ರಾಹುಲ್‌ ಗಾಂಧಿ ರೀತಿ ತತ್‌ಕ್ಷಣದ ಅರ್ನಹತೆ ಚುನಾಯಿತ ಪ್ರತಿನಿಧಿಯ ವಾಕ್‌ ಸ್ವಾತಂತ್ರ್ಯ ಕಸಿಯುತ್ತದೆ: ಸುಪ್ರೀಂಗೆ ಮೊರೆ

By Kannadaprabha NewsFirst Published Mar 26, 2023, 9:30 AM IST
Highlights

ಸಂಸದರ ಸ್ವಯಂಚಾಲಿತ ಅನರ್ಹತೆ ವಿರುದ್ಧ ಕೇರಳದ ಸಾಮಾಜಿಕ ಕಾರ್ಯಕರ್ತೆ ಅಭಾ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಸೆಕ್ಷನ್‌ 8(3) ಅಲ್ಟ್ರಾವೈರಸ್ ಎಂದು ಘೋಷಿಸಬೇಕು. ಸ್ವಯಂಚಾಲಿತ ಅನರ್ಹತೆಯಿಂದ ಸಂಸದರ ಹಕ್ಕಿಗೆ ಭಂಗ ಎಂದು ಮನವಿ ಮಾಡಲಾಗಿದೆ. 

ನವದೆಹಲಿ: ಜನಪ್ರತಿನಿಧಿಗಳು ಶಿಕ್ಷೆಗೆ ಒಳಗಾದ ತಕ್ಷಣವೇ ಅವರನ್ನು ಸ್ವಯಂಚಾಲಿತವಾಗಿ ಶಾಸನ ಸಭೆಯಿಂದ ಅನರ್ಹಗೊಳಿಸುವ ಕಾನೂನಿನಲ್ಲಿನ ಅಂಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆ ಆಗಿದೆ. ಕೇರಳದ ಮಲಪ್ಪುರಂನ ಸಾಮಾಜಿಕ ಕಾರ್ಯಕರ್ತೆ ಅಭಾ ಮುರಳೀಧರನ್‌ ಎಂಬುವರ ಪರವಾಗಿ ವಕೀಲ ದೀಪಕ್‌ ಪ್ರಕಾಶ್‌ ಅವರು ಅರ್ಜಿ ಸಲ್ಲಿಸಿದ್ದು, ‘1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8(3) ಅಡಿ ಜನಪ್ರತಿನಿಧಿಗಳು ದೋಷಿ ಎಂದು ಪರಿಗಣಿಸಲ್ಪಟ್ಟ ಬೆನ್ನಲ್ಲೇ ಸ್ವಯಂಚಾಲಿತವಾಗಿ ಅವರ ಶಾಸನಸಭಾ ಸದಸ್ಯತ್ವದ ಅನರ್ಹತೆಗೆ ಅನುವು ಮಾಡಿಕೊಡುತ್ತದೆ. ಇದನ್ನು ಸಂವಿಧಾನದ ಪಾಲಿಗೆ ಅಲ್ಟ್ರಾ ವೈರಸ್‌ ಎಂದು ಘೋಷಿಸಬೇಕು. ಏಕೆಂದರೆ ಇದು ಸಮಾನತೆಯ ಮೂಲಭೂತ ಹಕ್ಕನ್ನು ಕಸಿಯುತ್ತದೆ’ ಎಂದು ವಾದಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಅನರ್ಹಗೊಂಡ ಪ್ರಕರಣವನ್ನು ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಅಭಾ, ಸೆಕ್ಷನ್‌ 8(3) ಪ್ರಕಾರ ಸ್ವಯಂಚಾಲಿತವಾಗಿ ಅನರ್ಹ ಮಾಡಲು ಬರುವುದಿಲ್ಲ ಎಂದು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದಾರೆ. ‘ರಾಹುಲ್‌ ಅವರು ಮಾನಹಾನಿ (ಸೆಕ್ಷನ್‌ 499) ಕಾಯ್ದೆ ಅನ್ವಯ ತಪ್ಪಿತಸ್ಥರಾಗಿದ್ದಾರೆ ಹಾಗೂ 2 ವರ್ಷ ಜೈಲು ವಾಸಕ್ಕೆ ಗುರಿಯಾಗಿದ್ದಾರೆ. ಆದರೆ ಯಾವುದೇ ಚುನಾಯಿತ ಸದಸ್ಯನನ್ನು ಸ್ವಯಂಚಾಲಿತವಾಗಿ ಇದನ್ನು ಆಧರಿಸಿ ಅನರ್ಹ ಮಾಡಲಾಗದು. ಇದು ಆ ಚುನಾಯಿತ ಪ್ರತಿನಿಧಿಯ ವಾಕ್‌ ಸ್ವಾತಂತ್ರ್ಯ ಕಸಿಯುತ್ತದೆ’ ಎಂದಿದ್ದಾರೆ.

ಇದನ್ನು ಓದಿ: ಕರ್ನಾಟಕ ಗೆದ್ದು ರಾಹುಲ್‌ ಅನರ್ಹತೆಗೆ ಉತ್ತರ ನೀಡೋಣ: ಸಾಮೂಹಿಕ ರಾಜೀನಾಮೆಗೆ ಮುಂದಾದ ಸಂಸದರಿಗೆ ಪ್ರಿಯಾಂಕಾ ಸಲಹೆ

ಅಲ್ಲದೆ, ‘2013ರಲ್ಲಿ ಲಿಲ್ಲಿ ಥಾಮಸ್‌ ಪ್ರಕರಣದಲ್ಲಿ ಅನರ್ಹತೆ ಬಗ್ಗೆ ಸುಪ್ರೀಂ ಕೋರ್ಚ್‌ ನೀಡಿದ ಆದೇಶದ ಮರು ಪರಿಶೀಲನೆಯ ಅಗತ್ಯವಿದೆ. ಏಕೆಂದರೆ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಲಿಲ್ಲಿ ಥಾಮಸ್‌ ಪ್ರಕರಣವನ್ನು ಸ್ಪಷ್ಟವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದು ಜನರ ಪ್ರಾತಿನಿಧ್ಯದ ಹಕ್ಕನ್ನೂ ಕಸಿಯುತ್ತದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೈ ನಾಯಕನಿಗೆ ಶಾಕ್: ರಾಹುಲ್‌ ಗಾಂಧಿ ಮನೆಗೆ ದೌಡಾಯಿಸಿದ ದೆಹಲಿ ಪೊಲೀಸರು..!

click me!