
ನವದೆಹಲಿ (ಮೇ.08): ‘ಭಾರತದ ಆಹಾರ ಭದ್ರತಾ ವ್ಯವಸ್ಥೆ ಉತ್ತಮವಾಗಿದ್ದು, ಪ್ರಸ್ತುತ ವರ್ಷ ಬಫರ್ ಅವಶ್ಯಕತೆಗಿಂತ 3 ಪಟ್ಟು ಹೆಚ್ಚಾಗಿದೆ’ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವಲ್ಲಿ ಬದ್ಧತೆ ತೋರಿದ್ದು, ಪರಿಣಾಮ ನಮ್ಮ ಆಹಾರ ಭದ್ರತಾ ಚೌಕಟ್ಟು ಬಲವಾಗಿ ಬೆಳೆಯುತ್ತಲೇ ಇದೆ ಎಂದು ಪ್ರತಿಪಾದಿಸಿದ್ದಾರೆ.
604.02 ಲಕ್ಷ ಟನ್ ದಾಸ್ತಾನು: ಪ್ರಸ್ತುತ ಕೇಂದ್ರ ಸರ್ಕಾರದ ಆಹಾರ ಧಾನ್ಯ ದಾಸ್ತಾನು 604.02 ಲಕ್ಷ ಟನ್ ತಲುಪಿದೆ. ಇದು ಕಡ್ಡಾಯ ಬಫರ್ ಅವಶ್ಯಕತೆಗಿಂತ 3 ಪಟ್ಟು ಎಂದು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಗೋಧಿ ಮತ್ತು ಅಕ್ಕಿ ದಾಸ್ತಾನು ಸಮೃದ್ಧವಾಗಿದ್ದು, ದೇಶಾದ್ಯಂತ ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ವಿವಿಧ ಜನಕಲ್ಯಾಣ ಯೋಜನೆಗಳಿಗೆ ನಿರಂತರ ಪೂರೈಕೆಯನ್ನು ಸಾಧ್ಯವಾಗುತ್ತಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಒಂದರಿಂದಲೇ 80 ಕೋಟಿಗೂ ಹೆಚ್ಚು ಭಾರತೀಯರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ದೇಶೀಯವಾಗಿ ಆಹಾರ ಭದ್ರತೆ ಒದಗಿಸುವ ಜತೆಗೆ ರೈತರಿಂದ ವ್ಯವಸ್ಥಿತ ಖರೀದಿ, ಸಮೃದ್ಧ ಫಸಲು ಮತ್ತು ಅನ್ನದಾತರಿಗೆ ನೀಡುತ್ತಿರುವ ನಿರಂತರ ಬೆಂಬಲವು ರೈತ ಕಲ್ಯಾಣ ಮತ್ತು ದೇಶದ ಸುಭದ್ರತೆ ಕಡೆಗಿನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಸೂರ್ಯಕಾಂತಿ ಬೆಳೆಗಾರರ ಬೆಂಬಲಕ್ಕೆ ನಿಂತ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಕಬ್ಬು ಬೆಳೆಗಾರರಿಗೂ ಬೆಂಬಲ ಬೆಲೆ ಹೆಚ್ಚಿಸಿ ನೆರವಿಗೆ ಬಂದಿದೆ. ಇದರಿಂದಾಗಿ ಕರ್ನಾಟಕದ ಸರಿ ಸುಮಾರು 8 ರಿಂದ 10 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ 2026-27ನೇ ಹಂಗಾಮಿಗೆ ಕಬ್ಬಿಗೆ ಶೇ.10.25 ಮೂಲ ರಿಕವರಿ ದರದ ಮೇಲೆ ಪ್ರತಿ ಕ್ವಿಂಟಲ್ಗೆ ₹365 ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯನ್ನು (ಎಫ್ಆರ್ಪಿ) ಅನುಮೋದಿಸಿದೆ. ಕಬ್ಬಿನ ರಿಕವರಿಯಲ್ಲಿ 0.1% ಏರಿಕೆಗೆ ₹3.56 ಪ್ರತಿ ಕ್ವಿಂಟಲ್ ಹೆಚ್ಚುವರಿ ಪ್ರೋತ್ಸಾಹಧನ ನೀಡುವುದರ ಜತೆಗೆ ರಿಕವರಿ 9.5% ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಯಾವುದೇ ಕಡಿತವಿಲ್ಲದೆ ಪ್ರತಿ ಕ್ವಿಂಟಲ್ ಗೆ ₹338.3 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಬೆಳಗಾವಿ, ಬಾಗಲಕೋಟೆ, ಮಂಡ್ಯ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ, ದಾವಣಗೆರೆ, ಬೀದರ್ ಹೀಗೆ ವಿವಿಧ ಜಿಲ್ಲೆಗಳು ಕಬ್ಬು ಬೆಳೆಯುವಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಒಟ್ಟು ಸಕ್ಕರೆ ಉತ್ಪಾದನೆಯ ಶೇ.16 ರಷ್ಟು ಕರ್ನಾಟಕದ ಪಾಲಿದೆ. ಹೀಗಾಗಿ ಈ ಎಫ್ಆರ್ಪಿ ಹೆಚ್ಚಳವು ರಾಜ್ಯದ ಪಾಲಿಗೂ ಅನನ್ಯ ಕೊಡುಗೆಯಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ