ದೇಶಾದ್ಯಂತ NRC, ಅಕ್ರಮ ವಲಸಿಗರು ಗಡೀಪಾರು: ಈ ದಾಖಲೆ ರೆಡಿ ಇಟ್ಟುಕೊಳ್ಳಿ

Published : Nov 21, 2019, 07:29 AM ISTUpdated : Nov 21, 2019, 07:50 AM IST
ದೇಶಾದ್ಯಂತ  NRC, ಅಕ್ರಮ ವಲಸಿಗರು ಗಡೀಪಾರು: ಈ ದಾಖಲೆ ರೆಡಿ ಇಟ್ಟುಕೊಳ್ಳಿ

ಸಾರಾಂಶ

ದೇಶಾದ್ಯಂತ ಎನ್‌ಆರ್‌ಸಿ ಅಮಿತ್‌ ಶಾ ಘೋಷಣೆ| ಅಕ್ರಮ ವಲಸಿಗರ ಪತ್ತೆ ಹಚ್ಚಿ ಗಡೀಪಾರಿಗೆ ಕ್ರಮ| ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವರ ಹೇಳಿಕೆ| ಚಿಂತೆ ಬೇಕಿಲ್ಲ, ನಿಮ್ಮ ದಾಖಲೆ ರೆಡಿ ಇಟ್ಟುಕೊಳ್ಳಿ

ನವದೆಹಲಿ[ನ.21]: ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡಲು ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಸಿಟಿಜನ್ಸ್‌- ಎನ್‌ಆರ್‌ಸಿ)ಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಗೃಹ ಸಚಿವ ಅಮಿತ್‌ ಶಾ ಅವರು ಮತ್ತೊಮ್ಮೆ ಹೇಳಿದ್ದಾರೆ.

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಅಬ್ಬರಿಸಿದ್ದಾರೆ.

ಚಿಂತೆ ಬೇಡ:

ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ದೇಶಾದ್ಯಂತ ಎನ್‌ಆರ್‌ಸಿ ವಿಸ್ತರಿಸುವುದಾಗಿ ಅಮಿತ್‌ ಶಾ ಹೇಳಿದ್ದರು. ಆದರೆ ಇದೇ ಮೊದಲ ಬಾರಿಗೆ ಅದನ್ನು ಸಂಸತ್ತಿನಲ್ಲಿ ಘೋಷಿಸಿದ್ದಾರೆ. ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬುಧವಾರ ಮಾತನಾಡಿದ ಅವರು, ಎನ್‌ಆರ್‌ಸಿ ಪ್ರಕ್ರಿಯೆ ನಡೆಸುವಾಗ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ. ಯಾವುದೇ ಧರ್ಮಕ್ಕೆ ಸೇರಿದವರೂ ಚಿಂತೆ ಪಡಬೇಕಿಲ್ಲ ಎಂದು ಹೇಳಿದರು.

ಎನ್‌ಆರ್‌ಸಿ ಭಾರತದ ಭವಿಷ್ಯಕ್ಕೆ ಒಳ್ಳೆಯದು ಎಂದ ಸಿಜೆಐ ಗಗೋಯ್!

ಬೇರೊಂದು ಸಮುದಾಯಕ್ಕೆ ಸೇರಿದ ಜನರನ್ನು ಸೇರ್ಪಡೆ ಮಾಡಬಾರದು ಎಂಬ ಅಂಶವೇ ಎನ್‌ಆರ್‌ಸಿಯಲ್ಲಿ ಇಲ್ಲ. ಭಾರತೀಯ ಪ್ರಜೆಗಳಾಗಿರುವ ಎಲ್ಲ ಧರ್ಮೀಯ ಜನರ ಹೆಸರನ್ನೂ ಸೇರಿಸಲಾಗುತ್ತದೆ. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಎನ್‌ಆರ್‌ಸಿಯೇ ಬೇರೆ, ಪೌರತ್ವ ತಿದ್ದುಪಡಿ ಮಸೂದೆಯೇ ಬೇರೆ ಎಂದು ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ನಡೆಸಲಾಯಿತು. ದೇಶಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೆ ತರುವಾಗ ಅಸ್ಸಾಂ ಅನ್ನೂ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಎನ್‌ಆರ್‌ಸಿ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಗಳು ನ್ಯಾಯಾಧಿಕರಣದ ಮೊರೆ ಹೋಗಬೇಕಾಗುತ್ತದೆ. ಇದಕ್ಕಾಗಿ ಅಸ್ಸಾಂನಾದ್ಯಂತ ನ್ಯಾಯಾಧಿಕರಣಗಳನ್ನು ತೆರೆಯಲಾಗಿದೆ. ಅಲ್ಲಿಗೆ ಹೋಗಲು ಹಣ ಇಲ್ಲ ಎನ್ನುವವರಿಗೆ ಅಸ್ಸಾಂ ಸರ್ಕಾರವೇ ಹಣ ಕೊಟ್ಟು ವಕೀಲರನ್ನು ನೇಮಕ ಮಾಡಿಕೊಡಲಿದೆ ಎಂದು ವಿವರಿಸಿದರು.

ಧಾರ್ಮಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಷ್ಘಾನಿಸ್ತಾನವನ್ನು ತೊರೆದಿರುವ ಹಿಂದು, ಬೌದ್ಧ, ಜೈನ, ಕ್ರೈಸ್ತ, ಸಿಖ್‌ ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವ ನೀಡಬೇಕೆಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತದೆ. ಇದಕ್ಕಾಗಿಯೇ ಪೌರತ್ವ ತಿದ್ದುಪಡಿ ಮಸೂದೆಯನ್ನು ತರಲಾಗಿದೆ. ಇದರಡಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ನಿರಾಶ್ರಿತರಿಗೆ ಪೌರತ್ವ ನೀಡಲಾಗುತ್ತದೆ. ಹಿಂದಿನ ಲೋಕಸಭೆ ಈ ಮಸೂದೆಯನ್ನು ಅಂಗೀಕರಿಸಿತ್ತು. ಸೆಲೆಕ್ಟ್ ಕಮಿಟಿ ಕೂಡ ಒಪ್ಪಿತ್ತು. ಆದರೆ ಲೋಕಸಭೆ ವಿಸರ್ಜನೆಯಾಗಿತ್ತು. ಹೀಗಾಗಿ ಮತ್ತೆ ಮಸೂದೆ ತರಲಾಗಿದೆ. ಅದಕ್ಕೂ ಎನ್‌ಆರ್‌ಸಿಗೂ ಸಂಬಂಧವಿಲ್ಲ ಎಂದರು.

ರಾಜ್ಯ ಅಕ್ರಮ ಬಾಂಗ್ಲನ್ನರ ಸಾಮ್ರಾಜ್ಯ!

ನಿಮ್ಮ ದಾಖಲೆ ರೆಡಿ ಇಟ್ಟುಕೊಳ್ಳಿ

- ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಆರ್‌ಸಿ) ಜಾರಿ ಬಗ್ಗೆ ಭಾರತದ ಜನಸಾಮಾನ್ಯರು ಆತಂಕಪಡಬೇಕಿಲ್ಲ

- ಆಧಾರ್‌, ಪಾಸ್‌ಪೋರ್ಟ್‌, ಜನನ ಪ್ರಮಾಣಪತ್ರ ಇತ್ಯಾದಿ... ಯಾವುದಾದರೂ ಸರ್ಕಾರಿ ದಾಖಲೆ ಇದ್ದರೆ ಸಾಕು

- ಭಾರತದಲ್ಲೇ ಜನಿಸಿ ಬೆಳೆದವರು ಎನ್‌ಆರ್‌ಸಿ ಜಾರಿ ವೇಳೆ ಅಧಿಕಾರಿಗಳಿಗೆ ಸೂಕ್ತ ದಾಖಲೆ ಒದಗಿಸಿ ದೃಢೀಕರಿಸಿಕೊಳ್ಳಿ

ಏನಿದು ಪೌರತ್ವ ಮಸೂದೆ?

ಬಾಂಗ್ಲಾದೇಶ, ಪಾಕಿಸ್ತಾನ, ಆಷ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿದ ಕಾರಣಕ್ಕೆ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರು, ಅಂದರೆ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಜೊತೆಗೆ ಹೀಗೆ ಪೌರತ್ವ ಪಡೆಯಲು, ವಲಸಿಗರು ಭಾರತದಲ್ಲಿ ಕನಿಷ್ಠ 11 ವರ್ಷ ನೆಲೆಸಿರಬೇಕು ಎಂಬ ನಿಯಮವನ್ನು ಸರ್ಕಾರ 6 ವರ್ಷಕ್ಕೆ ಇಳಿಸಿದೆ. ಆದರೆ ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ಈಶಾನ್ಯ ರಾಜ್ಯಗಳ ಹಲವು ಸಂಘಟನೆಗಳು ವಿರೋಧ ಹೊಂದಿವೆ.

ಎನ್‌ಆರ್‌ಸಿ ಜಾರಿಗೆ ರಾಜ್ಯ ಸರ್ಕಾರ ರೆಡಿ

ಎನ್‌ಆರ್‌ಸಿ ಮಸೂದೆ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಆರ್‌ಸಿ) ಮಸೂದೆಯು, ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಉದ್ದೇಶ ಹೊಂದಿದೆ. ಮೊದಲ ಹಂತದಲ್ಲಿ ಸುಪ್ರೀಂಕೋರ್ಟ್‌ ಸೂಚನೆ ಅನ್ವಯ ಇದನ್ನು ಅಸ್ಸಾಂನಲ್ಲಿ ಜಾರಿಗೆ ತರಲಾಗಿತ್ತು. ಅಲ್ಲಿ ಇತ್ತೀಚೆಗೆ ಪ್ರಕಟಿಸಲಾದ ಅಂತಿಮ ವರದಿ ಅನ್ವಯ, 30 ಲಕ್ಷ ಜನರನ್ನು ಅಕ್ರಮ ನಿವಾಸಿಗಳು ಎಂದು ಘೋಷಿಸಲಾಗಿದೆ. ಆದರೆ ಇವರಿಗೆಲ್ಲಾ ವಿದೇಶಿಗರ ಮೇಲ್ಮನವಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಕಲ್ಪಿಸಲಾಗಿದೆ.

ಮಮತಾ ವಿರೋಧ:

ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸುವ ಕೇಂದ್ರ ಸರ್ಕಾರದ ಯತ್ನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಎನ್‌ಆರ್‌ಸಿ ಜಾರಿ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ 14 ಲಕ್ಷ ಹಿಂದು ಹಾಗೂ ಬಂಗಾಳಿಗಳು ಹೊರಗುಳಿದಿದ್ದಾರೆ. ಅದರ ಬಗ್ಗೆ ಬಿಜೆಪಿ ಉತ್ತರ ನೀಡುತ್ತಿಲ್ಲ. ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಗೆ ಬಿಡುವುದಿಲ್ಲ. ಜನರ ಪೌರತ್ವ ಕಸಿದು, ಅವರನ್ನು ನಿರಾಶ್ರಿತರನ್ನಾಗಿಸುವುದಿಲ್ಲ ಎಂದು ಬಂಗಾಳದ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದಾರೆ.

ಅಸ್ಸಾಂ NRC ಅಂದ್ರೇನು? ಪಟ್ಟಿಯಲ್ಲಿ ಹೆಸರಿಲ್ಲದವರ ಗತಿ ಏನು? ಸಿಂಪಲ್ ಆಗಿ ತಿಳ್ಕೊಳ್ಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!