
ರಾಯ್ಪುರ್ (ಏ.20) ಪ್ರಯಾಣಿಕರನ್ನು ಹೊತ್ತ ಹೈದರಾಬಾದ್ ಹುಬ್ಭಳಿ ವಿಮಾನ ತಾಂತ್ರಿಕ ದೋಷದಿಂದ ಲ್ಯಾಂಡಿಂಗ್ ಆಗಲು ಪರದಾಡಿ ಕೊನೆಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆದ ಘಟನೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಮಾನದಲ್ಲಿನ ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯಗಳು ಹರಿದಾಡಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಚತ್ತೀಸಘಡದ ಜಶಪುರ್ ಹಾಗೂ ನಾರಾಯಣಪುರ ಪ್ರದೇಶದಲ್ಲಿ ಖಾಸಗಿ ವಿಮಾನ ಪತನಗೊಂಡಿರುವ ಮಾಹಿತಿ ಲಭ್ಯವಾಗಿದೆ.
ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರತ್ನಪಹಲಿ ಕಾಡಿನಲ್ಲಿ ಈ ಘಟನೆ ನಡೆದಿದೆ. ಖಾಸಗಿ ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷಗಳು ಇರಲಿಲ್ಲ ಎನ್ನಲಾಗುತ್ತಿದೆ. ಪ್ರಮುಖವಾಗಿ ಈ ವಿಮಾನ ಅತೀ ಕೆಳಮಟ್ಟದಲ್ಲಿ ಹಾರಾಡುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಪರ್ವತ ಹಾಗೂ ಕಾಡು ಪ್ರದೇಶ ಆಗಮಿಸುತ್ತಿದ್ದಂತೆ ವಿಮಾನ ಮೇಲಕ್ಕೆ ಹಾರಬೇಕಿತ್ತು. ಆದರೆ ಪರ್ವತಗಳ ಮೇಲಿನ ಮರಕ್ಕೆ ಡಿಕ್ಕಿಯಾಗಿ ವಿಮಾನ ಪತನಗೊಂಡಿದೆ ಎಂದು ಪ್ರಾಥಮಿಕ ಮಾಹಿತಿಗಳು ಬಹಿರಂಗವಾಗಿದೆ.
ಸದ್ಯ ಲಭ್ಯವಾಗಿರುವ ಮಾಹಿತಿಯಲ್ಲಿ ಈ ವಿಮಾನದಲ್ಲಿನ ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ಕುರಿತು ಯಾವುದೇ ಮಾಹಿತಿ ಇಲ್ಲ. ನಾರಾಯಣಪುರ ಕಾಡು ಪ್ರದೇಶದಲ್ಲಿ ವಿಮಾನ ಪತನಗೊಂಡು ಹೊತ್ತಿ ಉರಿದಿದೆ. ಬೆಂಕಿ ಜ್ವಾಲೆಗಳು ದೂರದಿಂದಲೂ ಸ್ಪಷ್ಟವಾಗಿ ಕಾಣುತ್ತಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಾವು ನೋವಿನ ಕುರಿತು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಕಾಡು ಪ್ರದೇಶದಲ್ಲಿ ಖಾಸಗಿ ವಿಮಾನ ಪತನಗೊಂಡಿರುವ ಕಾರಣ ರಕ್ಷಣಾ ತಂಡಗಳು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ. ಹರಸಾಹಸ ಮಾಡಿ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಕಾಡು ಪ್ರದೇಶದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಥಳೀಯ ಜಿಲ್ಲಾಡಳಿತ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ವಿಮಾನ, ಪ್ರಯಾಣಿಕರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಸಿಂಗಲ್ ಎಂಜಿನ್ ಪ್ರೊಪೆಲ್ಲರ್ ಏರ್ಕ್ರಾಫ್ಟ್ ಸಾಮಾನ್ಯವಾಗಿ ಹೆಚ್ಚು ಎತ್ತರದಲ್ಲಿ ಹಾರಾಟ ನಡೆಸುವುದಿಲ್ಲ. ಆದರೆ ಅಗತ್ಯಬಿದ್ದಾಗ, ಸುರಕ್ಷತೆಗಾಗಿ ಎತ್ತರದಲ್ಲಿ ಹಾರಾಟ ನಡೆಸಲಿದೆ. ಆದರೆ ಈ ಘಟನೆಯಲ್ಲಿ ಪೈಲೆಟ್ ಪರ್ವತ, ಕಾಡು ಪ್ರದೇಶದಲ್ಲಿ ಅಪಾಯದ ಮುನ್ಸೂಚನೆ ಇದ್ದರೂ ಕಡೆಗಣಿಸಿದ್ರಾ ಅನ್ನೋ ಅನುಮಾನಗಳು ಕಾಡತೊಡಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ