
ನವದೆಹಲಿ(ಏ.18): ಭಾರತದಲ್ಲಿ ಕಡುಬಡತನ 2011-2019ರ ಅವಧಿಯಲ್ಲಿ ಶೇ.12.3ರಷ್ಟುಇಳಿಕೆಯಾಗಿದೆ. 2011ರಲ್ಲಿ ಶೇ.22.5ರಷ್ಟಿದ್ದ ಕಡುಬಡವರ ಸಂಖ್ಯೆ 2019ರಲ್ಲಿ ಶೇ.10.2ಕ್ಕೆ ಕುಸಿದಿದೆ ಎಂದು ವಿಶ್ವಬ್ಯಾಂಕ್ನ ಸಂಶೋಧನಾ ವರದಿಯೊಂದು ತಿಳಿಸಿದೆ.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಭಾರತದಲ್ಲಿ ಕಡುಬಡತನ ಬಹುತೇಕ ನಿರ್ಮೂಲನೆಯಾಗಿದೆ. ಸರ್ಕಾರಗಳು ಉಚಿತ ಆಹಾರ ಪೂರೈಸುತ್ತಿರುವುದರಿಂದ ಭಾರತದಲ್ಲಿನ ತೀವ್ರತರ ಬಡತನ ಕಳೆದ 40 ವರ್ಷಗಳಲ್ಲೇ ಈಗ ಕನಿಷ್ಠಕ್ಕೆ ಕುಸಿದಿದೆ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಈಗ ವಿಶ್ವಬ್ಯಾಂಕ್ ಕೂಡ ಭಾರತದಲ್ಲಿ ಕಡುಬಡವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ಹೇಳಿರುವುದು ಆಶಾಭಾವನೆ ಮೂಡಿಸಿದೆ.
ವಿಶೇಷವೆಂದರೆ, ಭಾರತದ ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಬಡತನ ಇಳಿಕೆಯ ಪ್ರಮಾಣ ಹೆಚ್ಚಿದೆ. ನಗರ ಪ್ರದೇಶಗಳಲ್ಲಿ ಬಡತನ ಕುಸಿತದ ಪ್ರಮಾಣ ಶೇ.7.9 ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ಶೇ.14.7ರಷ್ಟಿದೆ. ‘ಭಾರತದಲ್ಲಿ ಬಡವರ ಸಂಖ್ಯೆ ಇಳಿಕೆಯಾಗಿದೆ. ಆದರೆ, ಈ ಹಿಂದೆ ಅಂದುಕೊಂಡಷ್ಟುಪ್ರಮಾಣದಲ್ಲಿ ಇಳಿಕೆಯಾಗಿಲ್ಲ’ ಎಂದೂ ವರದಿ ಹೇಳಿದೆ.
ಸಣ್ಣ ಕೃಷಿಕರ ಆದಾಯ ಹೆಚ್ಚಳ:
ಭಾರತದಲ್ಲಿ 2011-2019ರ ನಡುವೆ ಅತಿ ಸಣ್ಣ ಕೃಷಿಕರ ನೈಜ ಆದಾಯ ಶೇ.10ರಷ್ಟುಹೆಚ್ಚಾಗಿದೆ. ದೊಡ್ಡ ಕೃಷಿಕರ ಆದಾಯ ಶೇ.2ರಷ್ಟುಮಾತ್ರ ಹೆಚ್ಚಾಗಿದೆ ಎಂದೂ ವಿಶ್ವಬ್ಯಾಂಕ್ನ ವರದಿ ತಿಳಿಸಿದೆ.
ವಿಶ್ವಬ್ಯಾಂಕ್ನ ಇಬ್ಬರು ಅರ್ಥಶಾಸ್ತ್ರಜ್ಞರಾದ ಸುತೀರ್ಥ ಸಿನ್ಹಾ ರಾಯ್ ಹಾಗೂ ರಾಯ್ ವ್ಯಾನ್ ಡೆರ್ ವೀಡ್ ಈ ವರದಿ ಸಿದ್ಧಪಡಿಸಿದ್ದಾರೆ. ಖಾಸಗಿ ದತ್ತಾಂಶ ಕಂಪನಿಯೊಂದು ಕನ್ಸ್ಯೂಮರ್ ಪಿರಾಮಿಡ್್ಸ ಹೌಸ್ಹೋಲ್ಡ್ ಸರ್ವೇ ಮೂಲಕ ಪಡೆದ ಅಂಕಿ-ಅಂಶಗಳನ್ನು ಬಳಸಿ ವರದಿ ಸಿದ್ಧಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ