
ನವದೆಹಲಿ: ನಮ್ಮತ್ತ ಇಷ್ಟೊಂದು ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಿ ನಿಮಗೆ ತೃಪ್ತಿಯಾಗಿದ್ದರೆ ದಯವಿಟ್ಟು ದಾಳಿ ನಿಲ್ಲಿಸಿ’ ಎಂದು ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನದ ಡಿಜಿಎಂಒ ಅಂಗಲಾಚಿದ್ದರು ಎಂಬ ವಿಷಯ, ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾದ ಸಾಕ್ಷ್ಯಚಿತ್ರದಿಂದ ಬಯಲಾಗಿದೆ.
2025ರ ಮೇ 7ರಿಂದ 10ರ ವರೆಗೆ, ಸುಮಾರು 71 ತಾಸು ನಡೆದ ಪಾಕ್ ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ‘ಡಿಸ್ಕ್ಲಾಸಿಫೈಡ್: ಆಪರೇಷನ್ ಸಿಂದೂರ್’ನಲ್ಲಿ ಬಿಚ್ಚಿಡಲಾಗಿದೆ. ಸಾಕ್ಷ್ಯಚಿತ್ರದ ಪ್ರಕಾರ, ಮೇ 10ರ ರಾತ್ರಿ 1.30ಕ್ಕೆ ಪಾಕ್ ಕಡೆಯಿಂದ ದೆಹಲಿಯತ್ತ ಭಾರೀ ಪ್ರಮಾಣದಲ್ಲಿ ಕ್ಷಿಪಣಿ, ಡ್ರೋನ್, ರಾಕೆಟ್ ಇತ್ಯಾದಿಗಳನ್ನು ಹಾರಿಸಲಾಗಿತ್ತು ಹಾಗೂ ಇವುಗಳನ್ನು ಹರ್ಯಾಣದ ಸಿರ್ಸಾದಲ್ಲಿ ಹೊಡೆದುರುಳಿಸಲಾಗಿತ್ತು. ಅಂತೆಯೇ, ಈ ದಾಳಿಗೆ ಪ್ರತಿಯಾಗಿ ಭಾರತದ ವಾಯುಪಡೆ, ತನ್ನ ಬತ್ತಳಿಕೆಯಲ್ಲಿರುವ ಬಲಿಷ್ಠ ಅಸ್ತ್ರವಾದ ಬ್ರಹ್ಮೋಸ್ ಅನ್ನು ಹೊರತೆಗೆಯಿತು.
ಪಾಕಿಸ್ತಾನದ ವಾಯುನೆಲೆಗಳು ಸೇರಿದಂತೆ ಪ್ರಮುಖ ಮಿಲಿಟರಿ ಮೂಲಸೌಕರ್ಯಗಳ ಮೇಲೆ ಬ್ರಹ್ಮೋಸ್ ಬಳಸಿ ದಾಳಿ ನಡೆಸಲಾಯಿತು. ಇದರ ಬೆನ್ನಲ್ಲೇ, ಯುದ್ಧ ನಿಲ್ಲಿಸುವಂತೆ ಅಮೆರಿಕದ ಮೂಲಕ ಪಾಕ್ ಮನವಿ ಮಾಡಿತು. ಆದರೆ 3ನೇ ದೇಶದ ಮಧ್ಯಸ್ಥಿಕೆಯನ್ನು ಭಾರತ ತಿರಸ್ಕರಿಸಿದ ಕಾರಣ ಹಾಟ್ಲೈನ್ ಪಾಕ್ನ ಡಿಜಿಎಂಒ ಕಡೆಯಿಂದ ಮೇಲಿಂದ ಮೇಲೆ ಕರೆಗಳು ಬರತೊಡಗಿದವು. ಮಧ್ಯಾಹ್ನ 3.30ಕ್ಕೆ ಅತ್ತಲಿಂದ ಮಾತನಾಡಿದ ಮೇ. ಜ. ಕಾಶಿಫ್ ಅಬ್ದುಲ್ಲಾ, ‘ಬ್ರಹ್ಮೋಸ್ ಬಳಸಿ ನೀವು ನಮಗೆ ಬಹಳಷ್ಟು ಹಾನಿ ಮಾಡಿದ್ದೀರಿ. ಇದರಿಂದ ತೃಪ್ತಿಯಾಗಿದ್ದರೆ ದಯವಿಟ್ಟು ದಾಳಿ ನಿಲ್ಲಿಸಿ ಹಾಗೂ ಕದನವಿರಾಮಕ್ಕೆ ಒಪ್ಪಿಕೊಳ್ಳಿ’ ಎಂದು ದುಂಬಾಲು ಬಿದ್ದರು. ಕೊನೆಗೆ ಸಂಜೆ 5.30ಕ್ಕೆ ಕದನವಿರಾಮ ಘೋಷಣೆಯಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ