
ತಿರುಮಲ (ನ.28): ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ 8 ಗಂಟೆಗೆ ಇಲ್ಲಿನ ಸುಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಹಾಗೂ 140 ಕೋಟಿ ದೇಶವಾಸಿಗಳ ಆಯುರಾರೋಗ್ಯಕ್ಕೆ ದೇವರಲ್ಲಿ ಬೇಡಿಕೊಂಡರು. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ‘ಭಗವಂತನ ಸನ್ನಿಧಾನದಲ್ಲಿ ದೇಶದ ಸಮಸ್ತ 140 ಕೋಟಿ ನಾಗರಿಕರಿಗೆ ಆಯುಷ್ಯ, ಆರೋಗ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ದೇವರಲ್ಲಿ ಪ್ರಾರ್ಥಿಸಿದ ಬಳಿಕ ಮೋದಿ ಅವರಿಗೆ ಅರ್ಚಕರು ವೇದಮಂತ್ರಗಳ ಮೂಲಕ ಆಶೀರ್ವಾದ ಮಾಡಿದರು. ಬಳಿಕ ಮೋದಿ ಅವರು ಚುನಾವಣೆ ಪ್ರಚಾರಕ್ಕಾಗಿ ತೆಲಂಗಾಣದತ್ತ ಪ್ರಯಾಣಿಸಿದರು. ಮೋದಿ ಅವರು ದೇವರ ದರ್ಶನ ಪಡೆಯುವಾಗ ಬಿಳಿ ಪಂಚೆ, ಶಲ್ಯ ಧರಿಸಿದ್ದರು ಹಾಗೂ ಅವರ ಹಣೆಯ ಮೇಲಿನ 3 ನಾಮ ಗಮನ ಸೆಳೆಯಿತು. ಭಾನುವಾರ ಸಂಜೆ ಪ್ರಧಾನಿಯನ್ನು ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಮತ್ತು ರಾಜ್ಯಪಾಲ ಅಬ್ದುಲ್ ನಜೀರ್ ಬರಮಾಡಿಕೊಂಡಿದ್ದರು. ರಾತ್ರಿ ತಿರುಪತಿಯಲ್ಲೇ ಮೋದಿ ತಂಗಿದ್ದರು ಹಾಗೂ ಬಂದಾಕ್ಷಣ ರೋಡ್ ಶೋ ನಡೆಸಿದ್ದರು.
ಪ್ರಧಾನಿ ಮೋದಿ ಅವರು ರಸ್ತೆ ಮಾರ್ಗವಾಗಿ ತಿರುಮಲಾಗೆ ಆಗಮಿಸಿದಾಗ, ದಾರಿಯಲ್ಲಿ ವಿವಿಧೆಡೆ ಜನರು ಮೋದಿ-ಮೋದಿ ಎಂದು ಘೋಷಣೆಗಳನ್ನು ಕೂಗಿದರು ಮತ್ತು ಪುಷ್ಪವೃಷ್ಟಿ ಮಾಡುವ ಮೂಲಕ ಅವರನ್ನು ಸ್ವಾಗತಿಸಿದರು. ರಸ್ತೆಬದಿಯಲ್ಲಿ ನಿಂತಿದ್ದ ಜನರೆಡೆಗೆ ಕೈ ಬೀಸುವ ಮೂಲಕ ಜನರಿಗೆ ಮೋದಿ ಸ್ಪಂದಿಸಿದರು.
ಕಾಂಗ್ರೆಸ್ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಮಾಜಿ ಸಚಿವ ಶ್ರೀರಾಮುಲು
ತೆಲಂಗಾಣದಲ್ಲಿ ಮೋದಿ ಪ್ರಚಾರ: ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು ಆಡಿಳಿತಾರೂಢ ಭಾರತ್ ರಾಷ್ಟ್ರ ಸಮಿತಿ (BRS) 36-39 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ 69 ರಿಂದ 72 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಎಐಎಂಐಎಂ 5-6 ಸ್ಥಾನಗಳಲ್ಲಿ, ಬಿಜೆಪಿ 2-3 ಮತ್ತು ಇತರೆ 0-1 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಸಮೀಕ್ಷೆಗಳ ಫಲಿತಾಂಶವನ್ನು ನಿಜವಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ