ಅರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಗುರು, ಈಗ ಬುಡಕಟ್ಟು ಜನರಿಗೆ ದೇವರು!

By Santosh NaikFirst Published Jun 24, 2023, 1:13 PM IST
Highlights

ಪರಿಸರಕ್ಕೆ ತಾವು ನೀಡಿದ ಕೊಡುಗೆ ಎನ್ನುವಂತೆ ಪ್ರೊಫೆಸರ್‌ ಅಲೋಕ್‌ ಸಾಗರ್‌, ಬುಡಕಟ್ಟು ಪ್ರದೇಶಗಳಲ್ಲಿ ಈವರೆಗೂ 50 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಬುಡಕಟ್ಟು ಜನರಂತೆ ಬದುಕುತ್ತಿರುವ ಅಲೋಕ್‌ ಸಾಗರ್‌, ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಗುರುಗಳೂ ಹೌದು.

ನವದೆಹಲಿ (ಜೂ.24): ಬಡಜನರಿಗೆ, ಶೋಷಿತರಿಗೆ ಸಹಾಯ ಮಾಡುತ್ತಿರುವ ಸಾಕಷ್ಟು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವೀಧರರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಬಡ ಹಾಗೂ ಬುಡಕಟ್ಟು ಜನರಿಗೆ ಸಹಾಯ ಮಾಡೋದು ಮಾತ್ರವಲ್ಲ, ಅವರ ನಡುವೆ ಅವರಂತೆ ಬದುಕಲು ಆರಂಭಿಸುವ ಮೂಲಕ ನೆಮ್ಮದಿಯ ಜೀವನವನ್ನು ಕಂಡಿದ್ದಾರೆ. ಐಐಟಿ ದೆಹಲಿಯ ಪದವೀಧರರಾಗಿರುವ ಪ್ರೊಫೆಸರ್‌ ಅಲೋಕ್‌ ಸಾಗರ್‌, 1982ರಲ್ಲಿ ಕೈತುಂಬಾ ಸಂಬಳ ಬರುವ ತಮ್ಮ ಕೆಲಸವನ್ನು ತೊರೆಯುವ ದೊಡ್ಡ ನಿರ್ಧಾರ ಮಾಡಿದ್ದ ಅಲೋಕ್‌ ಸಾಗರ್‌, ತಮ್ಮ ಇಡೀ ಜೀವನವನ್ನುಬುಡಕಟ್ಟು ಜನರ ಅಭ್ಯುದಯಕ್ಕಾಗಿ, ಮಹಿಳೆಯರ ಉನ್ನತಿಗಾಗಿ ಬದುಕುವ ನಿರ್ಧಾರ ಮಾಡಿದ್ದರು. ಹಾಗಂತ ಇವರು ದೂರದಲ್ಲಿ ನಿಂತು ಇವರಿಗೆ ಬೆಂಬಲ ನೀಡಿರಲಿಲ್ಲ. ಬುಡುಕಟ್ಟು ಜನರೊಂದಿಗೆ ಬೆರೆತುಕೊಂಡು ಅವರ ಭಾಷೆಗಳನ್ನು ಕಲಿತು ಅವರಲ್ಲೇ ಒಂದಾಗಿ ಬದುಕಲು ಆರಂಭಿಸಿದ್ದಾರೆ. ನಿಮಗೆ ನೆನಪಿರಲಿ, ಐಐಟಿ ದೆಹಲಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದ ಅಲೋಕ್‌ ಸಾಗರ್‌, ಅಮೆರಿಕದ ಟೆಕ್ಸಾಸ್‌ನ ಹೌಸ್ಟನ್‌ ವಿವಿಯಿಂದ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದರು. ಅದಲ್ಲದೆ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಗುರುಗಳೂ ಕೂಡ ಹೌದು.

ಇಷ್ಟೆಲ್ಲಾ ಪದವಿ, ಗೌರವಗಳಿದ್ದರೂ ಅಲೋಕ್‌ ಸಾಗರ್‌ ಅವರಿಗೆ ಸಮಾಜಕ್ಕಾಗಿ ತಾವೇನೂ ಮಾಡುತ್ತಿಲ್ಲ ಎಂದು ಅನಿಸಿತಂತೆ. ಬುಡಕಟ್ಟು ಜನರ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಕೈತುಂಬಾ ಸಂಬಳ ಬರುತ್ತಿದ್ದ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ ಮಧ್ಯಪ್ರದೇಶದ ಕುಗ್ರಾಮಕ್ಕೆ ತೆರಳಿ ಬುಡಕಟ್ಟು ಜನರೊಂದಿಗೆ ಬದುಕಲು ಆರಂಭಿಸಿದರು.

ಕಳೆದ 26  ವರ್ಷಗಳಿಂದ ಪ್ರೊಫೆಸರ್‌ ಅಲೋಕ್‌ ಸಾಗರ್‌, ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯ ಕೊಚಾಮುನಲ್ಲಿ ಬದುಕುತ್ತಿದ್ದಾರೆ. ಅವರಿಗೆ ಈಗ 62 ವರ್ಷ. ಅವರು ಇರುವ ಪ್ರದೇಶಕ್ಕೆ ಕನಿಷ್ಠ ಮೂಲಸೌಕರ್ಯಗಳಾದ ವಿದ್ಯುತ್‌ ಹಾಗೂ ರಸ್ತೆಗಳೂ ಇಲ್ಲ. ಹಾಗಿದ್ದರೂ ಇಲ್ಲಿ ಬುಡಕಟ್ಟು ಜನಾಂಗದ 750 ಮಂದಿ ಬದುಕು ಸಾಗಿಸುತ್ತಿದ್ದಾರೆ. ಅಲೋಕ್‌ ಸಾಗರ್‌ ಇವರೊಂದಿಗೆ ಬದುಕುವ ಸಲುವಾಗಿ ಅವರ ಮಾತುಗಳನ್ನು ಕಲಿತಿದ್ದಲ್ಲದೆ, ಅವರ ಜೀವನಕ್ರಮವನ್ನೂ ಅಪ್ಪಿಕೊಂಡರು. ಅಸಾಧಾರಣ ಜ್ಞಾನದ ವ್ಯಕ್ತಿಯಾಗಿರುವ ಅಲೋಕ್‌ ಸಾಗರ್‌ ಒಂದೆರಡಲ್ಲ 78 ವಿವಿಧ ಭಾಷೆಗಳನ್ನು ಸ್ಪಷ್ಟವಾಗಿ ಮಾತನಾಡಬಲ್ಲರು. ಆದರೆ, ಅವರು ಹೇಳುವ ಪ್ರಕಾರ, ಪ್ರಕೃತಿಯೊಂದಿಗೆ ಆದಿವಾಸಿಗಳು ನೈಜವಾದ ಸಂಪರ್ಕವನ್ನು ಹೊಂದಿದ್ದಾರೆ. ಪ್ರಕೃತಿಯನ್ನು ಗೌರವದಿಂದ ನೋಡುವ ಕಲೆಯನ್ನು ನಾವು ಅರಿತುಕೊಳ್ಳಬೇಕಾಗಿದೆ ಎನ್ನುತ್ತಾರೆ.

ದೆಹಲಿಯಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಗಳನ್ನು ಹೊಂದಿದ್ದರೂ, ಆದಿವಾಸಿಗಳ ಅಭ್ಯುದಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಅಲೋಕ್‌ ಸಾಗರ್‌ ಅವರ ತಾಯಿ, ದೆಹಲಿಯ ಮಿರಾಂಡ ಹೌಸ್‌ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕಿಯಾಗಿದ್ದರೆ, ತಂದೆಸ ಭಾರತೀಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲೋಕ್‌ ಸಾಗರ್‌ ಅವರ ತಮ್ಮ ಇಂದಿಗೂ ಐಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅಲೋಕ್‌ ಸಾಗರ್‌ ಇಂದು ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಇಡೀ ಜೀವನವನ್ನು ಆದಿವಾಸಿಗಳು ಬುಡಕಟ್ಟು ಜನಾಂಗದವರ ಬೆಳವಣಿಗೆಗೆ ಶ್ರಮ ತೊಡುವ ವಾಗ್ದಾನ ಮಾಡಿದ್ದಾರೆ. ಕುಗ್ರಾಮದಲ್ಲಿ ಹುಲ್ಲಿನ ಮನೆಯಲ್ಲಿ ವಾಸ ಮಾಡುವ ಇವರಲ್ಲಿ ಬರೀ ಮೂರು ಕುರ್ತಾಗಳಿಗೆ, ಪ್ರಯಾಣಕ್ಕೆ ಒಂದೇ ಒಂದು ಸೈಕಲ್‌. ಯಾವುದೇ ಕಾರಣಕ್ಕೂ ಪರಿಸರವನ್ನು ಹಾನಿ ಮಾಡಬಾರದು ಎನ್ನುವುದು ಅವರ ಉದ್ದೇಶ. ಆದಿವಾಸಿಗಳೊಂದಿಗೆ ಸಂವಹನ ನಡೆಸಲು ಬೇಕಾದಷ್ಟು ಭಾಷೆಗಳ ಜ್ಞಾನವನ್ನು ಇವರು ಹೊಂದಿದ್ದಾರೆ.

380 ಸಾವಿರ ಕೋಟಿ ಮೊತ್ತವನ್ನು ದಾನ ಮಾಡಿದ ವಾರನ್‌ ಬಫೆಟ್‌!

ಪರಿಸರಕ್ಕೆ ಕೊಡುಗೆ ನೀಡುವ ಸಲುವಾಗಿ ಇಷ್ಟು ವರ್ಷಗಳಲ್ಲಿ ಆದಿವಾಸಿಗಳ ಪ್ರದೇಶಲ್ಲಿ 50 ಸಾವಿರಕ್ಕೂ ಅಧಿಕ ಸಸಿ ನೆಟ್ಟಿದ್ದಾರೆ. ಅಕ್ಕ ಪಕ್ಕದ ಗ್ರಾಮಗಳಿಗೆ ಬೀಜಗಳನ್ನು ನೀಡುವ ಸಲುವಾಗಿ 60 ಕಿಲೋಮೀಟರ್‌ಗೂ ಅಧಿಕ ಪ್ರಯಾಣ ಮಾಡುತ್ತಾರೆ. ಗ್ರಾಮೀಣಾಭಿವೃದ್ಧಿ ಕಾರ್ಯಗಳಲ್ಲಿ ಸಂತೋಷದಿಂದ ತೊಡಗಿಕೊಳ್ಳುತ್ತಾರೆ. ಒಂದು ಉದ್ದೇಶಕ್ಕೆ ನೀವು ಬದ್ಧರಾಗಿದ್ದರೆ, ಯಾವುದೇ ಅಡೆತಡೆಗಳು ಇರೋದಿಲ್ಲ ಅನ್ನೋದಕ್ಕೆ ಪ್ರೊಫೆಸರ್‌ ಅಲೋಕ್‌ ಸಾಗರ್‌ ಅವರ ಜೀವನವೇ ಉದಾಹರಣೆ.

 

ಹೆಂಡತಿಗೆ ಡಿವೋರ್ಸ್‌ ಕೊಟ್ಟು ಪಡೆದ 9 ಕೋಟಿಯನ್ನು ದಾನ ಮಾಡಿದ ನಟ ಜಾನಿ!

click me!