ಪೂಂಛ್ ವಾಯುಸೇನೆ ಮೇಲೆ ಭಯೋತ್ಪಾದಕ ದಾಳಿ, ಇಬ್ಬರು ಉಗ್ರರ ರೇಖಾಚಿತ್ರ ಬಿಡುಗಡೆ!

By Suvarna NewsFirst Published May 6, 2024, 4:27 PM IST
Highlights

ಪೂಂಛ್ ವಾಯುಸೇನೆ ಮೇಲೆ ನಡೆದ ಉಗ್ರ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರೆ, ನಾಲ್ವರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಆಹಾರ, ಸಾರಿಗೆ ವ್ಯವಸ್ಥೆ ಮಾಡಿದ್ದ ಸ್ಥಳೀಯ ಇಬ್ಬರನ್ನು ಪೊಲೀಸರು ಬಂಧಿಸಿದ್ದರೆ, ಇದೀಗ ದಾಳಿ ನಡೆಸಿದ ಇಬ್ಬರು ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ.
 

ನವದೆಹಲಿ(ಮೇ.06) ಭಾರತೀಯ ವಾಯುಸೇನೆ ಮೇಲೆ ನಡೆದ ಭಯೋತ್ಪಾದಕ ದಾಳಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರೂರಿರುವ ಉಗ್ರರ ಕೃತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸ್ಥಳೀಯರ ನೆರವಿನ ಮೂಲಕ ಉಗ್ರರು ಭಾರತೀಯ ವಾಯುಸೇನಾ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಪೂಂಛ್ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದರೆ, ನಾಲ್ವರು ಮೃತಪಟ್ಟಿದ್ದಾರೆ. ಈ ದಾಳಿ ನಡೆಸಿದ ಇಬ್ಬರು ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಪೂಂಚ್ ವಲಯದಲ್ಲಿ ನಡೆದ ಈ ಭೀಕರ ಭಯೋತ್ಪಾದಕ ದಾಳಿಯಿಂದ ಭಾರತ ಕೆರಳಿದೆ. ಇದೀಗ ಸೇನಾ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪೂಂಚ್ ಸೇರಿದಂತೆ ಸುತ್ತು ಮುತ್ತಲಿನ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಈ ದಾಳಿ ನಡೆಸಿದ ಇಬ್ಬರು ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಇಬ್ಬರು ಉಗ್ರರ ತಲಗೆ ತಲಾ ಹತ್ತು ಲಕ್ಷ ರೂಪಾಯಿಯಂತೆ ಒಟ್ಟು 20 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಉಗ್ರರ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಸೇನೆ ಹೇಳಿದೆ.

ಮೂರು ದಿನದಲ್ಲಿ ಪುಟ್ಟ ಮಗನ ಹುಟ್ಟುಹಬ್ಬಕ್ಕೆ ಬರಬೇಕಿದ್ದ ತಂದೆ, ಪೂಂಚ್ ಉಗ್ರ ದಾಳಿಯಲ್ಲಿ ಹುತಾತ್ಮ!

ಪೂಂಛ್ ದಾಳಿ ಸಂಬಂಧ ಹಲವು ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಗ್ರರಿಗೆ ಆಹಾರ, ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸ್ಥಳೀಯರು ನೀಡಿದ್ದಾರೆ. ಈ ಭಯೋತ್ಪಾದಕರ ಹೆಡೆಮುರಿ ಕಟ್ಟಲು ಪಣತೊಟ್ಟಿರುವ ಭಾರತ ಒಂದಡೆ ಸತತ ಕಾರ್ಯಾಚರಣೆ ನಡೆಸಿದ್ದರೆ, ಮತ್ತೊಂದೆಡೆ ಉಗ್ರರ ಪತ್ತೆಗೆ ಇದೀಗ ರೇಖಾಚಿತ್ರ ಬಿಡುಗಡೆ ಮಾಡಿ ಪತ್ತೆ ಹಚ್ಚಲು ಮಂದಾಗಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಆಶ್ರಯ ಪಡೆಯುವ ಈ ಉಗ್ರರು, ಭಾರತದ ಕೆಲ ಸ್ಥಳೀಯರ ನೆರವಿನಲ್ಲಿ ದೇಶದೊಳಗೆ ಉಗ್ರ ಕೃತ್ಯ ನಡೆಸುತ್ತಿದ್ದಾರೆ ಅನ್ನೋ ಆರೋಪಕ್ಕೆ ಈ ದಾಳಿ ಮತ್ತಷ್ಟು ಪುಷ್ಠಿ ನೀಡಿದೆ. ಇದೀಗ ಉಗ್ರರ ನೆಲೆಗಳ ಮೇಲೆ ಭಾರತ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ. 

Breaking: ಏರ್‌ಪೋರ್ಸ್‌ ಬೆಂಗಾವಲು ಪಡೆ ಮೇಲೆ ಪೂಂಚ್‌ನಲ್ಲಿ ಭಯೋತ್ಪಾದಕ ದಾಳಿ, ಹಲವು ಸೈನಿಕರಿಗೆ ಗಾಯ!

ಮೇ4ರಂದು  ಭಾರತೀಯ ವಾಯುಸೇನಾ ಯೋಧರ ಬೆಂಗಾಲು ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಸುರಾನ್‌ಕೋಟ್ ಏರಿಯಾದ ಸನೈ ಟಾಪ್‌ಗೆ ಯೋಧರು ಸ್ಥಳಾಂತರ ಪ್ರಕ್ರಿಯೆಯಲ್ಲಿ ಈ ದಾಳಿ ನಡೆದಿದೆ. ಉಗ್ರರು 30 ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಯೋಧ ವಿಕ್ಕಿ ಪಹಾಡೆ ಹುತಾತ್ಮರಾಗಿದ್ದಾರೆ.
 

click me!