲುದಾರನಾಗಿದೆ ಮತ್ತು ನೀರಾವರಿ ವ್ಯವಸ್ಥೆಯನ್ನು ನಿರ್ಮಿಸಲು ಆರ್ಥಿಕವಾಗಿ ತನ್ನ ಪಾಲಿನ ವೆಚ್ಚವನ್ನು ಭರಿಸಿದೆ. ಅಲ್ಲದೆ, ಈ ವಿಷಯವು ಈಗಾಗಲೇ ಅಂತರರಾಜ್ಯ ಜಲ ವಿವಾದ ನ್ಯಾಯಾಧಿಕರಣದ ಮುಂದಿದೆ," ಎಂದು ಪ್ರತಿಕ್ರಿಯಿಸಿದೆ.

ಪಂಜಾಬ್ ನೀರಾವರಿ ವಲಯದ ಅಭಿವೃದ್ಧಿ:

ಕಳೆದ ನಾಲ್ಕು ವರ್ಷಗಳಲ್ಲಿ ಪಂಜಾಬ್‌ನ ನೀರಾವರಿ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆಯಾಗಿದೆ ಎಂದು ಮಾನ್ ಹೇಳಿದ್ದಾರೆ. 2022 ರಲ್ಲಿ ಶೇ. 26.50 ರಷ್ಟಿದ್ದ ಕಾಲುವೆ ನೀರಾವರಿ ವ್ಯಾಪ್ತಿ ಈಗ ಶೇ. 78 ಕ್ಕೆ ಏರಿಕೆಯಾಗಿದೆ. ಕಾಲುವೆಗಳ ಲೈನಿಂಗ್ ಮತ್ತು ಆಧುನೀಕರಣಕ್ಕಾಗಿ ₹6,700 ಕೋಟಿ ಖರ್ಚು ಮಾಡಲಾಗಿದೆ. ಸುಮಾರು 13,000 ಕಿಮೀ ಉದ್ದದ ಕಾಲುವೆಗಳನ್ನು ₹2,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಅಥವಾ ದುರಸ್ತಿ ಮಾಡಲಾಗಿದೆ. ಇದರಿಂದ 58 ಲಕ್ಷ ಎಕರೆ ಭೂಮಿಗೆ ನೀರು ತಲುಪುತ್ತಿದೆ. 1952 ರಲ್ಲಿ ನಿರ್ಮಿಸಲಾದ ಈ ಕಾಲುವೆಯನ್ನು ಕೇವಲ 35 ದಿನಗಳಲ್ಲಿ ಅಪ್‌ಗ್ರೇಡ್ ಮಾಡಲಾಗಿದ್ದು, ಅದರ ಸಾಮರ್ಥ್ಯವನ್ನು 2,682 ಕ್ಯೂಸೆಕ್ ಹೆಚ್ಚಿಸಲಾಗಿದೆ.

ಮಾನ್ ಅವರ ಖಡಕ್ ಎಚ್ಚರಿಕೆ

"ಪಂಜಾಬ್‌ನ ನೀರನ್ನು ಅವರು ಬಯಸುತ್ತಾರೆ, ಆದರೆ ಬಾಕಿ ಹಣ ನೀಡಲು ಸಿದ್ಧರಿಲ್ಲ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜಸ್ಥಾನ ಸರ್ಕಾರದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಬಾಕಿ ಹಣವನ್ನಾದರೂ ಪಾವತಿಸಲಿ ಅಥವಾ ಪಂಜಾಬ್‌ನಿಂದ ನೀರು ಪಡೆಯುವುದನ್ನಾದರೂ ನಿಲ್ಲಿಸಲಿ," ಎಂದು ಭಗವಂತ್ ಮಾನ್ ಗುಡುಗಿದ್ದಾರೆ. ರಾಜ್ಯಸಭಾ ಸದಸ್ಯ ವಿಕ್ರಮಜಿತ್ ಸಿಂಗ್ ಸಾಹ್ನಿ ಕೂಡ ಪಂಜಾಬ್ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದು, ತಾವು ಈ ಹಿಂದೆ ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದನ್ನು ನೆನಪಿಸಿಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೈಶ್ ಸಂಘಟನೆಯ ಮತ್ತೊಬ್ಬ ಉಗ್ರನ ನಿಗೂಢ ಸಾವು! ಪಾಕಿಸ್ತಾನದಲ್ಲಿ ನಡೆದದ್ದೇನು? ಯಾರೀ ಭಯೋತ್ಪಾದಕ
2021ರಲ್ಲಿ 3.2 ಲಕ್ಷ ವೇತನಕ್ಕೆ TCSಗೆ ಕೆಲಸಕ್ಕೆ ಸೇರಿದ ಯುವಕನಿಗೆ ಈಗ ಗೂಗಲ್‌ನಲ್ಲಿ 80 ಲಕ್ಷದ ಉದ್ಯೋಗ