
ಲಖೀಂಪುರ(ಅ.05): ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವಿನ ನಂತರ ಲಖೀಂಪುರ ಖೇರಿ(Lakhimpur Kheri)ಗೆ ಹೋಗುವ ದಾರಿಯಲ್ಲಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ(Priyanka Gandhi) 28 ಗಂಟೆಗಳಾದರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆದರೀಗ ಪ್ರಿಯಾಂಕಾ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಧಾನಿ ಮೋದಿಯನ್ನು(Narendra Modi) ಪ್ರಶ್ನಿಸಿದ್ದಾರೆ.
ಹೌದು ಈ ಸಂಬಂಧ ವಿಡಿಯೋ ಮಾಡಿರುವ ಪ್ರಿಯಾಂಕಾ ಮೋದಿಜೀ ನಮಸ್ಕಾರ, ಇಂದು ನೀವು ಸ್ವಾತಂತ್ರ್ಯ ಅಮೃತೋತ್ಸವ ಆಚರಿಸಲು ಲಕ್ನೋಗೆ ಬರುತ್ತಿದ್ದೀರೆಂದು ಕೇಳಿದ್ದೇನೆ. ನೀವು ಈ ವಿಡಿಯೋ ನೋಡಿದ್ದೀರಾ? ಇದರಲ್ಲಿ ನಿಮ್ಮ ಸರ್ಕಾರದ ಮಂತ್ರಿಯ ಮಗ ತನ್ನ ರೈತರ ಮೇಲೆ ಕಾರು ಹರಿಸುತ್ತಿರುವ ದೃಶ್ಯ ಕಂಡುಬರುತ್ತದೆ. ವೀಡಿಯೋವನ್ನು ನೋಡಿ. ಬಳಿಕ ಈ ಮಂತ್ರಿಯನ್ನು ಯಾಕೆ ವಜಾಗೊಳಿಸಿಲ್ಲ, ಸಚಿವರ ಮಗನನ್ನು ಬಂಧಿಸಿಲ್ಲ ಎಂದು ದೇಶಕ್ಕೆ ಹೇಳಿ. ನೀವು ನನ್ನಂತಹ ವಿರೋಧ ಪಕ್ಷದ ನಾಯಕರನ್ನು ಯಾವುದೇ ಆದೇಶ ಮತ್ತು ಎಫ್ಐಆರ್ ಇಲ್ಲದೆ ಕಸ್ಟಡಿಯಲ್ಲಿ ಇರಿಸಿದ್ದೀರಿ, ಈ ಮನುಷ್ಯ ಏಕೆ ಮುಕ್ತನಾಗಿದ್ದಾನೆ ಎಂದು ತಿಳಿಯಲು ನಾನು ಬಯಸುತ್ತೇನೆ ಎಂದಿದ್ದಾರೆ.
ಇಂದು, ನೀವು ಸ್ವಾತಂತ್ರ್ಯ ಆಚರಣೆಯಲ್ಲಿರುವ, ನಮಗೆ ಯಾರು ಸ್ವಾತಂತ್ರ್ಯ ಕೊಟ್ಟರು ಎಂಬುದನ್ನು ನೆನಪಿಡಿ. ಈ ರೈತರು ನಮಗೆ ಸ್ವಾತಂತ್ರ್ಯ ನೀಡಿದರು. ಇಂದಿಗೂ ರೈತರ ಮಕ್ಕಳು ಗಡಿಯಲ್ಲಿ ದೇಶವನ್ನು ರಕ್ಷಿಸುತ್ತಿದ್ದಾರೆ. ರೈತರು ತಿಂಗಳುಗಟ್ಟಲೆ ಕಷ್ಟಪಡುತ್ತಿದ್ದಾರೆ, ತಮ್ಮ ಧ್ವನಿ ಎತ್ತುತ್ತಿದ್ದಾರೆ. ನೀವು ಅದನ್ನು ಆಲಿಸುತ್ತಿಲ್ಲ. ನೀವು ಲಖೀಂಪುರಕ್ಕೆ ಬನ್ನಿ ಎಂದು ಒತ್ತಾಯಿಸುತ್ತೇನೆ. ದೇಶದ ಆತ್ಮವೂ ಆಗಿರುವ ಈ ರೈತರ ನೋವನ್ನು ಅರ್ಥಮಾಡಿಕೊಳ್ಳಿ ಮತ್ತು ಆಲಿಸಿ. ಅವರನ್ನು ರಕ್ಷಿಸುವುದು ನಿಮ್ಮ ಕರ್ತವ್ಯ .... ಜೈ ಹಿಂದ್, ಜೈ ಕಿಸಾನ್ ಎಂದಿದ್ದಾರೆ.
ಇನ್ನು ಪ್ರಿಯಾಂಕಾ ತಮ್ಮ ವಿಡಿಯೋದಲ್ಲಿ ಮತ್ತೊಂದು ಫೋನ್ ಮೂಲಕ ಈ ವರೈತರ ವಿಡಿಯೋವನ್ನು ತೋರಿಸಿದ್ದಾರೆ. ಇದರಲ್ಲಿ ಘೋಷಣೆಗಳನ್ನು ಕೂಗುತ್ತಿರುವ ರೈತರ ಮೇಲೆ ಕಾರು ಸಾಗುತ್ತಿರುವ ದೃಶ್ಯ ಕಂಡುಬರುತ್ತದೆ. ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ಈ ವೀಡಿಯೊದಲ್ಲಿ, ರೈತರು ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬೀಳುವುದನ್ನು ಕಾಣಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ