
ನವದೆಹಲಿ (ಸೆಪ್ಟೆಂಬರ್ 24, 2023): ಪ್ರಧಾನಿ ಮೋದಿ ಇಂದು 9 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಈ ವಂದೇ ಭಾರತ್ ರೈಲುಗಳು ಚಲಿಸಲಿವೆ. ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ 9 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಈ ವಂದೇ ಭಾರತ್ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತ್ಯಂತ ವೇಗದ ರೈಲು ಆಗಿರುತ್ತವೆ ಮತ್ತು ಪ್ರಯಾಣಿಕರ ಗಣನೀಯ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ.
ಪ್ರಧಾನಿ ಮೋದಿ ಇಂದು ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ 11 ರಾಜ್ಯಗಳಲ್ಲಿ ಸಂಚರಿಸುವ 9 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಈ ಪೈಕಿ ರಾಜ್ಯದಲ್ಲಿ ಸಂಚರಿಸುವ ಬೆಂಗಳೂರು - ಹೈದರಾಬಾದ್ ರೈಲು ಸಹ ಒಂದು. ಈ ಒಂಬತ್ತು ರೈಲುಗಳು ಹನ್ನೊಂದು ರಾಜ್ಯಗಳಾದ ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ಗಳಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತವೆ. ಅಲ್ಲದೆ, ಈ ರೈಲುಗಳಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವೂ ಆಗುತ್ತದೆ.
ಇದನ್ನು ಓದಿ: ಈ ರಾಜ್ಯದ ಪಾಲಾಯ್ತು ದೇಶದ ಮೊದಲ ಕೇಸರಿ ವಂದೇ ಭಾರತ್ ರೈಲು: ನಾಳೆ ಮೋದಿಯಿಂದ ಲೋಕಾರ್ಪಣೆ
ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಿಂದ ಈ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುವ ಇತರೆ ರೈಲುಗಳಿಗಿಂತ 2.5 ಗಂಟೆಗಳಿಗಿಂತ ಹೆಚ್ಚು ಸಮಯ ಉಳಿತಾಯ ಆಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ರೂರ್ಕೆಲಾ- ಭುವನೇಶ್ವರ್ - ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಂದ ಪ್ರಯಾಣಿಕರಿಗೆ ಸುಮಾರು 3 ಗಂಟೆ ಸಮಯ ಉಳಿತಾಯ ಆಗುತ್ತದೆ ಎಂದೂ ವರದಿಯಾಗಿದೆ. ಹಾಗೂ, ತಮಿಳುನಾಡಿನ ತಿರುನಲ್ವೇಲಿ - ಮಧುರೈ - ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಿಂದಲೂ 2 ಗಂಟೆಗಳಿಗೂ ಹೆಚ್ಚು ಸಮಯ ಉಳಿತಾಯ ಆಗುತ್ತದೆ. ಹಾಗೂ, ರಾಂಚಿ - ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್, ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಜಾಮ್ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ಸುಮಾರು 1 ಗಂಟೆ; ಮತ್ತು ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಿಂದ ಪ್ರಯಾಣಿಕರಿಗೆ ಸುಮಾರು ಅರ್ಧ ಗಂಟೆ ಸಮಯ ಉಳಿತಾಯ ಆಗುತ್ತದೆ ಎಂದ ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಕೇರಳಕ್ಕೆ ಮೊದಲ ಕೇಸರಿ ವಂದೇ ಭಾರತ್ ರೈಲು
ಕೇರಳದ ಕಾಸರಗೋಡು - ತಿರುವನಂತಪುರಂ ಮಾರ್ಗದಲ್ಲಿ ಹೊಸ ಕೇಸರಿ ವಂದೇ ಭಾರತ್ ರೈಲು ಚಲಿಸಲಿದ್ದು, ವಂದೇ ಭಾರತ್ ದಕ್ಷಿಣ ರೈಲ್ವೆ ವಲಯದ ಅಡಿಯಲ್ಲಿ ಈ ಮಾರ್ಗದಲ್ಲಿ ಎರಡನೇ ರೈಲು ಆಗಿರುತ್ತದೆ. ಆದರೆ, ಕೊಟ್ಟಾಯಂ ಬದಲಿಗೆ ಅದು ಆಲಪ್ಪುಝ ಮೂಲಕ ಹೋಗುತ್ತದೆ. ಇನ್ನು, ಕಾಸರಗೋಡು-ತಿರುವನಂತಪುರಂ ಮಾರ್ಗದಲ್ಲಿ ಎರಡನೇ ವಂದೇ ಭಾರತ್ ಅನ್ನು ಪರಿಚಯಿಸಲಾಗಿದೆ . ಏಕೆಂದರೆ ಇದು ಪ್ರಾರಂಭವಾದಾಗಿನಿಂದ 170% ಕ್ಕಿಂತ ಹೆಚ್ಚಿನ ಮೊದಲ ರೈಲಿನಲ್ಲಿ ಹೆಚ್ಚಿನ ಆಕ್ಯುಪೆನ್ಸಿಯನ್ನು ಹೊಂದಿದೆ. ವಂದೇ ಭಾರತ್ ಎಕ್ಸ್ಪ್ರೆಸ್, 160 kmph ಸಾಮರ್ಥ್ಯವಿರುವ ಸೆಮಿ ಹೈ - ಸ್ಪೀಡ್ ರೈಲಾಗಿದ್ದು, ಹವಾನಿಯಂತ್ರಿತ ಚೇರ್ ಕಾರ್ ರೈಲು ಸೇವೆಯಾಗಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಇನ್ಮುಂದೆ ನಾಲ್ಕೇ ಗಂಟೆಯಲ್ಲಿ ರೈಲಿನಲ್ಲಿ ಬೆಂಗಳೂರು - ಚೆನ್ನೈ ಆರಾಮವಾಗಿ ಪ್ರಯಾಣ ಮಾಡಿ!
ಈ ಮಧ್ಯೆ, ಭಾನುವಾರ 9 ವಂದೇ ಭಾರತ್ ರೈಲುಗಳನ್ನು ಮೋದಿ ಪ್ರಾರಂಭಿಸುತ್ತಿದ್ದು, ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 68 ಕ್ಕೆ ಏರಲಿದೆ.
ಇದನ್ನೂ ಓದಿ: ಟಿಕೆಟ್ ಇಲ್ದೆ ವಂದೇ ಭಾರತ್ ರೈಲು ಹತ್ತಿದ: ಟಾಯ್ಲೆಟ್ ಒಳಗೆ ಬೀಡಿ ಸೇದಿ ತಗ್ಲಾಕ್ಕೊಂಡ ಭೂಪ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ