ದಕ್ಷಿಣದ ಭಾರತದ ಲೋಕಸಭಾ ಸ್ಥಾನಗಳ ಕಡಿತ ಇಲ್ಲ: ಪ್ರಧಾನಿ ಮೋದಿ ಮಹತ್ವದ ಹೇಳಿಕೆ

Kannadaprabha News   | Kannada Prabha
Published : Apr 05, 2026, 10:56 AM IST
narendra modi criticism palakkad mla rahul mamkootathil

ಸಾರಾಂಶ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಆತಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರೆ ಎಳೆದಿದ್ದಾರೆ.

ಪಿಟಿಐ ತಿರುವಳ್ಳ(ಕೇರಳ): ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ಆತಂಕ ವ್ಯಕ್ತಪಡಿಸುತ್ತಿರುವ ನಡುವೆಯೇ, ‘ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳನ್ನು ಕಡಿಮೆ ಮಾಡಲಾಗುವುದಿಲ್ಲ. ಬದಲಿಗೆ ದೇಶಾದ್ಯಂತ ರಾಜ್ಯಗಳಿಗೆ ಪ್ರಯೋಜನವಾಗುವಂತೆ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543ರಿಂದ 816ಕ್ಕೆ ಏರಿಸುವ ವಿಧೇಯಕ ಹಾಗೂ ಮಹಿಳಾ ಮೀಸಲಾತಿ ಮಸೂದೆ (ತಿದ್ದುಪಡಿ)ಯನ್ನು ಮಂಡಿಸಿ ಅನುಮೋದನೆ ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಏ.16ರಿಂದ 3 ದಿನ ಅಧಿವೇಶನ ಕರೆದಿದೆ. ಅದಕ್ಕೂ ಮುಂಚಿತವಾಗಿ, ಜನರಲ್ಲಿ ಈ ಕುರಿತು ಮನೆ ಮಾಡಿರುವ ಆತಂಕವನ್ನು ದೂರ ಮಾಡಲು ಮೋದಿ ಯತ್ನಿಸಿದ್ದಾರೆ. ಲೋಕಸಭಾ ಸ್ಥಾನ ಹೆಚ್ಚಳ ಮತ್ತು ಅನ್ಯಾಯದ ಕುರಿತ ದಕ್ಷಿಣ ರಾಜ್ಯಗಳ ಕಳವಳದ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಿದ್ದು ಇದೇ ಮೊದಲು ಎಂಬ ವಿಶೇಷ.

ಶನಿವಾರ ಕೇರಳದ ತಿರುವಳ್ಳದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಜನಸಂಖ್ಯೆ ನಿಯಂತ್ರಣಾ ನೀತಿಯನ್ನು ಯಶಸ್ವಿಯಾಗಿ ಕೈಗೊಂಡ ಕಾರಣ ದಕ್ಷಿಣದ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತವೆ ಎಂಬ ವದಂತಿ ಹರಡಲಾಗುತ್ತಿದೆ. ಆದರೆ ಇದು ಸಂಪೂರ್ಣವಾಗಿ ಸುಳ್ಳು. ಜನಸಂಖ್ಯಾ ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಮತ್ತು ಇತರ ರಾಜ್ಯಗಳು ತಮ್ಮ ಜನಸಂಖ್ಯಾ ಬೆಳವಣಿಗೆ ಕಡಿಮೆಯಾಗಿದ್ದರು ಸಹ, ಯಾವುದೇ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ. ದಕ್ಷಿಣದ ರಾಜ್ಯಗಳ ಈ ಕಳವಳವನ್ನು ದೂರ ಮಾಡಲು ಸಂಸತ್ತು ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.

ಮಹಿಳಾ ಸಬಲೀಕರಣವೇ ಗುರಿ:

‘ನಮ್ಮ ಸರ್ಕಾರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಖಚಿತಪಡಿಸಿದೆ. ಏ.16ರಿಂದ 18ರವರೆಗೆ, ನಾರಿ ಶಕ್ತಿ ವಂದನ ಕಾಯ್ದೆಯ ಕುರಿತು ಚರ್ಚಿಸಲು ಮತ್ತು ಅದನ್ನು ಮುಂದುವರಿಸಲು ಸಂಸತ್ತು ಮತ್ತೆ ಸಭೆ ಸೇರಲಿದೆ. 2029ರಿಂದ ಸಂಸತ್ತಿನಲ್ಲಿ ಶೇ.33ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಖಚಿತಪಡಿಸುವುದು ನಮ್ಮ ಗುರಿ. ಎನ್‌ಡಿಎ ನೀತಿಗಳ ಅತಿದೊಡ್ಡ ಫಲಾನುಭವಿಗಳು ಮಹಿಳೆಯರು. ಮಹಿಳಾ ಸಬಲೀಕರಣ ಮತ್ತು ಪ್ರಾತಿನಿಧ್ಯ ನಮ್ಮ ಆದ್ಯತೆಯಾಗಿದೆ. ಮಹಿಳೆಯರ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡಿದ್ದೇವೆ’ ಎಂದು ತಿಳಿಸಿದರು.

ಮೋದಿ ಹೀಗೆ ಹೇಳಿದ್ದು ಏಕೆ?

- ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಲು ಮುಂದಾಗಿದೆ

- ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಸೀಟುಗಳು ಕಡಿತ ಆಗಲಿವೆ

- ಜನಸಂಖ್ಯಾ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದೇ ಇದಕ್ಕೆ ಕಾರಣ ಎಂಬ ವಾದ

- ಆ ರೀತಿ ಆಗುವುದಿಲ್ಲ. ಎಲ್ಲ ರಾಜ್ಯಗಳ ಲೋಕಸಭೆ ಸೀಟು ಹೆಚ್ಚಳ ಮಾಡುತ್ತೇವೆ: ಪಿಎಂ

ಸ್ಥಾನ ಕಡಿತ ವದಂತಿ

ಜನಸಂಖ್ಯೆ ನಿಯಂತ್ರಣಾ ನೀತಿಯನ್ನು ಯಶಸ್ವಿಯಾಗಿ ಕೈಗೊಂಡ ಕಾರಣ ದಕ್ಷಿಣದ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತವೆ ಎಂಬ ವದಂತಿ ಹರಡಲಾಗುತ್ತಿದೆ. ಆದರೆ ಇದು ಸಂಪೂರ್ಣವಾಗಿ ಸುಳ್ಳು.

- ನರೇಂದ್ರ ಮೋದಿ, ಪ್ರಧಾನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್
ಚುನಾವಣಾ ಪ್ರಚಾರ ಮುಗಿಸಿ ಮರಳುವಾದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾರು ಅಪಘಾತ, ತೆಲೆಗೆ ಗಾಯ