ಯಾಸ್ ಚಂಡಮಾರುತ: ಜನರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲು ಮೋದಿ ಸೂಚನೆ!

By Suvarna NewsFirst Published May 23, 2021, 3:06 PM IST
Highlights

* ತೌಕ್ಟೆ ಬೆನ್ನಲ್ಲೇ ಕಾಲಿಡಲಿದೆ ಮತ್ತೊಂದು ಚಂಡಮಾರುತ

* ಯಾಸ್‌ ಚಂಡಮಾರುತ ಎದುರಿಸಲು ಹೇಗೆಲ್ಲಾ ತಯಾರಿ? ಪೂರ್ವ ಸಿದ್ಧತೆ ಕುರಿತು ಮೋದಿ ಸಭೆ

* ಜನರ ಸುರಕ್ಷತೆಗೆ ಹೆಚ್ಚು ಮಹತ್ವ ನೀಡುವಂತೆ ಮೋದಿ ಸೂಚನೆ

ನವದೆಹಲಿ(ಮೇ.23): ಮೇ 26ರಂದು ‘ಯಾಸ್‌’ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದು ಹೋಗಲಿದೆ. ಹೀಗಿರುವಾಗ ಈ ರಾಜ್ಯಗಳಲ್ಲಿ ಚಂಡಮಾರುತ ಎದುರಿಸಲು ಕೈಗೊಂಡಿರುವ ಪೂರ್ವ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ಸಭೆ ನಡೆಸಿದ್ದಾರೆ. ಉನ್ನತ ಮಟ್ಟದ ಈ ಸಭೆಯಲ್ಲಿ ಯಾಸ್‌ ಚಂಡಮಾರುತದಿಂದ ನಿರ್ಮಾಣವಾಗಲಿರುವ ಪರಿಸ್ಥಿತಿಯನ್ನು ಎದುರಿಸಲು ಸಂಬಂಧಪಟ್ಟ ಸಚಿವಾಲಯ ಹಾಗೂ ವಿಭಾಗಗಳಿಗೆ ನಿರ್ದೇಶನ ನೀಡಲಾಗಿದೆ. 

ಯಾಸ್‌’ ಚಂಡಮಾರುತ ಹಿನ್ನೆಲೆ: 12 ರೈಲುಗಳು ರದ್ದು

ಜನರನ್ನು ಸುರಕ್ಷಿತ ತಾಣಗಳಿಗೆ ರವಾನಿಸಿ ಹಾವೂ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿ. ಅವರಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು ಎಂದು ಒಪ್ರಣಾ ಮಂತ್ರಿ ನರೇಂದ್ರ ಮೋದಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಮೋದಿ ನೇತೃತ್ವದ ಈ ಸಭೆಯಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ಮಾತ್ರವಲ್ಲದೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರತಿನಿಧಿಗಳು, ಅನೇಕ ಸಚಿವಾಲಯದ ಅಧಿಕಾರಿಗಲೂ ಇದ್ದರು. ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಸಚಿವರೂ ಇದರಲ್ಲಿ ಭಾಗಿಯಾಗಿದ್ದರು.

ಜನರ ಸುರಕ್ಷತೆಗೆ ಒತ್ತು ನೀಡಿ

ಜನರನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ರಾಜ್ಯಗಳ ಜೊತೆ ಕೈಜೋಡಿಸಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುವಂತೆ ಅಧಿಕಾರಿಗಳಿಗೆ ಈ ಸಭೆಯಲ್ಲಿ ಮೋದಿ ಸೂಚಿಸಿದ್ದಾರೆ. ವಿದ್ಯುತ್ ಹಾಗೂ ಸಾರಿಗೆ ವ್ಯತ್ಯಯ ಉಂಟಾಗದಂತೆ ರಾಜ್ಯದ ಜೊತೆ ಯೋಜನೆ ರೂಪಿಸುವಂತೆ ಮೋದಿ ಈ ಸಭೆಯಲ್ಲಿ ಸೂಚಿಸಿದ್ದಾರೆ. ಚಂಡಮಾರುತದಿಂದ ಪ್ರಭಾವಿತಗೊಳ್ಳಲಿರುವ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲೂ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಹೀಗಿರುವಾಗ ಚಂಡಮಾರುತದಿಂದಾಗಿ ವಿದ್ಯುತ್ ಹಾಗೂ ಸಾರಿಗೆ ವ್ಯತ್ಯಯದಿಂದ ರೋಗಿಗಳಿಗೆ ಸಮಸ್ಯೆ ಎದುರಾಗದಂತೆ ಹಾಗೂ ಲಸಿಕೆ ಅಭಿಯಾನ ನಿಲ್ಲದಂತೆ ಗಮನ ಹರಿಸುವ ನಿಟ್ಟಿನಲ್ಲಿ ಮೋದಿ ಈ ಸೂಚನೆ ನೀಡಿದ್ದಾರೆ.

ಇನ್ನು ಚಂಅಪ್ಡಪಮಾರುತದ ವೇಳೆ ಏನು ಮಾಡಬೇಕು ಹಾಗೂ ಯಾವುದನ್ನೆಲ್ಲಾ ಮಾಡಬಾರದು ಎಂಬ ಕುರಿತಾಗಿಯೂ ಜನರಿಗೆ ಮಾಹಿತಿ ನೀಡುವಂತೆ ಈ ಸಭೆಯಲ್ಲಿ ಮೋದಿ ಆದೇಶಿಸಿದ್ದಾರೆ. ಈ ಸಲಹೆಗಳು ಜನರಿಗೆ ಸರಳವಾಗಿ ಅರ್ಥೈಸಲು ಸ್ಥಳೀಯ ಭಾಷೆಯಲ್ಲೇ ಪ್ರಕಟಿಸುವಂತೆಯೂ ಮೋದಿ ಉಲ್ಲೇಖಿಸಿದ್ದಾರೆ. 

ತಯಾರಿಯ ಮಾಹಿತಿ ನಿಡಿದ ಅಧಿಕಾರಿಗಳು

ಇನ್ನು ಅತ್ತ ಅಧಿಕಾರಿಗಳೂ ತಾವು ನಡೆಸಿದ ತಯಾರಿ ಬಗ್ಗೆ ಪಿಎಂ ಮೋದಿಗೆ ವರದಿ ನೀಡಿವೆ. ಈಗಾಗಲೇ ಚಂಡಮಾರುತ ಅಪ್ಪಳಿಸಲಿರುವ ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್‌ನ 46 ತಂಡಗಳನ್ನು ನೇಮಿಸಲಾಗಿದೆ. ಈ ತಂಡಗಳು ಐದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೋಟ್‌, ಮರ ಕಡಿಯುವ, ದೂರ ಸಂಚಾರ ಮೊದಲಾದ ಉಪಕರಣಗಳೊಂದಿಗೆ ಸಜ್ಜಾಗಿವೆ. ಇಷ್ಟೇ ಅಲ್ಲದೇ ಇಂದು ಹದಿಮೂರು ತಂಡಗಳನ್ನು ಏರ್‌ಲಿಫ್ಟ್ ಮಾಡಲಾಗುತ್ತಿದ್ದು, ಹತ್ತು ತಂಡಗಳನ್ನು ಹೆಚ್ಚುವರಿಯಾಗಿ ನೇಮಿಸಲಾಘಿದೆ. ಭಾರತೀಯ ನೌಕಾಸೇನೆಯೂ ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಹಾಗೂ ಹಡಗುಗಳೊಂದಿಗೆ ತಯಾಋಇವೆ ಎಂದಿದ್ದಾರೆ.

ಯಾಸ್‌’ಗೆ ‘ತೀವ್ರ ಸ್ವರೂಪಿ ಚಂಡಮಾರುತ’ ರೂಪ

ಯಾಸ್‌ ಹೆಸರಿನ ಚಂಡಮಾರುತವು ‘ತೀವ್ರ ಸ್ವರೂಪದ ಚಂಡಮಾರುತ’ವಾಗಿ ರೂಪಾಂತರಗೊಂಡು ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿಗೆ ಮೇ 26ರಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ಹೇಳಿದೆ.

ಅಂಡಮಾನ್‌ ಸಮುದ್ರಕ್ಕೆ ಹೊಂದಿಕೊಂಡಂತೆ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಾತಾವರಣ ಈಗ ನಿರ್ಮಾಣವಾಗಿದೆ. ಇದು ಚಂಡಮಾರುತದ ಆರಂಭಿಕ ಸಂಕೇತ. ಇದು ಭಾನುವಾರ ವಾಯುಭಾರ ಕುಸಿತವಾಗಿ ಪರಿವರ್ತನೆಗೊಳ್ಳಲಿದೆ. ಮೇ 24ಕ್ಕೆ ಚಂಡಮಾರುತವಾಗಿ ಮಾರ್ಪಟ್ಟು, ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪದ ಚಂಡಮಾರುತವಾಗಿ ಬಿರುಸುಗೊಳ್ಳಲಿದೆ ಹಾಗೂ 26ರಂದು ಬಂಗಾಳ ಹಾಗೂ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಇಲಾಖೆ ತಿಳಿಸಿದೆ. ಮೇ 24ರಂದು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿರುವ ಗಾಳಿ ಮೇ 26ರ ವೇಳೆಗೆ 90-100 ಕಿ.ಮೀ ವೇಗ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭೀಕರವಾಗಿ ಅಪ್ಪಳಿಸೋ ಸೈಕ್ಲೋನ್‌ ಯಾಸ್ ಹೆಸರಿನ ಅರ್ಥ ಮಾತ್ರ ಸುಂದರ..!

ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾದ 30 ಜಿಲ್ಲೆಗಳ ಪೈಕಿ 14ರಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಮತ್ತೊಂದೆಡೆ ಮುನ್ನೆಚ್ಚರಿಕಾ ಕ್ರಮವಾಗಿ ಎನ್‌ಡಿಆರ್‌ಎಫ್‌ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ತನ್ನ ತುಕಡಿಗಳನ್ನು ನಿಯೋಜಿಸುವ ಕೆಲಸ ಆರಂಭಿಸಿದೆ.

As the low-pressure area formed over east central Bay of Bengal as Cyclonic Storm, ‘Yaas’ during the next 24 hours, Indian Naval Ships and Aircraft Standby for Rescue and Relief Ops. pic.twitter.com/3tOroieypM

— Anish Singh (@anishsingh21)

ಇದೇ ವೇಳೆ ಈ ನಡುವೆ ಚಂಡಮಾರುತದ ಪ್ರಭಾವಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಆರೋಗ್ಯ ಸೌಕರ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ಮತ್ತು ಅಗತ್ಯ ಔಷಧಿಗಳ ಸಂಗ್ರಹ ಮಾಡುವಂತೆ ಆಂಧ್ರ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಅಂಡಮಾನ್‌ ಮತ್ತು ನಿಕೋಬಾರ್‌ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಕಳೆದ ವಾರ ತೌಕ್ಟೆಚಂಡಮಾರುತ ಕೇರಳ, ಕರ್ನಾಟಕ, ಗೋವಾ ಹಾಗೂ ಗುಜರಾತ್‌ ಕರಾವಳಿಗಳನ್ನು ತೀವ್ರವಾಗಿ ಬಾಧಿಸಿತ್ತು.

click me!