ಮೋದಿ ಟೀಂ ಇಂಡಿಯಾ ಮಂತ್ರ: ದಿಲ್ಲಿಯಲ್ಲಿ ನೀತಿ ಆಯೋಗದ 10ನೇ ಸಭೆ, ಆಪರೇಷನ್‌ ಸಿಂದೂರಕ್ಕೆ ಮೆಚ್ಚುಗೆ

Kannadaprabha News   | Kannada Prabha
Published : May 25, 2025, 06:43 AM IST
PM Modi chairs 10th NITI Aayog Governing Council Meeting on 'Viksit Rajya for Viksit Bharat@2047'

ಸಾರಾಂಶ

ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಟೀಂ ಇಂಡಿಯಾ ರೀತಿ ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟಕರವಲ್ಲ.

ನವದೆಹಲಿ (ಮೇ.25): ‘ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಟೀಂ ಇಂಡಿಯಾ ರೀತಿ ಒಂದಾಗಿ ಕೆಲಸ ಮಾಡಿದರೆ ಯಾವುದೇ ಗುರಿ ತಲುಪುವುದು ಕಷ್ಟಕರವಲ್ಲ. ರಾಜ್ಯಗಳು ‘1 ರಾಜ್ಯ, 1 ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳ’ ಪರಿಕಲ್ಪನೆಯ ಅಡಿ ತಮ್ಮ ರಾಜ್ಯದ ಕನಿಷ್ಠ ಒಂದು ಪ್ರವಾಸಿ ಸ್ಥಳವನ್ನಾದರೂ ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ರಾಜ್ಯಗಳು ವಿಕಸಿತವಾದಾಗ ದೇಶ ವಿಕಸಿತವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯಲ್ಲಿ ಶನಿವಾರ ಮಾತನಾಡಿದರು. ‘2024ರ ವಿಕಸಿತ ಭಾರತಕ್ಕೆ ವಿಕಸಿತ ರಾಜ್ಯ’ ಈ ಬಾರಿಯ ಆಯೋಗದ ಸಭೆಯ ಮುಖ್ಯ ವಿಷಯವಾಗಿತ್ತು.

ರಾಜ್ಯಗಳು ವಿಕಸಿತವಾಗಲಿ: ‘ದೇಶದಲ್ಲಿ ಅಭಿವೃದ್ಧಿಗೆ ವೇಗ ನೀಡುವ ಅಗತ್ಯವಿದ್ದು, ಈಗಾಗಲೇ ನಾವು ಅದರ ವೇಗ ಹೆಚ್ಚಿಸಿದ್ದೇವೆ. ವಿಕಸಿತ ಭಾರತ ಎಲ್ಲಾ ಭಾರತೀಯರ ಗುರಿ. ಪ್ರತಿ ರಾಜ್ಯವೂ ವಿಕಸಿತವಾದಾಗ ಭಾರತದ ವಿಕಾಸ ಸಾಧ್ಯವಾಗುತ್ತದೆ. ವಿಕಸಿತ ಭಾರತವು 140 ಕೋಟಿ ಭಾರತೀಯರ ಆಕಾಂಕ್ಷೆ’ ಎಂದರು. ‘ನಾವು ಪ್ರತಿ ರಾಜ್ಯಗಳು, ಪ್ರತಿ ನಗರಗಳು, ಪ್ರತಿ ಪಾಲಿಕೆಗಳು ಮತ್ತು ಪ್ರತಿ ಗ್ರಾಮಗಳು ವಿಕಸಿತ ಆಗಬೇಕೆಂಬ ಗುರಿ ಇಟ್ಟುಕೊಳ್ಳಬೇಕು. ಈ ಏಕಗುರಿಯೊಂದಿಗೆ ಕೆಲಸ ಮಾಡಿದಾಗ ವಿಕಸಿತ ಭಾರತಕ್ಕಾಗಿ 2047ರ ವರೆಗೆ ಕಾಯಬೇಕಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮಕ್ಕೆ ಒತ್ತು: ‘ಅಂತಾರಾಷ್ಟ್ರೀಯ ಮಾದರಿಯಲ್ಲಿ ಎಲ್ಲಾ ಸೌಲಭ್ಯಗಳು ಮತ್ತು ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಗಳು ಕನಿಷ್ಠ ಒಂದು ಪ್ರವಾಸೋದ್ಯಮ ಸ್ಥಳವನ್ನಾದರೂ ಅಭಿವೃದ್ಧಿಪಡಿಸಬೇಕು. ‘ಒಂದು ರಾಜ್ಯ; ಒಂದು ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳ’ ಪರಿಕಲ್ಪನೆಯು ಆಸುಪಾಸಿನ ನಗರಗಳನ್ನೂ ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಲು ದಾರಿ ಮಾಡಿಕೊಡುತ್ತದೆ. ಭಾರತದಲ್ಲಿ ತೀವ್ರಗತಿಯಲ್ಲಿ ನಗರೀಕರಣವಾಗುತ್ತಿದ್ದು, ನಾವು ಭವಿಷ್ಯದ ನಗರಗಳನ್ನು ನಿರ್ಮಿಸುವ ಕುರಿತು ಕೆಲಸ ಮಾಡಬೇಕು’ ಎಂದು ಹೇಳಿದರು.

ಬೆಳವಣಿಗೆ, ಆವಿಷ್ಕಾರ ಮತ್ತು ಸುಸ್ಥಿರತೆಯು ಭಾರತದ ನಗರಗಳ ಅಭಿವೃದ್ಧಿಯ ಚಾಲಕ ಶಕ್ತಿಯಾಗಬೇಕು ಎಂದ ಅವರು, ಮಹಿಳೆಯರಿಗೆ ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ನೀಡುವ ಕುರಿತೂ ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ಕಾನೂನುಗಳು ಮತ್ತು ನೀತಿಗಳನ್ನು ರೂಪಿಸಬೇಕಿದೆ ಎಂದೂ ತಿಳಿಸಿದರು. ‘ಅಭಿವೃದ್ಧಿ ವಿಚಾರದಲ್ಲಿ ಇರುವ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿ ಅಭಿವೃದ್ಧಿ ತೀವ್ರಗೊಳಿಸಬೇಕು’ ಎಂದು ಸಿಎಂಗಳಿಗೆ ಮೋದಿ ಮನವಿ ಮಾಡಿದರು.

ಆಪರೇಷನ್‌ ಸಿಂದೂರಕ್ಕೆ ಮೆಚ್ಚುಗೆ: ಈ ನಡುವೆ, ಸಭೆಯು ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರಕ್ಕೆ ಮೆಚ್ಚುಗೆ ಸೂಚಿಸಿತು. ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ನಡೆಯುತ್ತಿರುವ ನೀತಿ ಆಯೋಗದ ಮೊದಲ ಸಭೆ ಇದಾಗಿತ್ತು. ನೀತಿ ಆಯೋಗದ ಆಡಳಿತ ಮಂಡಳಿಯು ಎಲ್ಲಾ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್‌ ಗವರ್ನರ್‌ಗಳು ಮತ್ತು ಹಲವು ಕೇಂದ್ರ ಸಚಿವರನ್ನು ಒಳಗೊಂಡಿದೆ. ಪ್ರಧಾನಿ ಇದರ ಅಧ್ಯಕ್ಷರಾಗಿದ್ದಾರೆ. ಸಭೆಯಲ್ಲಿ ಸಿಎಂಗಳಾದ ತಮಿಳುನಾಡಿನ ಎಂ.ಕೆ ಸ್ಟಾಲಿನ್‌, ಆಂಧ್ರದ ಚಂದ್ರಬಾಬು ನಾಯ್ಡ, ಪಂಜಾಬ್‌ನ ಭಗವಂತ ಮಾನ್‌, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್‌, ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ ಮೊದಲಾದವರಿದ್ದರು.

5 ರಾಜ್ಯಗಳು ಗೈರು: ನೀತಿ ಆಯೋಗದ ಸಭೆಗೆ 36 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೈಕಿ 31 ರಾಜ್ಯಗಳ ಸಿಎಂಗಳು/ಪ್ರತಿನಿಧಿಗಳು ಭಾಗಿಯಾಗಿದ್ದರು. ಇದು ಹಿಂದೆಂದಿಗಿಂತ ಉತ್ತಮ ಹಾಜರಾತಿ. ಆದರೆ ಕರ್ನಾಟಕ, ಕೇರಳ, ಪ.ಬಂಗಾಳ, ಬಿಹಾರ ಹಾಗೂ ಪುದುಚೇರಿ ಸಿಎಂಗಳು ಗೈರು ಹಾಜರಾಗಿದ್ದರು ಎಂದು ನೀತಿ ಆಯೋಗ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಹೇಳಿದ್ದಾರೆ.

ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳಿಗೆ 50% ಕೊಡಿ: ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳಿಗೆ ಶೇ.50 ಪಾಲು ಸಿಗಬೇಕು. ಕೇಂದ್ರ ತಡೆಹಿಡಿದಿರುವ 2,200 ಕೋಟಿ ರು. ಶೈಕ್ಷಣಿಕ ನಿಧಿಯನ್ನು ಬಿಡುಗಡೆ ಮಾಡಬೇಕು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ