ಯೋಜನೆ ವಿಳಂಬ ಮಾಡುವುದು ಪಾಪ: ಕಾಂಗ್ರೆಸ್‌ ಬಗ್ಗೆ ಮೋದಿ ಕಿಡಿ

By Kannadaprabha NewsFirst Published Dec 31, 2021, 7:58 AM IST
Highlights

‘ಕಾಂಗ್ರೆಸ್‌ ಸರ್ಕಾರ ಉತ್ತರಾಖಂಡದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ವಿಳಂಬ ಧೋರಣೆ ಅನುಸರಿಸಿದ ಕಾರಣ ಜನರು ಗುಳೆ ಹೋಗುವಂತಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. 

ಡೆಹ್ರಾಡೂನ್‌ (ಡಿ.31): ‘ಕಾಂಗ್ರೆಸ್‌ ಸರ್ಕಾರ (Congress Government) ಉತ್ತರಾಖಂಡದಲ್ಲಿ (Uttarakhand) ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ವಿಳಂಬ ಧೋರಣೆ ಅನುಸರಿಸಿದ ಕಾರಣ ಜನರು ಗುಳೆ ಹೋಗುವಂತಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪಿಸಿದ್ದಾರೆ. ಹಲ್‌ದವಾನಿಯಲ್ಲಿ ಸುಮಾರು 17,500 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳು ಹಾಗೂ 5,747 ಕೋಟಿ ರೂ. ವೆಚ್ಚದ ಬಹು ಉದ್ದೇಶಿತ ಲಖ್ವಾರ್‌ ಯೋಜನೆಗಳಿಗೆ ಗುರುವಾರ ಮೋದಿ ಚಾಲನೆ ನೀಡಿ ಮಾತನಾಡಿದರು.

‘ಲಖ್ವಾರ್‌ ಯೋಜನೆ 1974ರಲ್ಲೇ ಆರಂಭವಾಗಲಿದೆ. ಎಂದುಕೊಂಡಿದ್ದೆವು ಆದರೆ 46 ವರ್ಷಗಳ ಬಳಿಕ ಜಾರಿಯಾಗುತ್ತಿದೆ. ಯೋಜನೆಗಳನ್ನು ವಿಳಂಬ ಮಾಡುವುದು ಪಾಪದ ಕೆಲಸ. ನಮ್ಮ ಹಿಂದಿನ ಸರ್ಕಾರದವರು ಮಾಡಿದ ಆ ಪಾಪವನ್ನು ನೀವು ಮರೆಯುತ್ತೀರಾ?’ ಎಂದು ಪ್ರಶ್ನಿಸಿದರು. ಮೋದಿ ಉತ್ತರಾಖಂಡ್‌ನಲ್ಲಿ 3420 ಕೋಟಿ ಮೌಲ್ಯದ 6 ಯೋಜನೆಗಳು ಹಾಗೂ 14,127 ಕೋಟಿ ರು. ಮೌಲ್ಯದ 17 ಯೋಜನೆಗಳಿಗೆ ಅಡಿಪಾಯ ಹಾಕಿದರು. ಇದರಲ್ಲಿ 500 ಕೋಟಿ ಮೌಲ್ಯದ ಎಐಐಎಂಎಸ್‌ ಸ್ಯಾಟಲೈಟ್‌ ಸೆಂಟರ್‌, ಮೊರಾದಾಬಾದ್‌-ಕಾಶೀಪುರ್‌ ಚತುಷ್ಪಥ ರಸ್ತೆ ಸಹ ಸೇರಿವೆ.

ಮೋದಿ ಮೈತ್ರಿ ನಿರಾಕರಿಸಿದ್ದೆ: ಪವಾರ್ ಹೇಳಿಕೆಯಿಂದ ಭಾರೀ ಸಂಚಲನ!

ಕಾಂಗ್ರೆಸ್‌ಗೆ ಉತ್ತರಾಖಂಡದಲ್ಲಿ ತಲೆಬೇನೆ
ಡೆಹ್ರಾಡೂನ್‌: ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಾಖಂಡದಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಆಘಾತ ಉಂಟಾಗಿದೆ ರಾಜ್ಯದಲ್ಲಿ ಪಕ್ಷದ ಚುನಾವಣಾ ಪ್ರಚಾರದ ನೇತೃತ್ವ ವಹಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌, ಇದೀಗ ಪಕ್ಷ, ಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಕ್ಷದಲ್ಲಿ ನನಗೆ ಸಹಕಾರ ಸಿಗುತ್ತಿಲ್ಲ. ನಿವೃತ್ತಿ ಆಗಬೇಕು ಎನ್ನಿಸುತ್ತಿದೆ. ಮುಂದಿನ ವರ್ಷ ನನ್ನ ಹೊಸ ದಿಕ್ಕು ಕಾಣಿಸಬಹುದು’ ಎನ್ನುವ ಮೂಲಕ ರಾವತ್‌ ಅವರು ಪಕ್ಷ ಬಿಡುವ ಪರೋಕ್ಷ ಮಾತುಗಳನ್ನಾಡಿದ್ದಾರೆ. ಪಕ್ಷದಲ್ಲಿನ ರಾಜ್ಯ ನಾಯಕರ ಜತೆಗಿನ ಕಚ್ಚಾಟದಿಂದ ರಾವತ್‌ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾವತ್‌ ‘ಇದು ವಿಚಿತ್ರವಲ್ಲವೇ? ಚುನಾವಣೆಯೆಂಬ ಸಮುದ್ರವನ್ನು ನಾನು ಈಜ ಬೇಕಾದ ಸಂದರ್ಭದಲ್ಲಿ, ನೆರವಿನ ಹಸ್ತ ಚಾಚಬೇಕಿದ್ದ ಸಂಘಟನೆಯ ವ್ಯವಸ್ಥೆ, ಬಹುತೇಕ ಕಡೆ ಒಂದೋ ಮುಖ ತಿರುಗಿಸಿಕೊಂಡು ಕುಳಿತಿದೇ ಇಲ್ಲವೇ ನಕಾರಾತ್ಮಕ ಕೆಲಸಗಳನ್ನು ಮಾಡುತ್ತಿದೆ. 

PM Modi UAE Visit : ಒಮಿಕ್ರಾನ್ ಆತಂಕದ ಕಾರಣ ಮುಂದೂಡಿಕೆ?

ಆಡಳಿತಾರೂಢ ಪಕ್ಷವು, ಈ ಸಮುದ್ರದಲ್ಲಿ ಹಲವು ಮೊಸಳೆಗಳನ್ನು ಬಿಟ್ಟಿದೆ. ಯಾರ ಆದೇಶದಂತೆ ನಾನು ಈಜಬೇಕಿದೆಯೋ, ಅವರಿಂದ ನೇಮಕಗೊಂಡವರೇ ನನ್ನ ಕೈ ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಹೀಗಾಗಿಯೇ ಹಲವು ಬಾರಿ ನನ್ನ ಅಂತರಾತ್ಮವು ‘ಹರೀಶ್‌ ರಾವತ್‌ ಇನ್ನು ಸಾಕು. ನೀನು ಸಾಕಷ್ಟುಈಜಿದ್ದೀಯಾ. ಇದು ವಿರಾಮದ ಸಮಯ’ ಎಂದು ಹೇಳುತ್ತಲೇ ಇರುತ್ತದೆ. ಹೀಗಾಗಿ ನಾನೀಗ ಗೊಂದಲದಲ್ಲಿದ್ದೇನೆ. ಹೊಸ ವರ್ಷ ನನಗೆ ಹೊಸ ದಿಕ್ಕು ತೋರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದಿದ್ದಾರೆ.

click me!