ಎಲೆಕ್ಟ್ರಿಕ್‌, ಹೈಡ್ರೋಜನ್‌ ವಾಹನಗಳ ಮೂಲಕ ಇಂಧನದ ಬೇಡಿಕೆ ತಗ್ಗುತ್ತದೆ: ಬೆಂಗಳೂರಲ್ಲಿ ಮೋದಿ ಮಾತು

By BK AshwinFirst Published Feb 6, 2023, 12:50 PM IST
Highlights

21ನೇ ಶತಮಾನದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಬೆಂಗಳೂರು (ಫೆಬ್ರವರಿ 6, 2023): ಬೆಂಗಳೂರಿನ BIECಯಲ್ಲಿ ಇಂಧನ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ ಇಂಧನ ಕ್ಷೇತ್ರದಲ್ಲಿ ಸಂಶೋಧನೆ ಹೆಚ್ಚಳ, ಗ್ರಾಮೀಣ ಪ್ರದೇಶದಲ್ಲಿಇಂಟರ್ನೆಟ್‌ ಸಂಪರ್ಕ ಹೆಚ್ಚಳವಾಗುತ್ತಿರುವ ಬಗ್ಗೆ ಮಾತನಾಡಿದರು. ಅಲ್ಲದೆ, ಇಂಧನ ಕ್ಷೇತ್ರದ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಎಲೆಕ್ಟ್ರಿಕ್‌ ಹಾಗೂ ಹೈಡ್ರೋಜನ್‌ ವಾಹನಗಳ ಮೂಲಕ ಈ ಬೇಡಿಕೆ ತಗ್ಗಿಸುತ್ತದೆ ಎಂದು ಹೇಳಿದರು. ನ್ಯಾಷನಲ್‌ ಗ್ರೀನ್‌ ಹೈಡ್ರೋಜನ್‌ ಮಿಷನ್‌ ಬಗ್ಗೆಯೂ ಮೋದಿ ಮಾತನಾಡಿದ್ದಾರೆ. ಶೇ. 20 ಎಥೆನಾಲ್‌ ಮಿಶ್ರಿತ ಘಟಕಕ್ಕೆ ಸಹ ಚಾಲನೆ ನೀಡಲಾಯ್ತು.

ಆರಂಭದಲ್ಲಿ ಕರ್ನಾಟಕದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್‌ ಸಿಂಗ್ ಪುರಿ, ವೇದಿಕೆಯಲ್ಲಿ ಉಪಸ್ಥಿತಿ ಇರುವವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿರುವವರೆಲ್ಲರಿಗೂ ಮೋದಿ ಧನ್ಯವಾದ ಹೇಳಿದ್ದಾರೆ. ಬಳಿಕ, ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಮೋದಿ ಮಾತನಾಡಿದ್ದು, ಭೂಕಂಪದಲ್ಲಿ ಮಡಿದವರಿಗೆ ಸಂತಾಪ ಹೇಳಿದ್ದು, ಭೂಕಂಪ ಪರಿಹಾರಕ್ಕೆ ಭಾರತ ಸಿದ್ಧವಾಗಿದೆ ಎಂದೂ ಮೋದಿ ಹೇಳಿದರು.

ಇದನ್ನು ಓದಿ: ತುಮಕೂರು: ಫೆ.6 ಕ್ಕೆ ಪ್ರಧಾ​ನಿ​ಯಿಂದ ಹೆಲಿ​ಕಾ​ಪ್ಟರ್‌ ತಯಾರಿಕಾ ಉದ್ಘಾ​ಟ​ನೆ

ನಂತರ, ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ತಂತ್ರಜ್ಗಾನ, ಕೌಶಲ್ಯ, ಸಂಶೋಧನೆ ತುಂಬಿ ತುಳುಕುತ್ತಿದೆ ಎಂದು ರಾಜ್ಯ ರಾಜಧಾನಿಯನ್ನು ಶ್ಲಾಘಿಸಿದ್ದಾರೆ. ಇಂದು ಬೆಂಗಳೂರಲ್ಲಿ ಭಾರತದ ಜಿ - 20 ಅಧ್ಯಕ್ಷತೆಯ ಅವಧಿಯಲ್ಲಿ ಮೊದಲ ದೊಡ್ಡ ಇಂಧನ ಸಂಬಂಧಿ ಕಾರ್ಯಕ್ರಮ ನಡೆಯುತ್ತಿದೆ ಎಂದೂ ಪ್ರಧಾನಿ ಹೇಳದರು.

ಬಳಿಕ, 21ನೇ ಶತಮಾನದ ಪ್ರಪಂಚದ ಭವಿಷ್ಯ ನಿರ್ಧರಿಸುವಲ್ಲಿ ಇಂಧನ ಕ್ಷೇತ್ರದ ಪಾತ್ರ ದೊಡ್ಡದು. ಇಂಧನದ ಹೊಸ ಮೂಲಗಳ ಸಂಶೋಧನೆಯಲ್ಲಿ ಭಾರತ ಜಗತ್ತಿನ ನಾಯಕನಾಗಿದೆ. ಐಎಂಎಫ್‌ ಪ್ರಕಾರ ಭಾರತ ಇತರೆ ದೇಶಗಳಿಗಿಂತ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಕೊರೊನಾ ಹಾಗೂ ರಷ್ಯಾ - ಉಕ್ರೇನ್‌ ಯುದ್ಧದ ನಡುವೆಯೂ ವೇಗವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಮೋದಿ ದೇಶದ ಆರ್ಥಿಕತೆ ಹೆಚ್ಚುತ್ತಿರುವ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮೋದಿ, ಶಾ ಈ ತಿಂಗಳಿನಲ್ಲಿ ಸತತ ಭೇಟಿ..!

ಅಲ್ಲದೆ, ಕೋಟ್ಯಂತರ ಜನರ ಜೀವನ ಮಟ್ಟದಲ್ಲಿ ಬದಲಾವಣೆಯಾಗುತ್ತಿದೆ, ಕೋಟ್ಯಂತರ ಜನರು ಬಡತನ ರೇಖೆಯಿಂದ, ಮಧ್ಯಮ ವರ್ಗದವರಾಗುತ್ತಿದ್ದಾರೆ. ದೇಶದ ಹಳ್ಳಿ ಹಳ್ಳಿಗಳಲ್ಲಿ 6 ಲಕ್ಷ ಕಿ.ಮೀ. ಆಪ್ಟಿಕಲ್‌ ಫೈಬರ್‌ ಸಂಪರ್ಕ ಮಾಡಲಾಗಿದೆ. ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆದವರ ಸಂಖ್ಯೆ 9 ಪಟ್ಟು ಹೆಚ್ಚಾಗಿದೆ, ನಗರಕ್ಕಿಂತ ಗ್ರಾಮೀಣ ಭಾಗದಲ್ಲೇ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ಎಂದೂ ಪ್ರಧಾನಿ ಹೇಳಿದ್ದಾರೆ.

ಭಾರತೀಯರ ಆಶೋತ್ತರ ಈಡೇರಿಸಲು ಇಂಧನ ಬಹುದೊಡ್ಡ ವಿಷಯ, ಭಾರತದಲ್ಲಿ ಇಂಧನದ ಅವಶ್ಯಕತೆ, ಬೇಡಿಕೆ ಹೆಚ್ಚುತ್ತಿದೆ,  ಬರುವ ವರ್ಷಗಳಲ್ಲಿಅನೇಕ ಹೊಸ ನಗರಗಳು ಎದ್ದು ನಿಲ್ಲಲಿದೆ. ಜಗತ್ತಿನ ಇತರ ದೇಶಗಳಿಗಿಂತ ಭಾರತದಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ. 

ಇದನ್ನೂ ಓದಿ: ರೈತರು ಸಂಕಷ್ಟದಲ್ಲಿದ್ದಾಗ ರಾಜ್ಯಕ್ಕೆ ಮೋದಿ ಬರಲಿಲ್ಲ; ಈಗ ಬರ್ತಿರೋದು ಯಾಕೆ? ಎಚ್‌ಡಿಕೆ

ಇನ್ನು, ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ 4 ಆದ್ಯತೆಗಳಿವೆ. ದೇಶೀಯವಾಗಿ ಸಂಶೋಧನೆ, ಉತ್ಪಾದನೆ ಹೆಚ್ಚಸುವುದು, ಸರಬರಾಜನ್ನು ಬೇರೆ ಬೇರೆ ಹಂತದಲ್ಲಿ ಬಳಸುವುದು, ಪರ್ಯಾಯ ಇಂಧನ ಮೂಲಗಳನ್ನು ಬೆಳೆಸುವುದು, ಎಲೆಕ್ಟ್ರಿಕ್‌ ವಾಹನ, ಹೈಡ್ರೋಜನ್‌ ಮೂಲಕ ಒತ್ತಡ ತಗ್ಗಿಸುವುದು, 
ದೇಶೀಯ ತಂತ್ರಜ್ಞಾನ ಬಳಸಿ ಉನ್ನತೀಕರಣಗೊಳಿಸಲಾಗುತ್ತಿದೆ ಎಂದೂ ಪ್ರಧಾನಿ ಮೋದಿ ಹೇಳಿದರು.

ಹಾಗೆ, 2014 ರಲ್ಲಿ ಗ್ಯಾಸ್‌ ಪೈಪ್‌ಲೈನ್‌ 14 ಸಾವಿರ ಕಿ.ಮೀ. ನಷ್ಟಿತ್ತು. ಈಗ ಅದು 22 ಸಾವಿರ ಕಿ.ಮೀ.ಗೆ  ಹೆಚ್ಚಾಗಿದೆ, ಅಲ್ಲದೆ ಶೀಘ್ರದಲ್ಲಿ 35 ಸಾವಿರ ಕಿ.ಮೀ ಗೆ ಹೆಚ್ಚಾಗಲಿದೆ. ಜತೆಗೆ, ದೇಶೀಯವಾಗಿ ಇಂಧನ ಮೂಲಗಳ ಸಂಶೋಧನೆ ಹೆಚ್ಚಳವಾಗುತ್ತಿದೆ ಎಂದೂ ಮೋದಿ ಹೇಳಿದರು.

ಮಾಲಿನ್ಯ ರಹಿತ ಇಂಧನ ಉತ್ಪಾದಿಸೋ ರಾಜ್ಯ ನಮ್ಮದು: ಬೊಮ್ಮಾಯಿ
ಈ ಮಧ್ಯೆ, ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಇಂಧನ ಸಪ್ತಾಹ ಆಚರಿಸಲಾಗುತ್ತಿರುವುದಕ್ಕೆ ಧನ್ಯವಾದ ಹೇಳಿದರು. ಅಲ್ಲದೆ, ಕೊರೊನಾ ನಂತರ ಜೀವನದ ವ್ಯಾಖ್ಯಾನ ಬದಲಾಗಿದೆ, ಮೋದಿ ಸಿಎಂ ಆಗಿದ್ದಾಗ ವಿದ್ಯುತ್ ಉತ್ಪಾದನೆ, ಸರಬರಾಜಿನಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿತ್ತು. ಆ ಅನುಭವದಿಂದ ಇಂಧನ ಕ್ಷೇತ್ರದ ದಿಕ್ಕು ಬದಲಾಗಿದೆ. ಮಾಲಿನ್ಯ ರಹಿತ ಇಂಧನ ಉತ್ಪಾದಿಸೋ ರಾಜ್ಯ ನಮ್ಮದು, ಹೈಡ್ರೋಜನ್‌ ವಿದ್ಯುತ್ ಉತ್ಪಾದನೆಗೆ 3 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದೂ ಇಂಧನ ಸಪ್ತಾಹದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಅಲ್ಲದೆ, ಕರ್ನಾಟಕ ವಿದ್ಯುತ್ ಉತ್ಪಾದಕ ವಾಹನಗಳ ಅತಿದೊಡ್ಡ ರಾಜ್ಯವಾಗಲಿದೆ, ರಾಜ್ಯದಲ್ಲೇ ಹೆಚ್ಚು ಸಂಶೋಧನೆಯಾಗುತ್ತಿದೆ. ಕರ್ನಾಟಕದಲ್ಲೇ ಅತಿ ಹೆಚ್ಚು ಎಥೆನಾಲ್‌ ಉತ್ಪಾದನೆಯಾಗುತ್ತಿದ್ದು, 9 ಉದ್ದಿಮೆಗಳು ಕರ್ನಾಟಕದಲ್ಲಿ ಹೂಡಿಕೆಗೆ ಮುಂದೆ ಬಂದಿವೆ ಎಂದು ಹೇಳಿದರು. ಈ ವೇಳೆ ನಿರಾಣಿ ಉದ್ದಿಮೆಗಳನ್ನು ಸಿಎಂ ಬೊಮ್ಮಾಯಿ ಶ್ಲಾಘಿಸಿದ್ದಾರೆ. 
 
ಪ್ರಧಾನಿ ಮೋದಿಗೆ ಕಾರ್ಯಕ್ರಮದಲ್ಲಿ ಮರುಬಳಕೆ ವಸ್ತುಗಳಿಂದ ತಯಾರಿಸಿರೋ ಕೋಟ್‌ ಅನ್ನು ಉಡುಗೊರೆ ನೀಡಲಾಗಿದೆ. 

click me!