
ನವದೆಹಲಿ(ಜೂ.17): ಕೇಂದ್ರದ ಅಗ್ನಿಪಥ ಯೋಜನೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಗುರುವಾರ ಪ್ರತಿಭಟನೆ ಭುಗಿಲೆದ್ದ ಬೆನ್ನಲ್ಲೇ ವಿಪಕ್ಷಗಳ ನಾಯಕರು ಯೋಜನೆ ವಿರುದ್ಧ ಕಿಡಿಕಾರಿದ್ದಾರೆ. ದೇಶದ ಭದ್ರತೆ, ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುವ ಈ ಯೋಜನೆಯನ್ನು ಕೂಡಲೇ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ನಿರುದ್ಯೋಗಿ ಯುವಕರ ಧ್ವನಿಯನ್ನು ಆಲಿಸಿ, ಅಗ್ನಿಪಥದಲ್ಲಿ ನಡೆಯುವಂತೆ ಮಾಡಿ ಅವರ ತಾಳ್ಮೆಯ ಅಗ್ನಿಪರೀಕ್ಷೆ ತೆಗೆದುಕೊಳ್ಳಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗ್ರಹಿಸಿದ್ದಾರೆ. ಅಲ್ಲದೆ ‘ಯಾವುದೇ ರ್ಯಾಂಕ್ ಇಲ್ಲ, ಪಿಂಚಣಿ ಇಲ್ಲ, 2 ವರ್ಷಗಳ ಕಾಲ ನೇರ ನೇಮಕಾತಿ ಇಲ್ಲ, 4 ವರ್ಷಗಳ ಬಳಿಕ ಯಾವುದೇ ಸ್ಥಿರವಾದ ಭವಿಷ್ಯವಿಲ್ಲ. ಸರ್ಕಾರವು ಸೇನೆಯ ಪ್ರತಿಯಾಗಿ ಯಾವುದೇ ಗೌರವ ತೋರುತ್ತಿಲ್ಲ’ ಎಂದು ರಾಹುಲ್ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ ಅಗ್ನಿಪಥ ಯೋಜನೆಯು ವಿರೋಧಿಸಿದ್ದು, ‘ದೇಶ ಸೇವೆಗಾಗಿ ಸೇನೆ ಸೇರುವುದು ಹಲವಾರು ಯುವಕರ ಕನಸಾಗಿರುತ್ತದೆ. ಪ್ರಧಾನಿ ಮೋದಿಯವರೇ ಈ ಯುವಕರ ಕನಸುಗಳನ್ನು ನುಚ್ಚುನೂರಾಗಿಸಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ ಯೋಜನೆ ವಿರೋಧಿಸಿರುವ ಎಡಪಕ್ಷಗಳು, ಇದು ದೇಶದ ಹಿತಾಸಕ್ತಿಗೆ ಅಪಚಾರ. ಗುತ್ರಿಗೆ ಆಧಾರದಲ್ಲಿ ನೇಮಕ ಮಾಡಿ ವೃತ್ತಿ ಪರ ಸೇನೆ ನಿರ್ಮಾಣ ಅಸಾಧ್ಯ ಎಂದಿವೆ. ಮತ್ತೊಂದೆಡೆ ಕೇವಲ 4 ವರ್ಷದ ಬದಲು ಜೀವನ ಪೂರ್ಣ ದೇಶ ಸೇವೆಗೆ ಅವಕಾಶ ಮಾಡಿಕೊಡಿ ಎಂದು ದಿಲ್ಲಿ ಸಿಎಂ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. ಇದೊಂದು ನಿರ್ಲಕ್ಷ್ಯದ, ದೇಶದ ಭವಿಷ್ಯಕ್ಕೆ ಮಾರಕವಾದ ಯೋಜನೆ ಎಸ್ಪಿ ಅಧ್ಯಕ್ಷ ಅಖಿಲೇಶ್ ಕಿಡಿಕಾರಿದ್ದಾರೆ, ಎರಡು ವರ್ಷದಿಂದ ನೇಮಕ ಬಾಕಿ ಇಟ್ಟು, ಇದೀಗ ಸರ್ಕಾರ ಯುವಕರಿಗೆ ಇಂಥ ಅನ್ಯಾಯ ಮಾಡುತ್ತಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ದೂರಿದ್ದಾರೆ.ಅನ್ಯಾ. ಮಾಯಾವತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ