
ನವದೆಹಲಿ[ಡಿ.30]: ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಮುಖ್ಯಸ್ಥರ ಹುದ್ದೆಗಳ ಮೇಲೆ ‘ಸಶಸ್ತ್ರಪಡೆ ಮುಖ್ಯಸ್ಥ’ ಎಂಬ ಹೊಸ ಹುದ್ದೆ ಸೃಷ್ಟಿಸುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಇತ್ತೀಚೆಗಷ್ಟೇ ಕೈಗೊಂಡಿತ್ತು ಇದರ ಬೆನ್ನಲ್ಲೇ, ನಿವೃತ್ತಿ ಪಡೆಯುವ ಹಂತದಲ್ಲಿದ್ದ ಜನರಲ್ ಬಿಪಿನ್ ರಾವತ್ ದೇಶದ ಮೊದಲ CDS ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಮೂರೂ ಸೇನಾ ಪಡೆಗೆ ಸಂಬಂಧಿಸಿದ ವಿಚಾರಗಳಲ್ಲಿ ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
2016ರ ಡಿಸೆಂಬರ್ 31ರಂದು ಬಿಪಿನ್ ರಾವತ್ ರವರು ಭೂಸೇನೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಡಿ.31ರಂದು ನಿವೃತ್ತಿ ಪಡೆಯಲಿದ್ದರು. ಆದರೀಗ ನಿವೃತ್ತಿ ಪಡೆಯುವ ಕೇವಲ ಒಂದು ದಿನ ಮೊದಲು ಬಿಪಿನ್ ರಾವತ್ ಸಶಸ್ತ್ರ ಪಡೆ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಭಾರತಕ್ಕೆ 4 ಸ್ಟಾರ್ ಚೀಫ್ ಆಫ್ ಡಿಫೆನ್ಸ್ ಸ್ಟಾಫ್: ಮಿಲಿಟರಿ ಸಮನ್ವಯ ಇನ್ನು ಸುಲಭ!
ಉತ್ತಮ ಸಮನ್ವಯಕ್ಕಾಗಿ ಮೂರೂ ಸೇನಾಪಡೆಗಳ ಮುಖ್ಯಸ್ಥರ ಹುದ್ದೆಗಳ ಮೇಲೆ ಹೊಸ ಹುದ್ದೆ ಸೃಷ್ಟಿಸಲಾಗುವುದು ಎಂದು ಆ.15ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು. ಬಳಿಕ ರಕ್ಷಣಾ ಸಚಿವಾಲಯದಡಿ ಮಿಲಿಟರಿ ವ್ಯವಹಾರಗಳು ಎಂಬ ಪ್ರತ್ಯೇಕ ಇಲಾಖೆಯನ್ನು ರಚಿಸಲು ಸರ್ಕಾರ ತೀರ್ಮಾನಿಸಿದ್ದು, ಸಂಪುಟ ಸಭೆಯಲ್ಲೂ ಅಂಗೀಕಾರ ಪಡೆದಿತ್ತು. ಈ ಮೂಲಕ 20 ವರ್ಷ ಬಳಿಕ ಈ ಪ್ರಸ್ತಾವಕ್ಕೆ ಮುಕ್ತಿ ದೊರಕಿತ್ತು.
ವಿಶೇಷತೆ ಏನು? ಸಶಸ್ತ್ರ ಪಡೆ ಮುಖ್ಯಸ್ಥ ಹುದ್ದೆ ಸೃಷ್ಟಿ ಏಕೆ?
ಸಶಸ್ತ್ರ ಪಡೆ ಮುಖ್ಯಸ್ಥ 4 ಸ್ಟಾರ್ ಜನರಲ್ ಆಗಿರಲಿದ್ದಾರೆ ಮತ್ತು ಅವರ ವೇತನ ಸೇನಾ ಪಡೆಗಳ ಮುಖ್ಯಸ್ಥರಿಗೆ ಸಮನಾಗಿರುತ್ತದೆ.
ಭೂ ಸೇನೆ, ವಾಯು ಪಡೆ ಮತ್ತು ನೌಕಾ ಪಡೆಗಳ ಕಾರ್ಯಾಚರಣೆ, ಶಸ್ತ್ರಾಸ್ತ್ರ ಖರೀದಿ, ಸಿಬ್ಬಂದಿ ನೇಮಕ ಹಾಗೂ ತರಬೇತಿಗೆ ಸಂಬಂಧಿಸಿದಂತೆ ಸಮನ್ವಯ ಸಾಧಿಸುವುದು.
ಮೂರೂ ಪಡೆಗಳ ಮುಖ್ಯಸ್ಥರಿಂದ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ಸಲಹೆಯನ್ನು ನೀಡುವುದು.
ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಪರಿಣತಿ ಸಾಧಿಸುವುದು.
ಬೆಂಕಿ ಹಚ್ಚುವವರು ನಾಯಕರಲ್ಲ ಎಂಬ ಸೇನಾ ಮುಖ್ಯಸ್ಥರ ಹೇಳಿಕೆಗೆ ವಿಪಕ್ಷಗಳ ಆಕ್ಷೇಪ!
ಶಸಸ್ತ್ರ ಪಡೆ ಮುಖ್ಯಸ್ಥರ ಪಾತ್ರವೇನು?
ಮೂರು ಸೇನೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರಾಗಿ ಸಶಸ್ತ್ರ ಪಡೆ ಮುಖ್ಯಸ್ಥರು ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಮೂರು ಸೇನೆಯ ಮುಖಸ್ಥರು ತಮ್ಮ ಸೇವೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ರಕ್ಷಣಾ ಸಚಿವರಿಗೆ ಸಲಹೆ ನೀಡುವುದನ್ನು ಮುಂದುವರಿಸಬಹುದಾಗಿದೆ.
- ಮೂರು ಸೇನಾ ಪಡೆಗಳು ಮತ್ತು ಅದರ ಮುಖ್ಯಸ್ಥರಿಗೆ ಯಾವುದೇ ಸೇನಾ ಆದೇಶ ನೀಡುವ ಅಧಿಕಾರ ಸಶಸ್ತ್ರ ಪಡೆ ಮುಖ್ಯಸ್ಥರಿಗೆ ಇರುವುದಿಲ್ಲ.
- ಮೂರು ಸೇನಾ ಪಡೆಗಳ ಆಡಳಿತ ಮುಖ್ಯಸ್ಥರಾಗಿ ಶಸಸ್ತ್ರ ಪಡೆ ಮುಖ್ಯಸ್ಥರು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಬಾಹ್ಯಾಕಾಶ ಮತ್ತು ಸೈಬರ್ಗೆ ಸಂಬಂಧಿಸಿದ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ.
ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ