
-ನವದೆಹಲಿ: ‘2014ರಿಂದ ಎನ್ಡಿಎ ಸರ್ಕಾರದ 12 ವರ್ಷಗಳ ಆಡಳಿತದ ಮಹತ್ತರ ಯಶಸ್ಸೆಂದರೆ, ಅದು ದೇಶವನ್ನು ಕಾಂಗ್ರೆಸ್ನಿಂದ ಮುಕ್ತಗೊಳಿಸಿದ್ದು. ಕಾಂಗ್ರೆಸ್ನ ಸಂಪೂರ್ಣ ಆಡಳಿತ ವೈಫಲ್ಯವನ್ನು ‘ಕಾಂಗ್ರೆಸ್ ಬೆಳವಣಿಗೆ ದರ’ ಎಂದು ಕರೆಯಬೇಕಾಗಿತ್ತು. ಆದರೆ ಅವರ ಆಳ್ವಿಕೆಯಲ್ಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಕುತಂತ್ರದಿಂದ ‘ಹಿಂದೂ ಬೆಳವಣಿಗೆ ದರ’ ಎಂದು ಕರೆಯಲಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶ ಕಂಡ ಸುದೀರ್ಘಾವಧಿ ಪ್ರಧಾನಿ ಎಂಬ ಮೈಲುಗಲ್ಲು ಸ್ಥಾಪಿಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಎನ್ಡಿಎ ಸಮಾವೇಶದಲ್ಲಿ 37 ನಿಮಿಷ ಮಾತನಾಡಿದ ಅವರು, ‘2014ರಿಂದ 12 ವರ್ಷಗಳ ಎನ್ಡಿಎ ಆಡಳಿತದ ದೊಡ್ಡ ಯಶಸ್ಸೆಂದರೆ, ಅದು ದೇಶವನ್ನು ಕಾಂಗ್ರೆಸ್ನ ದುಷ್ಟ ಬಲೆಯಿಂದ ಮುಕ್ತಗೊಳಿಸಿತು ಮತ್ತು ದೇಶದ ಜನರು ರಾಜಕೀಯ ಸ್ಥಿರತೆ ಹಾಗೂ ನಿರ್ಣಾಯಕ ಆಡಳಿತದ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿತು’ ಎಂದು ಶ್ಲಾಘಿಸಿದರು.
‘ಕಾಂಗ್ರೆಸ್ ಆಳ್ವಿಕೆಯಲ್ಲಿನ ನಿಧಾನಗತಿಯ ಬೆಳವಣಿಗೆಗೆ ‘ಹಿಂದೂ ಬೆಳವಣಿಗೆಯ ದರ’ ಎಂದು ಹಣೆಪಟ್ಟಿ ಕಟ್ಟಲಾಯಿತು. ಇದರ ಶೈಲಿ, ಜವಾಬ್ದಾರಿ ಮತ್ತು ವೈಫಲ್ಯ ಎಲ್ಲವೂ ಕಾಂಗ್ರೆಸ್ನದ್ದಾಗಿದ್ದರೂ, ಕಳಂಕವನ್ನು ದೇಶದ ವಿಶಾಲ ಹಿಂದೂ ಸಮಾಜದ ಮೇಲೆ ಹೊರಿಸಲಾಯಿತು. ಇದನ್ನು ಕಾಂಗ್ರೆಸ್ ಬೆಳವಣಿಗೆ ದರ ಎಂದು ಹೆಸರಿಸಬೇಕಿತ್ತು. ಕಾಂಗ್ರೆಸ್ ಬೆಳವಣಿಗೆ ದರ ಎಂದರೆ ಆಡಳಿತ, ನೀತಿ, ಉದ್ದೇಶ ಮತ್ತು ನಿರ್ಣಾಯಕತೆಯ ಸಂಪೂರ್ಣ ಅನುಪಸ್ಥಿತಿ’ ಎಂದು ಕಿಡಿ ಕಾರಿದರು.
‘ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ಎನ್ಡಿಎ ಸರ್ಕಾರ ಮೊದಲು ಅಧಿಕಾರಕ್ಕೆ ಬಂತು. ಆ ನಂತರವೇ ದೇಶದ ಅಭಿವೃದ್ಧಿ ವೇಗ ಪಡೆಯಿತು. ದುರದೃಷ್ಟವಶಾತ್, 2004ರಲ್ಲಿ ದೇಶವು ಮತ್ತೊಮ್ಮೆ ಅಸ್ಥಿರತೆಯ ಚಕ್ರದಲ್ಲಿ ಸಿಲುಕಿತು. ದೇಶವನ್ನು ಕಾಂಗ್ರೆಸ್ ಬಹುಕೋಟಿ ರು. ಹಗರಣಗಳಿಗೆ ಎಳೆದೊಯ್ದಿತು. 2014ರಲ್ಲಿ ಎನ್ಡಿಎ ಸರ್ಕಾರ ರಚನೆಯಾದಾಗ ದೇಶದ ಭವಿಷ್ಯ ಮತ್ತೆ ಬದಲಾಯಿತು. ಉದ್ದೇಶ, ನೀತಿ ಮತ್ತು ನಿರ್ಧಾರ ಕೈಗೊಳ್ಳುವಿಕೆ ಹೊಂದಿಕೆಯಾಗಿ, ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ದೇಶ ಅಭಿವೃದ್ಧಿಯ ವೇಗವನ್ನು ಕಂಡಿತು’ ಎಂದು ಬಣ್ಣಿಸಿದರು.
‘2014ರಲ್ಲಿ 74 ಏರ್ಪೋರ್ಟ್ಗಳಿಂದ 2026ರ ವೇಳೆಗೆ 160ಕ್ಕೂ ಹೆಚ್ಚು ಏರ್ಪೋರ್ಟ್ಗಳಿಗೆ 2014ರಲ್ಲಿ 1,000 ಕಿ.ಮೀ. ಎಕ್ಸ್ಪ್ರೆಸ್ವೇಗಳಿಂದ 2026ರ ವೇಳೆಗೆ 6,700 ಕಿ.ಮೀ.ಗಳಿಗೆ 2014ರಲ್ಲಿ ಕೇವಲ 5 ನಗರಗಳಲ್ಲಿ ಮೆಟ್ರೋ ಸೇವೆಗಳಿಂದ 2026ರ ವೇಳೆಗೆ 20ಕ್ಕೂ ಹೆಚ್ಚು ನಗರಗಳಿಗೆ 2014ರಲ್ಲಿ ರಕ್ಷಣಾ ರಫ್ತಿನಲ್ಲಿ 700 ಕೋಟಿ ರು.ಗಳಿಂದ 2026ರ ವೇಳೆಗೆ 23,000 ಕೋಟಿ ರು.ಗಳಿಗೆ ದೇಶವು ದೀರ್ಘ ಪ್ರಯಾಣವನ್ನು ಕ್ರಮಿಸಿದೆ. 2014ಕ್ಕಿಂತ ಮೊದಲು, ಹಲವಾರು ದಶಕಗಳು ಅಸ್ಥಿರತೆ ಮತ್ತು ದಂಗೆಗಳಿಂದ ತುಂಬಿದ್ದವು. ಆದರೆ ಈಗ ಜನ ಸ್ಥಿರ ಸರ್ಕಾರದ ಕೆಲಸವನ್ನು ವೀಕ್ಷಿಸುತ್ತಿದ್ದಾರೆ. ಅದರ ನಿರ್ಣಾಯಕತೆಯನ್ನು ಮೆಚ್ಚುತ್ತಿದ್ದಾರೆ’ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ