
ಬೆಂಗಳೂರು/ನವದೆಹಲಿ (ಜೂ.05): ಭಾನುವಾರ ವಿಶ್ವ ಪರಿಸರ ದಿನಾಚರಣೆ ನಡೆಯಲಿದ್ದು, ಈ ನಿಮಿತ್ತ ಈಶ ಫೌಂಡೇಶನ್ ಮುಖ್ಯಸ್ಥ ಸದ್ಗುರು ಅವರ ‘ಮಣ್ಣು ಉಳಿಸಿ’ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಸಮಾರಂಭ ನಡೆಯಲಿದೆ. ಈ ವೇಳೆ ಸದ್ಗುರು ಅವರು ಮೋದಿ ಅವರಿಗೆ ‘ಮಣ್ಣು ಉಳಿಸಿ ಅಭಿಯಾನ’ಕ್ಕೆ ಬೆಂಬಲ ಕೋರಲಿದ್ದಾರೆ. ಮೋದಿ ಹಾಗೂ ಸದ್ಗುರು ಅವರು ಇದೇ ವೇಳೆ ಪರಿಸರ ಹಾಗೂ ಮಣ್ಣಿನ ಸಂರಕ್ಷಣೆ ಬಗ್ಗೆ ಭಾಷಣ ಮಾಡಲಿದ್ದಾರೆ.
ಸದ್ಗುರು 100 ದಿನದ ಅಭಿಯಾನ: ಅಳಿವಿನಂಚಿನಲ್ಲಿರುವ ಮಣ್ಣನ್ನು ಉಳಿಸಲು ಸದ್ಗುರು ಜಾಗತಿಕ ಅಭಿಯಾನ ನಡೆಸುತ್ತಿದ್ದಾರೆ. ಸದ್ಗುರು ಅವರು 100 ದಿನಗಳ ‘ಮಣ್ಣು ಉಳಿಸಿ’ ಬೈಕ್ ರಾರಯಲಿ ಅಭಿಯಾನವನ್ನು ಕಳೆದ ಮಾರ್ಚ್ಲ್ಲಿ ಲಂಡನ್ನ ಸಂಸತ್ ಚೌಕದಲ್ಲಿ ಆರಂಭಿಸಿದ್ದರು. ಬಳಿಕ 27 ದೇಶ ಸುತ್ತಿ ಅಲ್ಲೆಲ್ಲ ಮಣ್ಣಿನ ಫಲವತ್ತತೆಯ ಅರಿವು ಮೂಡಿಸಿ ಭಾರತಕ್ಕೆ ಇತ್ತೀಚೆಗೆ ಪ್ರವೇಶಿಸಿದ್ದಾರೆ. ‘ಆಜಾದಿ ಕಾ ಅಮೃತ ಮಹೋತ್ಸವ’ ಭಾಗವಾಗಿ ಭಾನುವಾರ ರಾಜಧಾನಿ ದೆಹಲಿಗೆ ಸದ್ಗುರು ತೆರಳುತ್ತಿದ್ದಾರೆ. ಜೂನ್ 5ರಂದು ಅವರ ಅಭಿಯಾನದ 75ನೇ ದಿನ ಕೂಡ ಹೌದು. ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನದ ಹಿನ್ನೆಲೆ ದೆಹಲಿ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಅವರಿಗೆ ತಮ್ಮ ಅಭಿಯಾನಕ್ಕೆ ಸಹಕಾರ ಕೋರಲಿದ್ದಾರೆ.
Save Soil Movement: 26 ದೇಶ ಸುತ್ತಿದ ಸದ್ಗುರು ಭಾರತ ಪ್ರವೇಶ!
ಕಳೆದ ಜನವರಿಯಲ್ಲಿ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದ ಅಜೆಂಡಾದಲ್ಲಿ ಪ್ರಧಾನಿ ಮೋದಿಯವರು ಹಸಿರು, ಸ್ವಚ್ಛ, ಸುಸ್ಥಿರ ಮತ್ತು ವಿಶ್ವಾಸಾರ್ಹ ಬೆಳವಣಿಗೆಯ ಕುರಿತು ಭಾರತದ ಮುಂದಿನ ಗುರಿಯನ್ನು ಉಲ್ಲೇಖಿಸಿದ್ದರು. ಸದ್ಗುರುಗಳು ತಮ್ಮ ಪ್ರಯಾಣವನ್ನು ಆರಂಭಿಸಿದಾಗಿನಿಂದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಕ್ಕಳು ಭಾರತದ ಪ್ರಧಾನಿಗೆ ಪತ್ರ ಬರೆದು ಮಣ್ಣಿನ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿನ ಫಲವತ್ತಾದ ಭೂಮಿಗಳ ಮರುಭೂಮೀಕರಣವನ್ನು ನಿಲ್ಲಿಸಲು ತುರ್ತು ಕ್ರಮಗಳನ್ನು ಪ್ರಾರಂಭಿಸಲು ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಮತ್ತು ಸದ್ಗುರು ಇಬ್ಬರು ದೇಶದ ಪರಿಸರ ಸಂರಕ್ಷಣೆಯ ಗುರಿಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವ ನಿರೀಕ್ಷೆಯಿದೆ.
ಶೇ.30 ರಷ್ಟು ಮಣ್ಣು ಬಂಜರು: ‘ಭಾರತದಲ್ಲಿ, ಕೃಷಿ ಮಣ್ಣಿನಲ್ಲಿನ ಸರಾಸರಿ ಸಾವಯವ ಅಂಶವು ಶೇ.0.68 ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ದೇಶವು ಮರುಭೂಮಿ ಮತ್ತು ಮಣ್ಣಿನ ಅಳಿವಿನ ಹೆಚ್ಚಿನ ಅಪಾಯದಲ್ಲಿದೆ. ದೇಶದಲ್ಲಿ ಸುಮಾರು ಶೇ.30 ಫಲವತ್ತಾದ ಮಣ್ಣು ಈಗಾಗಲೇ ಬಂಜರುಗಳಾಗಿ ಮಾರ್ಪಟ್ಟಿದ್ದು, ಇಳುವರಿ ಪಡೆಯಲು ಅಸಮರ್ಥವಾಗಿವೆ. ಪ್ರಸ್ತುತ ಮಣ್ಣಿನ ಅವನತಿ ದರವನ್ನು ಗಮನಿಸಿದರೆ 2050 ರ ಹೊತ್ತಿಗೆ ಭೂಮಿಯ ಶೇ.90ರಷ್ಟುಮರುಭೂಮಿಯಾಗಿ ಬದಲಾಗಬಹುದು’ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ ಎಂದು ಈಶ ¶ೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
Save Soil Movement: ನೀವು ತಿಳಿದಿರಲೇಬೇಕಾದ 15 ಮಹತ್ವದ ಸಂಗತಿಗಳು!
ಪರಿಸರಸ್ನೇಹಿ ಜೀವನಶೈಲಿ ಜಾಗತಿಕ ಅಭಿಯಾನಕ್ಕೆ ಇಂದು ಮೋದಿ ಚಾಲನೆ: ಪರಿಸರಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಜಾಗತಿಕ ಮಟ್ಟದ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ