ಗುಣಮುಖರಾದವರಿಗೆ ಲಸಿಕೆ ಬೇಡ, ಎಲ್ಲರಿಗೂ ವ್ಯಾಕ್ಸಿನ್ ಹಾಕೋದು ನಿಲ್ಲಿಸಿ!

Published : Jun 12, 2021, 08:42 AM IST
ಗುಣಮುಖರಾದವರಿಗೆ ಲಸಿಕೆ ಬೇಡ, ಎಲ್ಲರಿಗೂ ವ್ಯಾಕ್ಸಿನ್ ಹಾಕೋದು ನಿಲ್ಲಿಸಿ!

ಸಾರಾಂಶ

* ಗುಣಮುಖರಾದವರಿಗೆ ಲಸಿಕೆ ಬೇಡ ಎಲ್ಲರಿಗೂ ಲಸಿಕೆ ಹಾಕೋದು ನಿಲ್ಲಿಸಿ * ರಿಸ್ಕ್‌ ಇರುವವರಿಗೆ ಆದ್ಯತೆ ಕೊಡಬೇಕು: ತಜ್ಞರು * ಮನಬಂದಂತೆ ಲಸಿಕೆ ಹಾಕುವುದರಿಂದ ರೂಪಾಂತರಿ ಕೊರೋನಾ ಅಬ್ಬರಿಸೀತು * ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರಿಂದ ಪ್ರಧಾನಿ ನರೇಂದ್ರ ಮೋದಿಗೆ ವರದಿ

ನವದೆಹಲಿ(ಜೂ.12): ಕೊರೋನಾ ಲಸಿಕೆ ಪಡೆಯಲು ದೇಶಾದ್ಯಂತ ಪರದಾಡುವ ಸ್ಥಿತಿ ಇರುವಾಗಲೇ ಸಾಮೂಹಿಕವಾಗಿ, ಮನಬಂದಂತೆ ಹಾಗೂ ಅಪೂರ್ಣ ರೀತಿಯಲ್ಲಿ ಲಸಿಕೆ ವಿತರಣೆ ಮಾಡುವುದರಿಂದ ರೂಪಾಂತರಿ ಕೊರೋನಾದ ಅಬ್ಬರ ಆರಂಭವಾದೀತು ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಒಂದಷ್ಟುತಜ್ಞರು ಎಚ್ಚರಿಕೆ ಗಂಟೆ ಮೊಳಗಿಸಿದ್ದಾರೆ.

ದುರ್ಬಲರು ಹಾಗೂ ಅಪಾಯದಂಚಿನಲ್ಲಿರುವವರಿಗೆ ಮೊದಲು ಲಸಿಕೆ ನೀಡುವುದು ನಮ್ಮ ಗುರಿಯಾಗಬೇಕೆ ಹೊರತು ಮಕ್ಕಳೂ ಸೇರಿದಂತೆ ದೇಶದ ಎಲ್ಲ ಜನರಿಗೂ ಲಸಿಕೆ ನೀಡುವುದಲ್ಲ. ಈಗಾಗಲೇ ಕೊರೋನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವವರಿಗೆ ಲಸಿಕೆಯ ಅಗತ್ಯವಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ. ರಾಷ್ಟ್ರೀಯ ಕೊರೋನಾ ಕಾರ್ಯಪಡೆಯ ಸದಸ್ಯರು ಹಾಗೂ ದೆಹಲಿಯ ಏಮ್ಸ್‌ ವೈದ್ಯರು ಸೇರಿದಂತೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ವಿವಿಧ ಪರಿಣತರು ಈ ಕುರಿತು ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ರವಾನಿಸಿದ್ದಾರೆ.

ವರದಿಯಲ್ಲೇನಿದೆ?

1. ಸಾಗಣೆ ಹಾಗೂ ಸಾಂಕ್ರಾಮಿಕ ರೋಗ ದತ್ತಾಂಶಗಳ ಮಾರ್ಗದರ್ಶನದೊಂದಿಗೆ ಲಸಿಕೆ ಅಭಿಯಾನ ನಡೆಸಬೇಕು. ಅದು ಬಿಟ್ಟು ಈ ಹಂತದಲ್ಲಿ ಎಲ್ಲರಿಗೂ ಲಸಿಕೆ ನೀಡುವುದು ಸಲ್ಲದು. ಎಲ್ಲ ವಯೋಮಾನದವರಿಗೂ ಲಸಿಕೆ ನೀಡಲು ಆರಂಭಿಸಿದರೆ ಮಾನವ ಹಾಗೂ ಇತರೆ ಸಂಪನ್ಮೂಲಗಳು ವ್ಯರ್ಥವಾಗುತ್ತವೆ. ಮಕ್ಕಳು ಹಾಗೂ ವಯಸ್ಕರಿಗೆ ಲಸಿಕೆ ನೀಡಬೇಕು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಯೋಜಿತವಲ್ಲದ ರೀತಿಯಲ್ಲಿ ಲಸಿಕೆ ನೀಡುವುದು ರೂಪಾಂತರಿ ಕೊರೋನಾಕ್ಕೆ ಎಡೆ ಮಾಡಿಕೊಟ್ಟೀತು.

2. ಕೊರೋನಾದಿಂದ ಗುಣಮುಖರಾದವರಿಗೆ ಲಸಿಕೆಯ ಅಗತ್ಯವಿಲ್ಲ. ಸ್ವಾಭಾವಿಕವಾಗಿ ಸೋಂಕಿತರಾದವರಿಗೆ ಲಸಿಕೆ ಪರಿಣಾಮಕಾರಿ ಎಂಬ ಸಾಕ್ಷ್ಯವನ್ನು ಸಂಗ್ರಹಿಸಿದ ಬಳಿಕವಷ್ಟೇ ಲಸಿಕೆ ನೀಡಬೇಕು. ಡೆಲ್ಟಾದಂತಹ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿ ಹೆಚ್ಚು ಹೆಚ್ಚು ಸೋಂಕಿತರು ಕಂಡುಬರುತ್ತಿದ್ದರೆ ಅಂತಹ ಪ್ರದೇಶಗಳಲ್ಲಿ ಕೋವಿಶೀಲ್ಡ್‌ ಎರಡನೇ ಡೋಸ್‌ ಲಸಿಕೆ ಪಡೆಯುವ ಅಂತರವನ್ನು ತಗ್ಗಿಸಬೇಕು.

3. ಕೊರೋನಾ ವೈರಸ್‌ ವಿರುದ್ಧ ಲಸಿಕೆ ಎಂಬುದು ಬಲಿಷ್ಠ ಹಾಗೂ ಶಕ್ತಿಶಾಲಿ ಅಸ್ತ್ರ. ಎಲ್ಲ ಬಲಿಷ್ಠ ಅಸ್ತ್ರಗಳಂತೆಯೇ ಇದನ್ನು ತಡೆಹಿಡಿಯಬಾರದು ಅಥವಾ ಮನಬಂದಂತೆ ಬಳಸಲೂ ಬಾರದು. ಅಗ್ಗದ ದರದಲ್ಲಿ ಗರಿಷ್ಠ ಅನುಕೂಲ ಪಡೆಯಲು ಅತ್ಯಂತ ಯೋಜಿತ ರೀತಿಯಲ್ಲಿ ಈ ಶಸ್ತ್ರ ಉಪಯೋಗಿಸಬೇಕು.

4. ಎಲ್ಲ ವಯಸ್ಕರಿಗೂ ಲಸಿಕೆ ನೀಡಬೇಕು ಎಂಬುದು ಸರಿ. ಆದರೆ ದೇಶದಲ್ಲಿ ಕೊರೋನಾ ಅಬ್ಬರದ ನಡುವೆ ಲಸಿಕೆಯ ಲಭ್ಯತೆ ಕಡಿಮೆ ಇದೆ ಎಂಬುದು ವಾಸ್ತವ. ಇಂತಹ ಸಂದರ್ಭದಲ್ಲಿ ಸಾವು ಕಡಿಮೆ ಮಾಡುವುದು ನಮ್ಮ ಆದ್ಯತೆಯಾಗಬೇಕು. ಸಾವು ಹೆಚ್ಚಾಗಿ ಕಂಡುಬರುತ್ತಿರುವುದು ವಯೋವೃದ್ಧರು ಹಾಗೂ ಪೂರ್ವ ರೋಗ ಹೊಂದಿರುವವರು ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ. ಈಗಿನ ಪರಿಸ್ಥಿತಿಯಲ್ಲಿ ಯುವಕರಿಗೆ ಲಸಿಕೆ ನೀಡುವುದು ಆರ್ಥಿಕ ದೃಷ್ಟಿಯಿಂದಲೂ ಒಳ್ಳೆಯ ನಡೆಯಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ