ಮತ್ತೆ ಕೃಷಿ ಕಾಯ್ದೆಗಳ ಸಮರ್ಥಿಸಿದ ಮೋದಿ!

By Suvarna NewsFirst Published Oct 3, 2021, 9:05 AM IST
Highlights

* ವಿರೋಧ ಪಕ್ಷಗಳದ್ದು ಬೌದ್ಧಿಕ ಅಪ್ರಾಮಾಣಿಕತೆ

* ಕಠಿಣ ನಿರ್ಧಾರ ಕೈಗೊಳ್ಳಲೇಬೇಕು: ಕೃಷಿ ಕಾಯ್ದೆಗೆ ಮೋದಿ ಸಮರ್ಥನೆ

* ಹಿಂದೆ ಮಸೂದೆ ಬೆಂಬಲಿಸಿ ಈಗ ವಿರೋಧ ಅಸಹ್ಯ

ನವದೆಹಲಿ(ಅ.03): ಮೂರು ಕೃಷಿ ಕಾಯ್ದೆಗಳನ್ನು(Farm Law) ವಾಪಸ್‌ ಪಡೆಯಬೇಕು ಎಂದು ದೆಹಲಿಯಲ್ಲಿ ರೈತರು 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವಾಗಲೇ, ಆ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮತ್ತೊಮ್ಮೆ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನಾಗರಿಕರ ಒಳಿತಿನ ದೃಷ್ಟಿಯಿಂದ ಕಠಿಣ ಹಾಗೂ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ, ಕೃಷಿ ಕಾಯ್ದೆ(farm Law) ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಪ್ರತಿಪಕ್ಷಗಳ ನಡೆ ಬೌದ್ಧಿಕ ಅಪ್ರಾಮಾಣಿಕತೆ ಹಾಗೂ ರಾಜಕೀಯ ಕಪಟತನ ಎಂದು ಮೂದಲಿಸಿದ್ದಾರೆ. ಈಗ ವಿರೋಧಿಸುತ್ತಿರುವ ಕೆಲ ಪಕ್ಷಗಳು ಕೇಂದ್ರ ಸರ್ಕಾರ ಈಗ ಜಾರಿಗೆ ತಂದಿರುವಂತಹ ಕಾಯ್ದೆಯನ್ನೇ ಅನುಷ್ಠಾನಗೊಳಿಸುವ ಕುರಿತು ಭರವಸೆಯನ್ನು ನೀಡಿದ್ದವು. ಇದೀಗ ಯು-ಟರ್ನ್‌ ಒಡೆದು, ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಪಸರಿಸುತ್ತಿವೆ ಎಂದು ‘ಓಪನ್‌’ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ(Interview) ತಿಳಿಸಿದ್ದಾರೆ.

ಭಾರತೀಯರಿಗೆ ಏನೆಲ್ಲಾ ಸೌಲಭ್ಯ ದಕ್ಕಬೇಕೋ, ದಶಕಗಳ ಹಿಂದೆಯೇ ಸಿಗಬೇಕಿತ್ತೋ ಅವಿನ್ನೂ ಲಭಿಸಿಲ್ಲ. ಜನರು ಇನ್ನಷ್ಟುಕಾಯುವಂತೆ ನಾವು ಮಾಡಬಾರದು. ಹೀಗಾಗಿ ದೊಡ್ಡ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅಗತ್ಯ ಬಿದ್ದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಕೃಷಿ ಕಾಯ್ದೆ ಹಿಂಪಡೆಯುತ್ತೀರಾ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ.

ಪ್ರತಿಭಟನಾ ನಿರತ ರೈತರ ಜತೆ ಮಾತುಕತೆಗೆ ಸಿದ್ಧ. ಯಾವ ವಿಷಯದಲ್ಲಿ ಸಹಮತ ಇಲ್ಲವೋ ಆ ಬಗ್ಗೆ ಚರ್ಚೆ ಮಾಡಲು ಸಿದ್ಧ ಎಂದು ಹೇಳುತ್ತಲೇ ಬಂದಿದ್ದೇವೆ. ಆದರೆ ಈವರೆಗೆ ಯಾರೊಬ್ಬರೂ ತಮಗೆ ಇಂತಹ ವಿಷಯದ ಬಗ್ಗೆ ಒಪ್ಪಿಗೆ ಇಲ್ಲ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.

click me!