Fake Covid Claims: ಕೋವಿಡ್‌ ಪರಿಹಾರಕ್ಕಾಗಿ ನಕಲಿ ದಾಖಲೆ, ಅಧಿಕಾರಿಗಳೂ ಸಾಥ್‌!

By Kannadaprabha NewsFirst Published Mar 22, 2022, 8:22 AM IST
Highlights

*ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರದ ಮಾಹಿತಿ
*ದಾಖಲೆಗಳ ಮಾದರಿ ಪರೀಕ್ಷೆಗೆ ಅನುಮತಿ ಕೋರಿಕೆ

ನವದೆಹಲಿ (ಮಾ. 22): ಕೋವಿಡ್‌ನಿಂದ ಸಾವಿಗೀಡಾದವರಿಗೆ ಸರ್ಕಾರ ನೀಡುತ್ತಿರುವ 50 ಸಾವಿರ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಕೆಲವು ನಿರ್ಲಜ್ಜರು ನಕಲಿ ದಾಖಲಾತಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಈ ರೀತಿಯ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿ ಹಣ ಪಡೆದುಕೊಳ್ಳು ಅಧಿಕಾರಿಗಳೂ ಸಾಥ್‌ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರು ಸಾಕಷ್ಟುನೋವು ಅನುಭವಿಸಿದ್ದಾರೆ. ಹಾಗಾಗಿ ಕೃಪಾವೂರ್ವಕವಾಗಿ ಸರ್ಕಾರ ಸಹಾಯಧನವನ್ನು ನೀಡುತ್ತಿದೆ. ಆದರೆ ಕೆಲವು ನಿರ್ಲಜ್ಜ ವ್ಯಕ್ತಿಗಳು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪರಿಹಾರಕ್ಕಾಗಿ ಸಲ್ಲಿಸುವ ಅರ್ಜಿಗಳನ್ನು ವಿಲೇವಾರಿ ಮಾಡುವುದಕ್ಕಾಗಿ ನೇಮಕ ಮಾಡಿರುವ ಅಧಿಕಾರಿಗಳು ಸಹ ಈ ಅಕ್ರಮಗಳಲ್ಲಿ ತೊಡಗಿಕೊಂಡಿರುವ ಅನುಮಾನವಿದೆ.

ಹಾಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಕೆಲ ಅರ್ಜಿಗಳನ್ನು ತನಿಖೆ ನಡೆಸಲು ಕೇಂದ್ರದ ಏಜೆನ್ಸಿಗಳಿಗೆ ಅನುಮತಿ ನೀಡಬೇಕು ಎಂದು ಸರ್ಕಾರ ಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದೆ.ಪರಿಹಾರಕ್ಕಾಗಿ ಸಲ್ಲಿಕೆಯಾಗಿದ್ದ 8 ಲಕ್ಷ ಅರ್ಜಿಗಳಲ್ಲಿ ಈಗಾಗಲೇ 6 ಲಕ್ಷ ಜನರಿಗೆ ತಲಾ 50 ಸಾವಿರ ರು. ಸಹಾಯಧನ ವಿತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 68 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಇದನ್ನೂ ಓದಿCovid Crisis: 18+ ಆದ ಎಲ್ಲರಿಗೂ ಬೂಸ್ಟರ್‌ ಡೋಸ್‌..?

ಕೋವಿಡ್‌ಗೆ ಪರಿಹಾರದ ಕೋರಿಕೆ ಸಲ್ಲಿಸಲು 4 ವಾರ ಸಮಯ ಸಾಲದು:  ಕೋವಿಡ್‌ಗೆ ಬಲಿಯಾದವರ ಕುಟುಂಬಗಳು ಪರಿಹಾರ ಪಡೆಯಲು ಕೋರಿಕೆ ಸಲ್ಲಿಸಲು 4 ವಾರಗಳ ಸಮಯ ಸಾಲುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಹಿಂದೆ ಕೇಂದ್ರ ಸರ್ಕಾರ ಕೋವಿಡ್‌ನಿಂದ ಮೃತಪಟ್ಟವ್ಯಕ್ತಿಯ ಕುಟುಂಬಸ್ಥರು ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ನಾಲ್ಕು ವಾರಗಳ ಗಡುವು ನೀಡಿತ್ತು. 

ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಪೀಠ, ಈಗಾಗಲೇ ಮೃತಪಟ್ಟವರ ಕುಟುಂಬದವರಿಗೆ ಅರ್ಜಿ ಸಲ್ಲಿಸಲು ನಿರ್ದಿಷ್ಟದಿನಾಂಕದಿಂದ 60 ದಿನ ಮತ್ತು ಮುಂಬರುವ ದಿನಗಳಲ್ಲಿ ಸಂಭವಿಸುವ ಸಾವಿಗೆ ಸಂಬಂಧಿಸಿದಂತೆ 90 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಹೇಳಿದೆ.

1549 ಕೇಸ್‌, 31 ಸಾವು: ಸಕ್ರಿಯ ಕೇಸ್‌ 25 ಸಾವಿರಕ್ಕೆ ಇಳಿಕೆ:  ಭಾರತದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 1,549 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 31 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.30 ಕೋಟಿಗೆ ಏರಿಕೆಯಾಗಿದೆ. 

ಇದನ್ನೂ ಓದಿ: Covid Crisis: ಮಾಸ್ಕ್‌ ಕಡ್ಡಾಯ ಬೇಡ: ಕೇಂದ್ರ ಸರ್ಕಾರಕ್ಕೆ ತಜ್ಞರ ಸಲಹೆ

ಒಟ್ಟು ಸಾವಿಗೀಡಾದವರ ಸಂಖ್ಯೆ 5.16 ಲಕ್ಷಕ್ಕೆ ತಲುಪಿದೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 25,106ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.74ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.0.40 ಇದೆ. ಒಟ್ಟು ಸೋಂಕಿತರ ಪೈಕಿ 4.24 ಕೋಟಿ ಮಂದಿ ಸುಣಮುಖರಾಗಿದ್ದಾರೆ. ಈ ನಡುವೆ 181.24 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಣೆ ಮಾಡಲಾಗಿದೆ.

ಸೀರಂನಲ್ಲಿ ಕೋವಿಶೀಲ್ಡ್‌ ಲಸಿಕೆ ಹುಟ್ಟಿದ ಕಥೆಗೆ ಪುಸ್ತಕದ ರೂಪ: ಕೋಟ್ಯಂತರ ಭಾರತೀಯರು ಮತ್ತು ವಿದೇಶಿಯರ ಜೀವ ಕಾಪಾಡಿದ ಕೋವಿಶೀಲ್ಡ್‌ ಲಸಿಕೆ ಹುಟ್ಟಿದ ಕಥೆ ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ಲಸಿಕೆಯ ಪ್ರತಿ ಹಂತವನ್ನೂ ವಿವರಿಸುವ ದಿ ಕೋವಿಶೀಲ್ಡ್‌ ಎಂಬ ಪುಸ್ತಕವನ್ನು ಸ್ವತಃ ಸಂಸ್ಥೆಯ ನಿರ್ದೇಶಕ ಪ್ರಕಾಶ್‌ಸಿಂಗ್‌ ಬರೆದಿದ್ದಾರೆ. 

ಈ ಪುಸ್ತಕವನ್ನು ಸೀರಂ ಸಂಸ್ಥೆಯ ಸಿಇಒ ಅದರ್‌ ಪೂನಾವಾಲಾ ಅವರ ಉಪಸ್ಥಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಬಿಡುಗಡೆ ಮಾಡಿದರು. ಸೀರಂ ಇನ್‌ಸ್ಟಿಟ್ಯೂಟ್‌ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಲಸಿಕಾ ಉತ್ಪಾದನಾ ಕಂಪನಿಯಾಗಿದೆ.

click me!