
ನವದೆಹಲಿ(ಡಿ.07): ಕೇಂದ್ರದ ನೂತನ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕಳೆದ 11 ದಿನಗಳಿಂದ ದೆಹಲಿಯ 5 ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕರೆ ನೀಡಿರುವ ಡಿ.8ರ ಮಂಗಳವಾರದ ಭಾರತ ಬಂದ್ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್, ತೆಲಂಗಾಣ ರಾಷ್ಟ್ರ ಸಮಿತಿ, ಡಿಎಂಕೆ ಹಾಗೂ ಆಮ್ ಆದ್ಮಿ ಪಕ್ಷ ಸೇರಿ 15 ರಾಜಕೀಯ ಪಕ್ಷಗಳು ಬೆಂಬಲ ಘೋಷಣೆ ಮಾಡಿವೆ.
"
ಇದಲ್ಲದೆ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು, ಸಾರಿಗೆ ಸಂಘಟನೆ, ಬ್ಯಾಂಕ್ ನೌಕರರ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ಕೂಡ ಹೋರಾಟ ಬೆಂಬಲಿಸುವುದಾಗಿ ಕರೆ ಕೊಟ್ಟಿವೆ. ಹೀಗಾಗಿ ಬಿಜೆಪಿಯೇತರ ಪಕ್ಷಗಳು ಆಳ್ವಿಕೆ ನಡೆಸುತ್ತಿರುವ ಪಂಜಾಬ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿ ಬಂದ್ ಬಹುತೇಕ ಯಶಸ್ವಿಯಾಗುವ ಸಾಧ್ಯತೆ ಕಂಡುಬರುತ್ತಿದೆ.
ರೈತರ ಭಾರತ್ ಬಂದ್ : ರಾಜ್ಯದಲ್ಲೂ ಬೆಂಬಲ
ಈ ನಡುವೆ, ಬಿಕ್ಕಟ್ಟು ಇದೇ ರೀತಿ ಮುಂದುವರಿದರೆ ಹೋರಾಟ ದೆಹಲಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಪ್ರತಿಭಟನಾನಿರತ ರೈತರ ಜತೆ ದೇಶದ ಎಲ್ಲ ಜನರು ನಿಲ್ಲಲಿದ್ದಾರೆ ಎಂದು ಎನ್ಸಿಪಿ ಪರಮೋಚ್ಚ ನಾಯಕ ಶರದ್ ಪವಾರ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಬಂದ್ ಮರುದಿನವೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಲು ವಿವಿಧ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.
ಇದೇ ವೇಳೆ ಪ್ರತಿಭಟನೆ ದೇಶವ್ಯಾಪಿಯಾಗಿದ್ದು ಎಂದು ಹೇಳಿರುವ ರೈತ ಮುಖಂಡರು, ತಮ್ಮ ಹೋರಾಟ ಪಕ್ಷಾತೀತವಾಗಿದ್ದು ಎಲ್ಲರ ಬೆಂಬಲವನ್ನು ಸ್ವಾಗತಿಸುವುದಾಗಿ ಹೇಳಿವೆ. ಅಲ್ಲದೆ ಮಂಗಳವಾರದ ಭಾರತ್ ಬಂದ್ ಅನ್ನು ಯಶಸ್ವಿಗೊಳಿಸುವಂತೆ ಕರೆ ಕೊಟ್ಟಿವೆ. ಅಲ್ಲದೆ ಮೂರು ವಿವಾದಿತ ಕಾಯ್ದೆ ಹಿಂದಕ್ಕೆ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಡಿ.9ರಂದು ಕೇಂದ್ರದೊಂದಿಗೆ ನಡೆಯಲಿರುವ ಸಭೆ ವಿಫಲವಾದಲ್ಲಿ ಹೋರಾಟವನ್ನು ಇನ್ನಷ್ಟುತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೊರೋನಾ ನಡುವೆ ನಿಗೂಢ ರೋಗ; ಆಂಧ್ರದಲ್ಲಿ 228 ಮಂದಿ ಆಸ್ಪತ್ರೆ ದಾಖಲು!
ಸಚಿವರ ಸಭೆ:
ಡಿ.9ರಂದು ರೈತರೊಂದಿಗೆ 6ನೇ ಸುತ್ತಿನ ಮಾತುಕತೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಖಾತೆ ರಾಜ್ಯಸಚಿವರಾದ ಪಿ.ರೂಪಾಲ, ಕೈಲಾಶ್ ಚೌಧರಿ ಭಾನುವಾರ ಸಭೆ ನಡೆಸಿದರು. ಜೊತೆಗೆ ಸೋಮವಾರ ಇನ್ನೊಂದು ಸುತ್ತಿನ ಸಭೆ ನಡೆಸಲೂ ನಿರ್ಧರಿಸಿದ್ದಾರೆ. ಇದೇ ವೇಳೆ ಮೂರು ಕೃಷಿ ಮಸೂದೆಗಳಿಗೆ ತಿದ್ದುಪಡಿ ತರಲು ಸರ್ಕಾರ ಸಿದ್ಧವಿದೆ. ಆದರೆ ಕಾಯ್ದೆ ರದ್ದು ಸಾಧ್ಯತೆ ಇಲ್ಲ ಎಂದು ಸಚಿವ ಚೌಧರಿ ಸ್ಪಷ್ಟಪಡಿಸಿದ್ದಾರೆ.
ಹಾಲು, ಪಡಿತರ ಅಂಗಡಿಯೂ ಬಂದ್:
ಸಾಮಾನ್ಯವಾಗಿ ಬಂದ್ ವೇಳೆ ಹಾಲಿನ ಮಾರಾಟಕ್ಕೆ ವಿನಾಯಿತಿ ಇರುತ್ತದೆ. ಆದರೆ ಈ ಬಾರಿ ಹಾಲಿನ ಅಂಗಡಿ ಹಾಗೂ ಪಡಿತರ ಮಳಿಗೆಗಳನ್ನೂ ಮುಚ್ಚಲಾಗುತ್ತದೆ. ಆದರೆ ವೈದ್ಯಕೀಯ ಸೇವೆ, ಆ್ಯಂಬುಲೆನ್ಸ್, ವಿವಾಹ ಕಾರ್ಯಗಳನ್ನು ಬಂದ್ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ.
'ಶೀಘ್ರ ಪರಿಹಾರ ಒದಗಿಸಿ, ಸಮಸ್ಯೆ ಬಗೆಹರಿಯದಿದ್ದರೆ ಇಡೀ ದೇಶದ ರೈತರಿಂದ ಪ್ರತಿಭಟನೆ!'
ಯಾರಾರಯರು ಬಂದ್ ಪರ?
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆರ್ಜೆಡಿ, ಆಪ್, ಟಿಆರ್ಎಸ್, ಡಿಎಂಕೆ, ಶಿವಸೇನೆ, ಎನ್ಸಿಪಿ, ಎಂಡಿಎಂಕೆ, ಮಕ್ಕಳ್ ನೀಧಿ ಮಯ್ಯಂ, ಸಿಪಿಎಂ, ಸಿಪಿಐ, ಸಿಪಿಐ-ಎಂಎಲ್, ಆರ್ಎಸ್ಪಿ, ಫಾರ್ವರ್ಡ್ ಬ್ಲಾಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ