Uttar Pradesh: 7 ಹಂತದ ಚುನಾವಣೆಯಿಂದ ಅದೃಷ್ಟ!

By Suvarna NewsFirst Published Jan 17, 2022, 8:00 AM IST
Highlights

* ಸಪ್ತಋುಷಿ, ಸಪ್ತ ಸ್ವರ, ಸಪ್ತಬಣ್ಣಗಳ ರೀತಿ ಸಪ್ತಹಂತವೂ ಅದೃಷ್ಟಶಾಲಿ

* ಉ.ಪ್ರ: 7 ಹಂತದ ಚುನಾವಣೆಯಿಂದ ಅದೃಷ್ಟ!

* 7 ಎಂಬ ಸಂಖ್ಯೆಯೇ ಪವಿತ್ರ: ರಾಜಕೀಯ ಪಕ್ಷಗಳ ಕಲ್ಪನೆ

ಲಖನೌ(ಜ.17): ಉತ್ತರಪ್ರದೇಶ ವಿಧಾನಸಭಾ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದೆ. ಸಂಖ್ಯೆ 7 ಪವಿತ್ರವಾದುದು. ಇದರಿಂದ ಜಯಶಾಲಿ ಆಗಬಹುದು ಎಂದು ರಾಜ್ಯದ ರಾಜಕೀಯ ಪಕ್ಷಗಳು ಭಾವಿಸುತ್ತಿವೆ. ಸಪ್ತ ಋುಷಿಯಿಂದ ಹಿಡಿದು ಭಾರತೀಯ ಶಾಸ್ತ್ರೀಯ ಸಂಗೀತದ ಮೂಲ ಸ್ವರಗಳು ಏಳು (ಸಪ್ತಸ್ವರ). ಹೀಗಾಗಿ ಈ ಬಾರಿ ವಿಜಯ ನಮ್ಮದೇ ಎಂದು ರಾಜಕೀಯ ಪಕ್ಷಗಳು ವಿಭಿನ್ನ ಕಾರಣ ಮತ್ತು ತರ್ಕವನ್ನು ಮುಂದಿಡುತ್ತಿದ್ದಾರೆ.

ಬಿಜೆಪಿ ಹ್ಯಾಟ್ರಿಕ್‌ ವಿಜಯದ ಭರವಸೆಯಲ್ಲಿದ್ದರೆ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಸಹ ಚುನಾವಣೆಯಲ್ಲಿ ಅದೃಷ್ಟತಮ್ಮ ಪರ ಇದೆ ಎಂಬ ವಿಶ್ವಾಸದಲ್ಲಿವೆ. ಬಿಜೆಪಿ ರಾಜ್ಯಸಭಾ ಸಂಸದ ಸಂಜಯ್‌ ಸೇಠ್‌, ‘ಸಂಖ್ಯೆ 7 ಎಂಬುದು ಪವಿತ್ರವಾದುದು. ಕಾಮನಬಿಲ್ಲಿನ ಬಣ್ಣ ಏಳು, ಸಪ್ತ ಋುಷಿ, ಸಂಗೀತರ ಮೂಲ ಸ್ವರಗಳು 7. 2017ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆಯೂ 7 ಹಂತದಲ್ಲಿ ನಡೆದಿದ್ದವು. ಎರಡರಲ್ಲೂ ಬಿಜೆಪಿ ಅಭೂತಪೂರ್ವ ಜಯ ಗಳಿಸಿತ್ತು. ಈ ಬಾರಿಯೂ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಬಿಜಿಪಿ 300ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇತ್ತ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಸುರೇಂದ್ರ ಶ್ರೀವಾಸ್ತವ, ‘7 ಹಂತದ ಚುನಾವಣೆಗೆ ಸಮಾಜವಾದಿ ಪಕ್ಷಕ್ಕೆ ಅದೃಷ್ಟತರಲಿದೆ ಎಂಬುದು ಈ ಬಾರಿ ಸಾಬೀತಾಗಲಿದೆ’ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್‌ ವಕ್ತಾರ ಅಶೋಕ್‌ ಸಿಂಗ್‌, ‘ಬಿಜೆಪಿ ನಾಯಕರು ವಾರದಲ್ಲಿ ಏಳು ದಿನವೂ ಸುಳ್ಳು ಹೇಳುವ ಅಭ್ಯಾಸವನ್ನು ಹೊಂದಿದ್ದಾರೆ. ಹಾಗಾಗಿ ಸೂರ್ಯ ದೇವರ ರಥದ ಏಳು ಕುದುರೆಗಳಿಂದ ಯಾವುದೇ ಆಶೀರ್ವಾದ ಅವರಿಗೆ ಲಭ್ಯವಾಗುವುದಿಲ್ಲ. ‘ಸಪ್ತಋುಷಿಗಳು’ ಈ ಬಾರಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗ ಉತ್ತರ ಪ್ರದೇಶದಲ್ಲಿ ಫೆ.10ರಿಂದ ಮಾ.7ರ ವರೆಗೆ 7 ಹಂತದಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿದೆ.

click me!