ಆರ್ಟಿಕಲ್‌ 370 ರದ್ದು ವಿರೋಧಿಸಿ ಆ.5ರಂದು ಜಾಗೃತವಾಗಲಿದೆ ಪಾಕಿಸ್ತಾನದ ಟೂಲ್‌ಕಿಟ್‌ ಗ್ಯಾಂಗ್‌!

By Santosh NaikFirst Published Jul 29, 2023, 4:21 PM IST
Highlights

ಆಗಸ್ಟ್‌ 5 ರಂದು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದು ವಿರೋಧಿಸಿ ಸೋಶಿಯಲ್‌ ಮೀಡಿಯಾದಲ್ಲಿ ಭಾರತವನ್ನು ಕೆಣಕಲು ಪಾಕಿಸ್ತಾನದ ಟೂಲ್‌ಕಿಟ್‌ ಗ್ಯಾಂಗ್‌ ಸಿದ್ಧವಾಗಿದೆ. ಇದರ ನಡುವೆ ಟರ್ಕಿಯಲ್ಲಿ ಕಾಶ್ಮೀರದ ಕುರಿತಾಗಿ ಸೆಮಿನಾರ್‌ಅನ್ನೂ ಪಾಕಿಸ್ತಾನ ಆಯೋಜಿಸಿದೆ.
 

ನವದೆಹಲಿ (ಜು.29): ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್‌ 370ಯನ್ನು ಭಾರತ ಸರ್ಕಾರ ತೆಗೆದುಹಾಕಿದ್ದರ ವಿರುದ್ಧ ಭಾರತದ ಪ್ರತಿಷ್ಠೆಯನ್ನು ವಿಶ್ವದಲ್ಲಿ ಹಾಳು ಮಾಡುವ ನಿಟ್ಟಿನಲ್ಲಿ ನೆರೆಯ ಪಾಕಿಸ್ತಾನ ಸಜ್ಜಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ಈ ಕುರಿತಾಗಿ ಟೂಲ್‌ಕಿಟ್‌ ಬಿಡುಗಡೆಯಾಗಿದ್ದು, ಆಗಸ್ಟ್‌ 5 ರಂದು ವಿಶ್ವದ ಪ್ರಮುಖ ಗಣ್ಯರನ್ನು ಬಳಸಿಕೊಂಡು, ಭಾರತದ ಕೆಲವು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕರನ್ನು ಬಳಸಿಕೊಂಡು ಭಾರತದ ಇಮೇಜ್‌ಗೆ ಧಕ್ಕೆ ತರುವಂತ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಗಳನ್ನು ಕ್ರಿಯೇಟ್‌ ಮಾಡಲು ಬಯಸಿದೆ. ಅದರೊಂದಿಗೆ ಆಗಸ್ಟ್ 5 ರಂದು ಭಾರತದ ವಿರುದ್ಧ ಪ್ರತಿಭಟಿಸಲು ವಿವಿಧ ದೇಶಗಳಲ್ಲಿನ ಅವರ ರಾಯಭಾರ ಕಚೇರಿಗಳು ಮತ್ತು ಹೈಕಮಿಷನ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಪಾಕಿಸ್ತಾನವು ಆಗಸ್ಟ್ 5 ಅನ್ನು ಯೋಮ್-ಇ-ಇಸ್ತೇಶಲ್ ಅಂದರೆ ಶೋಷಣೆಯ ದಿನ ಎಂದು ಆಚರಿಸುತ್ತದೆ. ಭಾರತ ಸರ್ಕಾರವು 2019ರ ಆಗಸ್ಟ್‌ 5 ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ತೀರ್ಮಾನ ಮಾಡಿತ್ತು.

ಟರ್ಕಿಯಲ್ಲಿ ಪಾಕಿಸ್ತಾನದಿಂದ ಸೆಮಿನಾರ್: 370ನೇ ವಿಧಿಯನ್ನು ರದ್ದುಪಡಿಸಿ ನಾಲ್ಕು ವರ್ಷಗಳು ಪೂರ್ಣಗೊಳ್ಳುವ ಮುನ್ನವೇ ಪಾಕಿಸ್ತಾನ ತನ್ನ ಅಪಪ್ರಚಾರವನ್ನು ಆರಂಭಿಸಿದೆ. ಇದೇ ತಿಂಗಳಲ್ಲಿ ಪಾಕಿಸ್ತಾನವು ಟರ್ಕಿಯಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿ ಕಾಶ್ಮೀರ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಅದಕ್ಕೆ 'ಜಮ್ಮು ಕಾಶ್ಮೀರ ವಿವಾದ, ಪರಿಹಾರಕ್ಕಾಗಿ ಹುಡುಕಾಟ' ಎಂದು ಹೆಸರಿಡಲಾಗಿತ್ತು. ಕಾಶ್ಮೀರ ವಿಷಯದಲ್ಲಿ ಟರ್ಕಿ, ಪಾಕಿಸ್ತಾನವನ್ನು ಬೆಂಬಲಿಸುತ್ತದೆ ಮತ್ತು ಭಾರತವನ್ನು ವಿರೋಧಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಅಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸುಲಭ. ಇದೇ ರೀತಿಯ ಸೆಮಿನಾರ್ ಅನ್ನು ಪಾಕಿಸ್ತಾನವು ಪಿಒಕೆಯಲ್ಲಿ ಆಯೋಜಿಸಿತ್ತು. ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚಿತ್ರಕಲಾ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.

ಭಾರತ-ಪಾಕ್‌ ಸಂಬಂಧವನ್ನು ಹದಗೆಡಿಸಿದ ತೀರ್ಮಾನ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ. ಆಗ ಪಾಕಿಸ್ತಾನದ ಪ್ರಧಾನಿ ಆಗಿದ್ದ ಇಮ್ರಾನ್ ಖಾನ್, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವವರೆಗೆ ಭಾರತದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಭಾರತವೂ ಹೇಳಿದೆ. ಈಗ ಆರ್ಟಿಕಲ್‌ 370 ತೆಗೆದ ವಿಚಾರಕ್ಕೆ ನಾಲ್ಕು ವರ್ಷಗಳು ಆಗುತ್ತಿದ್ದು, ಪಾಕಿಸ್ತಾನ ಭಾರತದ ವಿರೋಧಿ ಪ್ರತಿಭಟನೆಗಳನ್ನು ಆಯೋಜನೆ ಮಾಡುವುದು ಮಾತ್ರವಲ್ಲ, ಟೂಲ್‌ಕಿಟ್‌ ಬಳಸಿ ಸೋಶಿಯಲ್‌ ಮೀಡಿಯಾದಲ್ಲಿ ಭಾರತವನ್ನು ಕೆಣಕುವ ತೀರ್ಮಾನ ಮಾಡಿದೆ. 

 

ಬದಲಾಗಿದೆ ಜಮ್ಮು ಮತ್ತು ಕಾಶ್ಮೀರ, 34 ವರ್ಷದ ಬಳಿಕ ಶಿಯಾ ಮುಸ್ಲಿಮರ ಮೊಹರಂ ಮೆರವಣಿಗೆ!

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ವರ್ಷದ ಆರಂಭದಲ್ಲಿ ಭಾರತದೊಂದಿಗೆ ಮಾತುಕತೆಗೆ ಮನವಿ ಮಾಡಿದರು. ಆದರೆ, 370ನೇ ವಿಧಿ ಬಗ್ಗೆ ಮೊದಲು ಚರ್ಚೆ ಎಂದು ಹೇಳಿದ ಬಳಿಕ ಭಾರತ ಈ ಮನವಿಯನ್ನು ತಿರಸ್ಕಾರ ಮಾಡಿದೆ. ಆದರೆ, ಭಾರತ ಮಾತ್ರ ಕಾಶ್ಮೀರ ಭಾರತದ ಆಂತರಿಕ ವಿಚಾರ. ಈ ಪ್ರದೇಶದ ಬಗ್ಗೆ ವಿಶ್ವದ ಯಾವುದೇ ದೇಶಗಳೊಂದಿಗೆ ಮಾತುಕತೆ ನಡೆಸಲು ಭಾರತ ಬಯಸೋದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ನಡೆಯುತ್ತಾ ಚುನಾವಣೆ ?: 5 ವರ್ಷದಿಂದ ಚುನಾಯಿತ ಸರ್ಕಾರವೇ ಇರಲಿಲ್ಲ..!

click me!