* ಎಟಿಎಂ ತಾಂತ್ರಿಕ ದೋಷದ ಲಾಭ ಪಡೆಯಲು ನೆರೆದ ಜನ
* ಮಹಾ: ಎಟಿಎಂನಲ್ಲಿ ನಮೂದಿಸಿದ್ದಕ್ಕಿಂತ 5 ಪಟ್ಟು ಹೆಚ್ಚು ಹಣ ಲಭ್ಯ
* ಬಳಿಕ ಪೊಲೀಸರಿಂದ ಎಟಿಎಂ ಬಂದ್
ನಾಗಪುರ(ಜೂ.17): ಎಟಿಎಂ ನಿಂದ ನಗದು ಹಣವನ್ನು ಪಡೆಯಲು ಹೋದ ವ್ಯಕ್ತಿಗೆ ನಮೂದಿಸಿದ ಮೊತ್ತದ ಬದಲಾಗಿ 5 ಪಟ್ಟು ಹೆಚ್ಚು ಹಣ ಸಿಕ್ಕ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ವರದಿಯಾಗಿದೆ.
500 ರು. ಹಣ ಪಡೆಯಲು ಖಾಪರಖೇಡದ ಖಾಸಗಿ ಬ್ಯಾಂಕಿನ ಎಟಿಎಂಗೆ ಹೋದ ವ್ಯಕ್ತಿಗೆ 500 ರು. ಬದಲಾಗಿ 2500 ರು. ಸಿಕ್ಕಿದೆ. ಇದರಿಂದಾಗಿ ಆಶ್ಚರ್ಯಚಕಿತನಾದ ವ್ಯಕ್ತಿ 500 ರು. ಮೊತ್ತ ದಾಖಲಿಸಿ ಮತ್ತೆ ಮತ್ತೆ 5 ಪಟ್ಟು ಹಣವನ್ನು ಪಡೆದುಕೊಂಡಿದ್ದಾನೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಎಟಿಎಂನಿಂದ ಹಣವನ್ನು ತೆಗೆಯಲು ದೊಡ್ಡ ಪ್ರಮಾಣದಲ್ಲಿ ಜನರು ನೆರೆದಿದ್ದಾರೆ. ಬ್ಯಾಂಕ್ ಸಿಬ್ಬಂದಿಯೊಬ್ಬರು ಈ ವಿಷಯ ಸ್ಥಳೀಯ ಪೊಲೀಸರಿಗೆ ತಿಳಿಸಿದ ತಕ್ಷಣ ಅವರು ಸ್ಥಳಕ್ಕಾಗಮಿಸಿ, ಎಟಿಎಂ ಮುಚ್ಚಿಸಿದ್ದಾರೆ.
‘100 ರು. ನೋಟು ಇಡುವ ಎಟಿಎಂ ಟ್ರೇಯಲ್ಲಿ ತಪ್ಪಿ 500 ರು. ನೋಟುಗಳನ್ನು ಇಡಲಾಗಿತ್ತು. ತಾಂತ್ರಿಕ ದೋಷದಿಂದಾಗಿ ಹೆಚ್ಚು ಹಣ ಜನರಿಗೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಎಟಿಎಂ ತಾತ್ಕಾಲಿಕವಾಗಿ ಮುಚ್ಚಲಾಗಿದೆ’ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.