
ಡೆಲ್ಲಿ ಮಂಜು
ಹೊಸದಿಲ್ಲಿ: ಒಂದು ಬಿಳೀಬಟ್ಟೆ, ಅದರಲ್ಲೂ ಸುತ್ತಿಟ್ಟ ಎಂಟು ತಿಂಗಳ ಹಸುಗೂಸು. ದೇವರ ಅನುಗ್ರಹದೊಂದಿಗೆ ತಂದೆ-ತಾಯಿಯಿಂದ ಹುಟ್ಟು ಪಡೆದು ಎಂಟು ತಿಂಗಳ ಹಿಂದಷ್ಟೇ ಪೋಷಕರ ಮಡಿಲು ಸೇರಿತ್ತು. ಅಮ್ಮನ ಒತ್ತಾಸೆಯೋ ಅಥವಾ ಅಪ್ಪನ ಒತ್ತಾಸೆಯೋ ಗೊತ್ತಿಲ್ಲ, ಮೌಢ್ಯದ ಯಜಮಾನ ಬೋಲೆ ಬಾಬಾ ಕರೆದ ಅಂಥ ಪೋಷಕರ ಜೊತೆ ಬಂದಿತ್ತು.
ಚರಣ ಧೂಳಿಗಾಗಿ ಆಸೆ ಬಿದ್ದ ಅಂಧ ಶ್ರದ್ದಾಳುಗಳ ಯಡವಟ್ಟಿನಿಂದ ಕಾಲ್ತುಳಿತಕ್ಕೆ ಸಿಕ್ಕಿ ಎಂಟೇ ತಿಂಗಳ ಅವಧಿಯಲ್ಲಿ ಮತ್ತೇ ದೇವರಪಾದ ಸೇರಿದೆ ಆ ಹಸುಗೂಸು. ನೂಕುನುಗ್ಗಲಿಂದ ಕೊನೆ ಉಸಿರು ಚೆಲ್ಲಿದ ಹಸುಗೂಸಿಗೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಪೋಸ್ಟ್ ಮಾರ್ಟಂ ನಡೆಸಿ, ಪೋಷಕರಿಗೆ ಒಪ್ಪಿಸಲಾಯ್ತು.
ಹೆಚ್ಚು ಕಡಿಮೆ 36 ಮೃತ ದೇಹಗಳ ಪೋಸ್ಟ್ ಮಾರ್ಟಂ ನಡೆದ್ರೂ ಶವಾಗಾರ ಜಗ್ಗಿರಲಿಲ್ಲ. ಆದ್ರೆ ಹಸುಗೂಸಿನ ದೇಹಕ್ಕೆ ಪೋಸ್ಟ್ ಮಾರ್ಟಂ ಸಲಕರಣೆಗಳು ಇಟ್ಡಾಗ ಒಮ್ಮೆ ಕಣ್ಣೀರು ಹಾಕಿದಂತೆ ಕಂಡು ಬಂತು. ಶವಾಗಾರಕ್ಕೂ ಕಣ್ಣೀರಿಗೂ ಅವಿನಾಭಾವ ಸಂಬಂಧ ಇರುತ್ತೆ ಬಿಡಿ. ಆದ್ರೆ ಮೌಢ್ಯ ಬಿತ್ತುವ ಒಬ್ಬನ ಕರೆಗೆ ಓಗೊಟ್ಟು ಬಂದು, ತನ್ನದಲ್ಲದ ತಪ್ಪಿಗೆ ಉಸಿರು ಚೆಲ್ಲಿದ ಮಗುವನ್ನು ಕಂಡು ಶವಾಗಾರ ಮೊಮ್ಮಲು ಮರಗಿದ್ದು ಮಾತ್ರ ಸುಳ್ಳಲ್ಲ.
ಎಲ್ಲರಂಥಲ್ಲ ಈ ಪವಾಡ ಪುರುಷ ಭೋಲೇಬಾಬಾ! ಪೊಲೀಸ್ ಆಗಿದ್ದ ವ್ಯಕ್ತಿ ಭೋಲೇ ಬಾಬಾ ಆಗಿದ್ದೇ ರೋಚಕ!
ಕೃತ್ಯದ ಹಿಂದೆ ಯಾರ ಕೈವಾಡ?:
ಉತ್ತರ ಪ್ರದೇಶದ ಹಾಥ್ರಸ್ನಲ್ಲಿ ಮಂಗಳವಾರ 121 ಭಕ್ತರ ಬಲಿಪಡೆದ ಭೀಕರ ಕಾಲ್ತುಳಿತ ಘಟನೆಯ ಹೊಣೆ ಹೊರಲು ನಿರಾಕರಿಸಿರುವ ಸ್ವಯಂಘೋಷಿತ ದೇವ ಮಾನ ಭೋಲೆ ಬಾಬಾ, ‘ಇದು ನಾನು ಸತ್ಸಂಗ ಮುಗಿಸಿ ತೆರಳಿದ ನಂತರ ಸಂಭವಿಸಿದ ಘಟನೆ. ಸಮಾಜಘಾತಕ ಶಕ್ತಿಗಳ ಕೃತ್ಯ ಇದಾಗಿದ್ದು, ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ’ ಎಂದಿದ್ದಾನೆ.
ಅಲ್ಲದೆ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವುದಾಗಿಯೂ ಆತ ಹೇಳಿರುವ ಭೋಲೆ ಬಾಬಾ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಬದಲಾಗಿ ಅವರ ಭಕ್ತನಾದ ಕಾರ್ಯಕ್ರಮ ಸಂಘಟಕ, ಸೇವಾದಾರ ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರ ಮೇಲೆ ಪ್ರಕರಣಗಳು ದಾಖಲಾಗಿವೆ. ಘಟನೆ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಬಾಬಾ, ಆಶ್ರಮದಲ್ಲಿದ್ದಾನೋ ಅಥವಾ ಪರಾರಿ ಆಗಿದ್ದಾನೋ ಎಂಭ ಬಗ್ಗೆ ಖಚಿತ ಮಾಹಿತಿ ಇಲ್ಲ.
ಸ್ವಯಂಘೋಷಿತ ದೇವಮಾನವ ಮಾಡಿರೋ ಎಡವಟ್ಟುಗಳು ಒಂದೆರಡಲ್ಲ, ಇಲ್ಲಿದೆ ನೋಡಿ ಬೋಲೆ ಬಾಬಾನ ಕಥೆ
ನ್ಯಾಯಾಂಗ ತನಿಖೆ ಯೋಗಿ ಘೋಷಣೆ:
ಹಾಥ್ರಸ್ ಧಾರ್ಮಿಕ ಸಭೆ ಕಾಲ್ತುಳಿತ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಬುಧವಾರ ಹಾಥ್ರಸ್ಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ ನಂತರ ಉತ್ತರ ಪ್ರದೇಶ ಸಿಎಂ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಈಗಾಗಲೇ ನಾವು ಆಗ್ರಾ ಎಡಿಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದೇವೆ. ಆಗಲೇ ಈ ತಂಡೆ ಪ್ರಾಥಮಿಕ ವರದಿಯನ್ನೂ ಸಲ್ಲಿಸಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಎಸ್ಐಟಿಗೆ ಸೂಚಿಸಲಾಗಿದೆ. ಇದಲ್ಲದೇ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲೂ ರಾಜ್ಯ ಸರ್ಕಾರ ನಿರ್ಧರಿಸಿದೆ. ನಿವೃತ್ತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಹ ನ್ಯಾಯಾಂಗ ತನಿಖೆಯ ಭಾಗವಾಗಲಿದ್ದಾರೆ,’ ಎಂದು ಹೇಳಿದರು.
‘ದುರಂತಕ್ಕೆ ಯಾರು ಹೊಣೆ? ಇದು ಆಕಸ್ಮಿಕ ಘಟನೆಯೇ ಅಥವಾ ಇದು ಪಿತೂರಿಯೇ ಎಂದು ಸಮಿತಿಯು ಪತ್ತೆ ಮಾಡುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಇದಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಸರ್ಕಾರವು ಜಾರಿಗೆ ತರಬಹುದು’ ಎಂದರು.
ಹತ್ರಾಸ್ ಹೆಣಗಳ ರಾಶಿ ನೋಡಿ ಡ್ಯೂಟಿ ಪೊಲೀಸ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ